ಸರ್ವಿಸಸ್ ಮಡಿಲಿಗೆ ಸಂತೋಷ್ ಫುಟ್ಬಾಲ್ ಟ್ರೋಫಿ

ನಾಗ್ಪುರ, ಮಾ.13: ಅರ್ಜುನ್ ಬಾರಿಸಿದ ಅವಳಿ ಗೋಲಿನ ನೆರವಿನಿಂದ ಸರ್ವಿಸಸ್ ತಂಡ ಸಂತೋಷ್ ಟ್ರೋಫಿ ನ್ಯಾಶನಲ್ ಫುಟ್ಬಾಲ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ.
ರವಿವಾರ ಇಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸರ್ವಿಸಸ್ ತಂಡ ಆತಿಥೇಯ ಮಹಾರಾಷ್ಟ್ರ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿತು. ಕಳೆದ ವರ್ಷ ಸ್ಯಾಫ್ ಕಪ್ನ ರಾಷ್ಟ್ರೀಯ ಶಿಬಿರದಲ್ಲಿ ಭಾಗವಹಿಸಿದ್ದ ಅರ್ಜುನ್ 11 ನಿಮಿಷಗಳ ಅಂತರದಲ್ಲಿ ಎರಡು ಗೋಲು (26 ಹಾಗೂ 37ನೆ ನಿಮಿಷ) ಬಾರಿಸಿದರು.
ಈ ಮೂಲಕ ಸರ್ವಿಸಸ್ ತಂಡ ಐದನೆ ಬಾರಿ ಸಂತೋಷ್ ಟ್ರೋಫಿ ಜಯಿಸಲು ನೆರವಾದರು. ಮಹಾರಾಷ್ಟ್ರದ ಪರ ಮುಹಮ್ಮದ್ ಶಾಬಾಝ್ 15ನೆ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದ್ದರು.
ಸರ್ವಿಸಸ್ ವಿಜೇತ ಟ್ರೋಫಿಯೊಂದಿಗೆ 5 ಲಕ್ಷ ರೂ.ವನ್ನು ಹಾಗೂ ಮಹಾರಾಷ್ಟ್ರ ರನ್ನರ್ಸ್-ಅಪ್ ಟ್ರೋಫಿಯೊಂದಿಗೆ 3 ಲಕ್ಷ ರೂ. ಪಡೆದಿದೆ.
Next Story





