ದ.ಕ. ಜಿಲ್ಲೆಯ ಜನತೆ ನೀರು ಕೊಡಲು ಸಿದ್ಧ: ಸಚಿವ ಖಾದರ್
ಮಂಗಳೂರು, ಮಾ. 13: ಎತ್ತಿನಹೊಳೆ ಯೋಜನೆಯ ಬಗ್ಗೆ ದ.ಕ. ಜಿಲ್ಲೆಯ ಜನರಲ್ಲಿ ಗೊಂದಲವಿದ್ದು, ಸಮಗ್ರ ಚರ್ಚೆ ನಡೆಯಬೇಕು. ಕೋಲಾರ ಸೇರಿದಂತೆ ಬಯಲು ಸೀಮೆಗೆ ದ.ಕ.ಜಿಲ್ಲೆಯ ಜನತೆ ನೀರು ಕೊಡಲು ಸಿದ್ದರಿದ್ದಾರೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ದ.ಕ. ಜಿಲ್ಲಾ ಘಟಕ ಮತ್ತು ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ನ 3ನೆ ವರ್ಷದ ಸಾಮಾಜಿಕ ಸೇವಾ ಕಾರ್ಯಕ್ರಮದಂಗವಾಗಿ ರವಿವಾರ ನಗರದ ಪುರಭವನದಲ್ಲಿ ಆಯೋಜಿಸಲಾಗಿದ್ದ ‘ಕನ್ನಡೋತ್ಸವ-2016’ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಾಣಿಲ ಕ್ಷೇತ್ರದ ಮೋಹನದಾಸ ಸ್ವಾಮಿಜಿ ಹಾಗೂ ರಾಜ್ಯ ವಕ್ಫ್ ಬೋರ್ಡ್ ಸದಸ್ಯ ವೌಲಾನ ಶಾಫಿ ಸಅದಿ ಕಾರ್ಯಕ್ರಮ ಉದ್ಘಾಟಿಸಿದರು.
ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾ ಯಣಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ವತಿಯಿಂದ ಸಮಾಜದಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಹಾಗೂ ಪ್ರತಿಭೆಗಳಿಗೆ ಪ್ರೋತ್ಸಾಹಧನ ಮತ್ತು ಬಡ ರೋಗಿಗಳಿಗೆ ಚಿಕಿತ್ಸಾ ವೆಚ್ಚವನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಗರದ ಜ್ಯೋತಿ ವೃತ್ತದಿಂದ ಪುರಭವನದವರೆಗೆ ಸಾಂಸ್ಕೃತಿಕ ಮೆರವಣಿಗೆಯನ್ನು ಹಾಗೂ ರಾಜ್ಯ ಪ್ರಶಸ್ತಿ ವಿಜೇತ ತಂಡಗಳಿಂದ ಸಾಂಸ್ಕೃತಿಕ ನೃತ್ಯ ವೈಭವ ಹಾಗೂ ಕನ್ನಡ ಗಾನಸಿರಿ ಆಯೋಜಿಸಲಾಗಿತ್ತು.
ದಾಸ್ ಚಾರಿಟೇಬಲ್ ಟ್ರಸ್ಟಿಗಳಾದ ಅನಿಲ್ದಾಸ್, ಆಶಾಲತಾ ದಾಸ್, ಮೂಡ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್, ಸಮಾಜ ಸೇವಕ ಯಜ್ಞೇಶ್ ಬರ್ಕೆ, ಕರವೇ ಉಡುಪಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ತೇಗೂರು ಜಗದೀಶ್ ಅರಸು ಚಿಕ್ಕಮಗಳೂರು, ಕರವೇ ರಾಜ್ಯ ಪ್ರಧಾನ ಸಂಚಾಲಕ ಬಸವರಾಜು ಪಡುಕೋಟೆ, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಅಶ್ವಿನಿ ಗೌಡ, ರಾಜ್ಯ ಸಂಚಾಲಕಿ ಶಾರಿಕಾ, ಪ್ರಾಚಿ, ಚಲನಚಿತ್ರ ನಿರ್ಮಾಪಕ ಅಶು ಬಿದ್ರ, ನಟಿ ಮೇಘನಾ ಮೊದಲಾದವರು ಉಪಸ್ಥಿತರಿದ್ದರು.







