ದೂರನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡದೆ ವಜಾಗೊಳಿಸುವುದು ಕಾನೂನು ಬಾಹಿರ
ಹೊಸದಿಲ್ಲಿ,ಮಾ.13: ದೂರುದಾರನಿಗೆ ತನ್ನ ದೂರನ್ನು ಸಮರ್ಥಿಸಿಕೊಳ್ಳುವ ಸಾಕ್ಷವನ್ನು ಸಲ್ಲಿಸುವ ಯಾವುದೇ ಅವಕಾಶ ನೀಡದೇ ದೂರನ್ನು ವಜಾಗೊಳಿಸುವುದು ಕಾನೂನುಬದ್ಧವಲ್ಲ ಮತ್ತು ತಾರ್ಕಿಕವೂ ಅಲ್ಲ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ದಿಲ್ಲಿಯ ಸೆಷನ್ಸ್ ನ್ಯಾಯಾಲಯವೊಂದು ಸುಳ್ಳು ಒಬಿಸಿ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ ಎಂದು ಐಎಎಸ್ ಅಧಿಕಾರಿಯೋರ್ವರ ವಿರುದ್ಧದ ದೂರಿಗೆ ಸಂಬಂಧಿಸಿದಂತೆ ಸಕಾರಣವಾದ ಆದೇಶವನ್ನು ಹೊರಡಿಸುವಂತೆ ದೂರಿನ ವಿಚಾರಣೆ ನಡೆಸಿದ್ದ ಮಹಾನಗರ ನ್ಯಾಯಾಲಯಕ್ಕೆ ಸೂಚಿಸಿದೆ.
ಅಧಿಕಾರಿ ಮತ್ತು ಇತರರ ವಿರುದ್ಧದ ದೂರನ್ನು ವಜಾ ಗೊಳಿಸಿರುವ ಆದೇಶದಲ್ಲಿ ಮಹಾನಗರ ನ್ಯಾಯಾಧೀಶರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಆತುರದ್ದಾಗಿವೆ ಮತ್ತು ದೂರುದಾರನಿಗೆ ತನ್ನ ದೂರನ್ನು ಸಮರ್ಥಿಸಿಕೊಳ್ಳಲು ಸಮನ್ಸ್ ಪೂರ್ವ ಹೇಳಿಕೆಯನ್ನು ಮಂಡಿಸಲು ಅವಕಾಶ ನಿಡಬೇಕಾಗಿತ್ತು ಎಂದು ವಿಶೇಷ ನ್ಯಾಯಾಧೀಶರಾದ ಅಂಜು ಬಜಾಜ್ ಚಂದ್ನಾ ಹೇಳಿದರು.
ಐಎಎಸ್ ಅಧಿಕಾರಿ ಮತ್ತು ಇತರ ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ತನ್ನ ದೂರನ್ನು ವಜಾಗೊಳಿಸಿದ್ದ ಮಹಾನಗರ ನ್ಯಾಯಾಲಯದ ಕಳೆದ ವರ್ಷದ ಆದೇಶವನ್ನು ದಿಲ್ಲಿ ನಿವಾಸಿ ಮಹೇಶ ಕುಮಾರ್ ಪ್ರಶ್ನಿಸಿದ್ದಾರೆ.
ಐಎಎಸ್ ಅಧಿಕಾರಿ ಸುಳ್ಳು ಒಬಿಸಿ ಪ್ರಮಾಣಪತ್ರವನ್ನು ಸಲ್ಲಿಸಿ ನೌಕರಿಗೆ ಸೇರ್ಪಡೆಗೊಂಡಿದ್ದಾರೆ ಮತ್ತು ಅವರ ತಂದೆ ತನ್ನ ಅಫಿದಾವಿತ್ನಲ್ಲಿ ತನ್ನ ನಿಜವಾದ ಆದಾಯ ಮತ್ತು ಸ್ಥಿತಿಯನ್ನು ಬಚ್ಚಿಟ್ಟಿದ್ದಾರೆ ಎಂದು ಕುಮಾರ್ ಆರೋಪಿಸಿದ್ದರು.
ಸೂಕ್ತ ಪರಿಶೀಲನೆಯ ನಂತರವೇ ಒಬಿಸಿ ಪ್ರಮಾಣ ಪತ್ರವನ್ನು ನೀಡಲಾಗಿದ್ದ ಆಧಾರದಲ್ಲಿ ಮಹಾನಗರ ನ್ಯಾಯಾ ಧೀಶರು ಕುಮಾರ್ ಅವರ ದೂರನ್ನು ವಜಾಗೊಳಿಸಿದ್ದರು.
ವಿಚಾರಣಾ ನ್ಯಾಯಾಲಯವು ಸರಕಾರಿ ನೌಕರನ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂಬ ಮನವಿಯನ್ನು ತಿರಸ್ಕರಿಸಿರುವುದು ಸರಿಯಾಗಿಯೇ ಇದೆ. ಆದರೆ ದೂರನ್ನು ವಜಾಗೊಳಿಸುವ ಮುನ್ನ ಸಿಆರ್ಪಿಸಿಯ ಕಲಂ 200ರಡಿ ದೂರುದಾರನಿಗೆ ಸಮನ್ಸ್ ಪೂರ್ವ ಹೇಳಿಕೆಯನ್ನು ನೀಡಲು ಅವಕಾಶ ನೀಡಬೇಕಾಗಿತ್ತು ಎಂದು ಸೆಷನ್ಸ್ ನ್ಯಾಯಾಲಯವು ಸ್ಪಷ್ಟಪಡಿಸಿತು.
ಕುಮಾರ್ ಸಲ್ಲಿಸಿರುವ ಪುನರ್ಪರಿಶೀಲನೆ ಅರ್ಜಿಯನ್ನು ಪುರಸ್ಕರಿಸಿದ ಸೆಷನ್ಸ್ ನ್ಯಾಯಾಲಯವು ಅರ್ಜಿದಾರನಿಗೆ ತನ್ನ ದೂರನ್ನು ಸಮರ್ಥಿಸಿಕೊಳ್ಳಲು ಸಮನ್ಸ್ ಪೂರ್ವ ಹೇಳಿಕೆಯನ್ನು ಸಲ್ಲಿಸಲು ಅವಕಾಶ ನೀಡಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.





