ಕಾರ್ಕಳ : ಮಾ.16ರಂದು ಪ್ರತಿಭಟನೆ-ಯುವಮೋರ್ಛಾ
ಕಾರ್ಕಳ : ಮೈಸೂರಿನಲ್ಲಿ ನಡೆದ ಬಿ.ಜೆ.ಪಿ ಮುಖಂಡ ರಾಜು ಅವರ ಹತ್ಯೆಯನ್ನು ಖಂಡಿಸಿ ಕಾರ್ಕಳ ಬಿ.ಜೆ.ಪಿ ಯುವಮೋರ್ಛಾ ವತಿಯಿಂದ ಕಾರ್ಕಳ ಬಸ್ಸು ನಿಲ್ದಾಣದಲ್ಲಿ ಮಾ.16ರಂದು ಮಧ್ಯಾಹ್ನ 3.30ಕ್ಕೆ ಪ್ರತಿಭಟನೆ ನಡೆಯಲಿದೆ ಎಂದು ಕಾರ್ಕಳ ಯುವಮೊರ್ಛಾ ಹೇಳಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಂದಿನಿಂದ ಬಿ.ಜೆ.ಪಿ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಈ ಹತ್ಯೆಗಳಿಗೆ ಸರಕಾರವೇ ನೇರ ಬೆಂಬಲಕ್ಕೆ ನಿಂತಿದೆ. ಸ್ವತಃ ಮುಖ್ಯಮಂತ್ರಿಗಳೇ ಹಿಂದೂ ಸಂಘಟನೆಗಳ ಮೇಲೆ ಹೋರಾಡಿ ಎಂದು ಬಹಿರಂಗ ಹೇಳಿಕೆ ನೀಡಿದ ಬಳಿಕ ಇಂತಹ ಪ್ರಕರಣಗಳು ಹೆಚ್ಚಾಗಿದೆ. ಇದಕ್ಕೆ ಮುಖ್ಯಮಂತ್ರಿಗಳೇ ಕಾರಣ ಎಂದು ಯುವಮೋರ್ಛಾ ಆರೋಪಿಸಿದೆ.
ಇತ್ತೀಚಿನ ದಿನಗಳಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಪ್ರಕರಣಗಳನ್ನು ಸರಕಾರ ಸರಿಯಾಗಿ ತನಿಖೆ ನಡೆಸಿಲ್ಲ. ಸರಕಾರ ಕೆ.ಎಫ್.ಡಿ ಯಂತಹ ದೇಶದ್ರೋಹಿ ಸಂಘಟನೆಗಳ ವಿರುದ್ಧದ ಪ್ರಕರಣಗಳನ್ನು ರಾಜ್ಯ ಸರಕಾರ ಕೈಬಿಟ್ಟಿರುವುದರಿಂದ ರಾಜ್ಯದಲ್ಲಿ ಇಂತಹ ಪ್ರಕರಣ ಅಧಿಕವಾಗಿ ನಡೆಯುತ್ತಿದೆ. ಸರಕಾರ ಈ ಕೂಡಲೇ ದೇಶದ್ರೋಹಿ ಸಂಘಟನೆಯಾದ ಕೆ.ಎಫ್.ಡಿ ಯನ್ನು ನಿಷೇಧಿಸಬೇಕು. ಇದೀಗ ಮೈಸೂರು ರಾಜು ಹತ್ಯೆ ಹಾಗೂ ಹಿಂದೂ ಪರ ಸಂಘಟನೆ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ನಿರಂತರ ದಾಳಿ, ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿ.ಜೆ.ಪಿ ಯುವಮೋರ್ಛಾ ಅಧ್ಯಕ್ಷ ನವೀನ ನಾಯಕ್ ಹಾಗೂ ಪ್ರಧಾನ ಕಾರ್ಯದರ್ಶಿ ಕರುಣಾಕರ ಕೋಟ್ಯಾನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.







