ಉಪ್ಪಿನಂಗಡಿ: ತುಳುನಾಡಿನ ಆರಾಧನೆ, ಜನಪದ ಸಂಸ್ಕೃತಿಗೆ ಅನ್ಯಾಯವಾದರೆ ಹೋರಾಟಕ್ಕೆ ಸಿದ್ದ- ಸಂಸದ ನಳಿನ್
.jpg)
ಉಪ್ಪಿನಂಗಡಿ: ತುಳುನಾಡ ಸಂಸ್ಕೃತಿಯಲ್ಲಿ ದೈವಾರಾಧನೆ, ನಾಗರಾಧನೆ ಎಷ್ಟು ಶ್ರೇಷ್ಟವೋ ಇಲ್ಲಿನ ಜನಪದ ಕ್ರೀಡೆಯಾದ ಕಂಬಳವೂ ಅಷ್ಟೇ ಶ್ರೇಷ್ಟ್ರತೆಯನ್ನು ಪಡೆದಿದೆ. ತುಳುನಾಡಿನ ಆರಾಧನಾ ಪದ್ಧತಿ, ಪರಿಸರ, ಜನಪದೀಯ ಸಂಸ್ಕೃತಿಗೆ ಅನ್ಯಾಯವಾದರೆ, ಇದರ ವಿರುದ್ಧ ಹೋರಾಟ ನಡೆಸಲು ಸದಾ ಸಿದ್ಧನಿದ್ದೇನೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಇಲ್ಲಿನ ಹಳೆಗೇಟು ದಡ್ಡುವಿನ ನೇತ್ರಾವತಿ ನದಿ ಕಿನಾರೆಯಲ್ಲಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರ ಸಾರಥ್ಯದಲ್ಲಿ ಶನಿವಾರ ನಡೆದ ಹೊನಲು ಬೆಳಕಿನ ವಿಜಯ- ವಿಕ್ರಮ ಕಂಬಳದ ಪ್ರಯುಕ್ತ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಬಿಜೆಪಿಯ ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಂಬಳಕ್ಕೆ ಒಂದು ಕೋಟಿ ರೂಪಾಯಿ ಅನುದಾನವೊದಗಿಸಿದ್ದರು. ಇದೇ ರೀತಿ ಬೇರೆ ಸರಕಾರಗಳು ಕಂಬಳಕ್ಕೆ ಅನುದಾನ ನೀಡಬೇಕು. ಈ ಮೂಲಕ ತುಳುನಾಡಿನ ಜನಪದ ಕ್ರೀಡೆಯನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದ ಅವರು, ಕಂಬಳ ಕೋಣಗಳಿಗೆ ಶಿಕ್ಷೆ ನೀಡುವುದಿಲ್ಲ. ಅದರ ಬದಲಾಗಿ ಶಿಕ್ಷಣ ನೀಡಲಾಗುತ್ತದೆ. ದಡ್ಡನಾಗಿರವ ಕೋಣನನ್ನು ಜಾಣನಾಗಿ ಪರಿವರ್ತಿಸಲಾಗುತ್ತದೆ. ಇದು ತುಳುವರ ದೊಡ್ಡ ಗುಣವಾಗಿದ್ದು, ಕಂಬಳ ಕ್ರೀಡೆಗೆ ರಾಷ್ಟ್ರೀಯ ಸ್ಥಾನಮಾನ ನೀಡಲು ಸದನದಲ್ಲಿ ಧ್ವನಿಯೆತ್ತುವುದಾಗಿ ತಿಳಿಸಿದರು. ಮಂಗಳೂರು ವಿವಿಯ ಕುಲಪತಿ ಡಾ. ಬೈರಪ್ಪ ಮಾತನಾಡಿ, ಕಂಬಳದಲ್ಲಿ ತುಳುನಾಡ ಮಣ್ಣಿನ ಜನಪದ ಕಲೆಯಾಗಿದ್ದು, ಇದರಿಂದಾಗಿ ಕಂಬಳವು ಜಾತ್ರೆಯ ವಾತಾವರಣ ನಿರ್ಮಿಸುತ್ತದೆ. ನಾನು ತಿಳಿದ ಹಾಗೆ ಕಂಬಳದಲ್ಲಿ ಕೋಣಗಳಿಗೆ ಹಿಂಸೆ ನೀಡಲಾಗುತ್ತಿಲ್ಲ. ಆದ್ದರಿಂದ ಕಂಬಳ ನಿಷೇಧ ತೀರ್ಮಾನ ತಪ್ಪು ಎಂದು ಅಭಿಪ್ರಾಯಿಸಿದರು.
ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರು ಮಾತನಾಡಿ, ಕಂಬಳವೆನ್ನುವುದು ರೈತಾಪಿ ವರ್ಗದ ಕ್ರೀಡೆಯಾಗಿದ್ದು, ಇದು ಹಣ ಮಾಡುವ ದಂಧೆಯಲ್ಲ. ಇಲ್ಲಿ ಕೋಣಗಳ ಯಜಮಾನನಿಗೆ ಸಿಗುವುದು ಕೇವಲ ಗೌರವ ಮಾತ್ರ. ಆದರೆ ಕಂಬಳವೇನೆಂದು ಅರಿಯದ ಕೆಲವರು ಇದರ ನಿಷೇಧಕ್ಕೆ ಹೊರಟಿದ್ದು, ಈ ಮೂಲಕ ತುಳುವರ ಭಾವನೆಯನ್ನು ಕೆರಳಿಸಿದರೆ ಛಡಿಯೇಟಿನ ಪ್ರತ್ಯುತ್ತರ ನೀಡಲು ಅವರು ಸಿದ್ಧರಿದ್ದಾರೆ ಎಂದು ಕಂಬಳ ನಿಷೇಧಕ್ಕೆ ಯತ್ನಿಸುವವರಿಗೆ ಎಚ್ಚರಿಕೆ ನೀಡಿದರಲ್ಲದೆ, ಕಂಬಳಕ್ಕೆ ತಡೆಯುಂಟಾದರೆ ಸುಪ್ರೀಂಕೋರ್ಟ್ ತನಕ ಕಾನೂನಾತ್ಮಕ ಹೋರಾಟ ನಡೆಸಲೂ ಸಿದ್ಧ ಎಂದರು.
ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಒಂದು ಕೋಟಿ ರೂಪಾಯಿ ಕಂಬಳಕ್ಕೆ ಬಿಡುಗಡೆಗೊಳಿಸಿದ್ದರು. ಅದರಲ್ಲಿ 76 ಲಕ್ಷ ರೂಪಾಯಿ ಇನ್ನೂ ಜಿಲ್ಲಾಧಿಕಾರಿ ಕಚೇರಿಯಲ್ಲೇ ಇದ್ದು, ಈಗಿನ ಸರಕಾರ ಹೊಸದಾಗಿ ಅನುದಾನ ನೀಡದಿದ್ದರೂ, ಬಿಜೆಪಿ ಸರಕಾರ ಹಿಂದೆ ಬಿಡುಗಡೆಗೊಳಿಸಿದ ಅನುದಾನವನ್ನಾದರೂ ನೀಡಲಿ ಎಂದು ಅಶೋಕ್ ಕುಮಾರ್ ರೈ ತಿಳಿಸಿದರು. ಜಿಲ್ಲಾ ಎಸ್ಸಿಡಿಸಿಸಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುಗುತ್ತು, ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ, ಕಂಬಳದ ತೀರ್ಪುಗಾರ ಎಂ. ಎಡ್ತೂರು ರಾಜೀವ ಶೆಟ್ಟಿ, ಅಮ್ಟೂರು ಬಾರಿಕೆ ರಾಜಗೋಪಾಲ್ ರೈ, ಕಂಬಳ ನಿಷೇಧದ ತೀರ್ಮಾನ ಯಾವುದೇ ಕಾರಣಕ್ಕೂ ಸರಿಯಲ್ಲ. ಕಂಬಳಕ್ಕೆ ಸರಕಾರ ಪ್ರೋತ್ಸಾಹ ನೀಡಬೇಕಾಗಿದ್ದು, ಕಂಬಳದ ಉಳಿವಿಗೆ ಅಕಾಡಮಿ ರಚಿಸಬೇಕು ಎಂದರು.
ವೇದಿಕೆಯಲ್ಲಿ ಉದ್ಯಮಿಗಳಾದ ಯು.ಪಿ.ವರ್ಗಿಸ್, ತಿಮ್ಮಯ್ಯ ಶೆಟ್ಟಿ, ರೋಬೋ ಸಿಲಿಕಾನ್ ಪ್ರೈ ಲಿ.ನ ಉತ್ಪಾದನಾ ಮೆನೇಜರ್ ಪಡ್ಯೋಟ್ಟು ವಿಶ್ವನಾಥ ಶೆಟ್ಟಿ, ತಣ್ಣೀರುಪಂಥ ಗ್ರಾಮ ಪಂಚಾಯತ್ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೇಶವ ಗೌಡ ಬಜತ್ತೂರು, ತಾಲೂಕು ಪಂಚಾಯತ್ ಸದಸ್ಯ ಲಕ್ಷಣ ಗೌಡ ಬೆಳ್ಳಿಪ್ಪಾಡಿ, ಭಂಡಾರಿ ಸಮಾಜ ಮಹಾಮಂಡಲದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಡ್ಯಾಶ್ ಮಾರ್ಕೆಟಿಂಗ್ನ ಮಾಲಕ ಪುಷ್ಪರಾಜ್ ಶೆಟ್ಟಿ, ಕ್ವಾಲಿಟಿ ಫಾಮ್ಸ್ನ ಗಂಗಾಧರ ಶೆಟ್ಟಿ ಮಠಂತಬೆಟ್ಟು, ಉದ್ಯಮಿ ರಮೇಶ್ ರೈ ಡಿಂಬ್ರಿ, ಜಿಲ್ಲಾ ಕಂಬಳ ಸಮಿತಿಯ ಕೋಶಾಧಿಕಾರಿ ಪಿ.ಆರ್. ಶೆಟ್ಟಿ, ಶಿವಪ್ರಸಾದ್ ರೈ ಮಠಂತಬೆಟ್ಟು ಕೋಡಿಂಬಾಡಿ, ಉಪ್ಪಿನಂಗಡಿ ವಿಜಯ- ವಿಕ್ರಮ ಕಂಬಳ ಸಮಿತಿಯ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪಾಡಿ ಕೈಪ, ಆದರ್ಶ ಕಜೆಕ್ಕಾರು, ಚಂದ್ರಶೇಖರ ಮಡಿವಾಳ, ರಾಮಚಂದ್ರ ಮಣಿಯಾಣಿ, ದಿಲೀಪ್ ಕರಾಯ, ವಿಠಲ ರೈ ಕೊಲ್ಲೊಟ್ಟು, ವಿಶ್ವನಾಥ ಶೆಟ್ಟಿ ಕಂಗ್ವೆ ಮತ್ತಿತರರು ಉಪಸ್ಥಿತರಿದ್ದರು.
ವಿಜಯ-ವಿಕ್ರಮ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಪಿ.ಕುಶಾಲಪ್ಪ ಗೌಡ ಪೂವಾಜೆ ಸ್ವಾಗತಿಸಿದರು. ಮೋಹನ್ ಪಕಳ ವಂದಿಸಿದರು. ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.







