ಎಸ್ಟಿಪಿ-ಟಿಎಸ್ಪಿ ಕಾಯ್ದೆ ಕಲಂ 7 ‘ಡಿ’ ರದ್ದತಿಗೆ ಒತ್ತಾಯ
ಪರಿಶಿಷ್ಟರ ಅನುದಾನ ಅನ್ಯ ಕಾರ್ಯಕ್ಕೆ ಬಳಕೆ

ದಲಿತ ಮುಖಂಡರೊಂದಿಗೆ ಸಿಎಂ ಸಮಾಲೋಚನೆ
ಬೆಂಗಳೂರು, ಮಾ. 11: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಡಗಗಳ ಉಪ ಯೋಜನೆ (ಎಸ್ಟಿಪಿ-ಟಿಎಸ್ಪಿ) ಕಾಯ್ದೆಯಲ್ಲಿನ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನ ಅನ್ಯ ಕಾರ್ಯಗಳಿಗೆ ವರ್ಗಾವಣೆಗೆ ಅವಕಾಶ ನೀಡುವ ಕಲಂ 7‘ಡಿ’ ರದ್ದುಪಡಿಸಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಮನವಿ ಮಾಡಿದ್ದಾರೆ.
ಶುಕ್ರವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ‘ಬಜೆಟ್’ ಸಿದ್ಧತೆ ಅಂಗವಾಗಿ ಸಿಎಂ ಸಿದ್ದರಾಮಯ್ಯ, ದಲಿತ ಸಂಘಟನೆಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಮುಖಂಡರಾದ ಡಾ.ಸಿದ್ದಲಿಂಗಯ್ಯ, ಮಾವಳ್ಳಿ ಶಂಕರ್, ಶ್ರೀಧರ ಕಲಿವೀರ, ಅಣ್ಣಯ್ಯ, ಲಕ್ಷ್ಮೀನಾರಾಯಣ ನಾಗವಾರ, ಇಂದಿರಾ ಕೃಷ್ಣಪ್ಪ, ವೆಂಕಟಸ್ವಾಮಿ, ಎನ್. ಮೂರ್ತಿ, ಮಾರಪ್ಪ, ಕೆ.ಬಿ.ಸಿದ್ಧಯ್ಯ, ಸಿ.ಜಿ.ಶ್ರೀನಿವಾಸನ್, ಮಾರಸಂದ್ರ ಮುನಿಯಪ್ಪ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.
ಎಸ್ಸಿ-ಎಸ್ಟಿ ವಿಶೇಷ ಘಟಕ ಯೋಜನೆ ಅನುಷ್ಠಾನಕ್ಕೆ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಬೇಕು. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ನಿರ್ಲಕ್ಷಿಸುವ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಬೇಕು. ವಿಶೇಷ ಘಟಕ ಯೋಜನೆ ಕಾಯ್ದೆಗೆ ಕೂಡಲೇ ನಿಯಮಾವಳಿ ರೂಪಿಸಬೇಕು. ದಲಿತರ ರಕ್ಷಣೆಗೆ ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಲಾಗಿದೆ.
ಕೃತಿ ಮುದ್ರಣ: ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ವರ್ಷಾಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡಬೇಕು. ಅಲ್ಲದೆ, ನಮ್ಮ ಮೆಟ್ರೋ ನಿಲ್ದಾಣಕ್ಕೆ ಅಂಬೇಡ್ಕರ್ ಹೆಸರಿಡಬೇಕು. ಅಂಬೇಡ್ಕರ್ ಅವರ ಬದುಕು-ಬರಹ ಕೃತಿಗಳನ್ನು ತ್ವರಿತವಾಗಿ ಮುದ್ರಣ ಮಾಡಬೇಕೆಂದು ಮುಖಂಡರು ಒತ್ತಾಯಿಸಿದ್ದಾರೆ.
ಬಗರ್ ಹುಕುಂ ಸಾಗುವಳಿಯಡಿ ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸಿರುವ ಪರಿಶಿಷ್ಟರಿಗೆ ತ್ವರಿತವಾಗಿ ಭೂ ಮಂಜೂರಾತಿ, ಅಂತರ್ಜಾತಿ ವಿವಾಹಿತರಿಗೆ ಹೆಚ್ಚಿನ ಪ್ರೋತ್ಸಾಹ, ಕುದ್ಮಲ್ ರಂಗರಾವ್, ಬಿ.ಬಸವಲಿಂಗಪ್ಪ, ಬಿ.ಕೃಷ್ಣಪ್ಪ ಸ್ಮಾರಕ ಅಭಿವೃದ್ಧಿಗೆ ನೆರವು ನೀಡಬೇಕು ಎಂದು ಕೋರಲಾಗಿದೆ.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಕನಿಷ್ಠ 5 ಸಾವಿರ ಕೋಟಿ ರೂ.ಅನುದಾನ ನೀಡಬೇಕು. ಪರಿಶಿಷ್ಟ ಉದ್ಯಮಿಗಳಿಗೆ ಕೆಐಎಡಿಬಿಯಿಂದ ಭೂಮಿ ಮಂಜೂರು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಿಂದ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ.
ವೃತ್ತಿ ಶಿಕ್ಷಣ ಕೋರ್ಸ್ ಪ್ರವೇಶಕ್ಕೆ ಪರಿಶಿಷ್ಟರಿಗೆ ನಿಗದಿಪಡಿಸಿರುವ ಆದಾಯದ ಮಿತಿಯನ್ನು ಹೆಚ್ಚಳ ಮಾಡಬೇಕು. ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ಯೋಜನೆ, ವಸತಿ ಶಾಲೆ ಹಾಗೂ ಹಾಸ್ಟೆಲ್ಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ದಲಿತ ಮುಖಂಡರು ಸಲ್ಲಿಸಿದ್ದಾರೆ.
ಬೆಳಗ್ಗೆ 11:15ರಿಂದ ಮೂರು ಗಂಟೆಗಳಿಗೂ ಹೆಚ್ಚು ಕಾಲ ದಲಿತ ಸಂಘಟನೆಗಳ ಮುಖಂಡ ರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನ್ಯಾಯಯುತ ಬೇಡಿಕೆಗಳನ್ನು ಆಯವ್ಯಯದಲ್ಲಿ ಈಡೇರಿಸುವ ಭರವಸೆ ನೀಡಿದ್ದಾರೆಂದು ಗೊತ್ತಾಗಿದೆ.





