ಕಡಬ ಪ್ರಥಮ ದರ್ಜೆ ಕಾಲೇಜಿಗೆ ಜಾಗ ಮಂಜೂರಾಗಿಲ್ಲ -ಸೈಯದ್ ಮೀರಾ ಸಾಹೇಬ್
ಕಡಬ, ಮಾ.15. ಇಲ್ಲಿನ ಪ್ರಥಮ ದರ್ಜೆ ಕಾಲೇಜಿಗೆ ಐದು ಎಕ್ರೆ ಸ್ಥಳ ಮಂಜೂರು ಮಾಡಿಸಿರುವುದಾಗಿ ಕಡಬ ಜಿಲ್ಲಾ ಪಂಚಾಯತ್ ಸದಸ್ಯರು ಸುಳ್ಳು ಹೇಳಿಕೆ ನೀಡಿ ಪುಕ್ಕಟೆ ಪ್ರಚಾರಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಜಿಲ್ಲಾ ಪರಿಷತ್ ಮಾಜಿ ಸದಸ್ಯ ಜೆಡಿಎಸ್ ಮುಖಂಡ ಸೈಯ್ಯದ್ ಮೀರಾ ಸಾಹೇಬ್ ಆರೋಪಿಸಿದ್ದಾರೆ.
ಅವರು ಕಡಬದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಐದು ಎಕ್ರೆ ಸ್ಥಳ ಮಂಜೂರಾತಿ ಆದಲ್ಲಿ ರೆವಿನ್ಯೂ ಇಲಾಖೆಯ ಕಡತದಲ್ಲಿ ಇದೆ ಎಂದು ಸಾರ್ವಜನಿಕವಾಗಿ ಪ್ರದರ್ಶಿಸಲಿ ಎಂದು ಸವಾಲು ಹಾಕಿದರು. ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಾಸಕರ ಹಾಗೂ ಸಮಿತಿ ಸದಸ್ಯರ ನಿರ್ಣಯದ ಆಧಾರದಲ್ಲಿ ಕಾಲೇಜಿನ ಸ್ಥಳಕ್ಕಾಗಿ ಸರ್ವೆ ಕಾರ್ಯ ನಡೆದಿದೆ. ಇದರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ,ವರ್ಗೀಸ್ ಅವರ ಪ್ರಯತ್ನ ಏನೂ ಇಲ್ಲ, ಜಿಲ್ಲಾ ಪಂಚಾಯತ್ ಚುನಾವಣೆ ನಡೆದು ಒಂದು ಸಭೆಗೂ ಭಾಗಿಯಾಗಿಲ್ಲ, ಅಷ್ಟರಲ್ಲೇ ಇಷ್ಟೊಂದು ಸುಳ್ಳು ಹೇಳುವುದು ಸರಿಯಲ್ಲ ಎಂದು ಅವರು ಹೇಳಿದರು. ಕಡಬದಲ್ಲಿ ವಿದ್ಯಾಸಂಸ್ಥೆಗೆಂದು ಸುಮಾರು ವರ್ಷಗಳ ಹಿಂದೆ ಕೋಡಿಂಬಾಳ ಗ್ರಾಮದಲ್ಲಿ 14.56 ಎಕ್ರೆ ಜಾಗ ಖಾದಿರಿಸಲಾಗಿದೆ. ಈ ಪೈಕಿ 7 ಎಕ್ರೆ ಸ್ಥಳದಲ್ಲಿರುವ ಗೇರು ತೋಟ ಕುಮ್ಕಿ ಸ್ಥಳವಾಗಿದ್ದು ಇದನ್ನು ಹತ್ತಿರದ ಪಟ್ಟೆದಾರರಾದ ಅಬೂಬಕರ್ ಸಾಹೇಬ್ ಹಾಗೂ ಚೆನ್ನಮ್ಮ ಹೆಂಗ್ಸು ಎಂಬವರು ವಿದ್ಯಾಸಂಸ್ಥೆಗೆಂದು ಬರಹ ಮೂಲಕ ದಾನವಾಗಿ ಬಿಟ್ಟುಕೊಟ್ಟಿದ್ದರು. ಉಳಿಕೆ ಜಾಗ 7.36 ಸೇರಿಸಿ ಒಟ್ಟು 14.56 ಎಕ್ರೆ ಸ್ಥಳ ವಿದ್ಯಾಸಂಸ್ಥೆಗೆಂದು ನೊಂದಾಣಿ ಮಾಡುವಲ್ಲಿ ಅಂದಿನ ಗ್ರಾ.ಪಂ. ಅಧ್ಯಕ್ಷನಾಗಿದ್ದ ನಾನು ಹಾಗೂ ತಾಲೂಕು ಬೋರ್ಡ್ ಅಧ್ಯಕ್ಷ ಸಂಕಪ್ಪ ರೈ ಹಾಗೂ ಆರಿಗ ಕುಳವಳಿಕೆ ಅವರ ಪ್ರಯತ್ನ ಇದೆ. ಈ ಬಗ್ಗೆ ಶಾಲಾ ಹೆಸರಲ್ಲಿ ಆರ್.ಟಿ.ಸಿ ಕೂಡಾ ಆಗಿದೆ. ಈ ಪೈಕಿ 1.60 ಎಕ್ರೆ ಪ್ರದೇಶದಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಲಾಗಿದೆ. ಇಲ್ಲೇ ಜೂನಿಯರ್ ಕಾಲೇಜು ಕೂಡಾ ಕಾರ್ಯಾಚರಿಸುತ್ತಿದೆ. ಈ ಶಾಲೆಗಳಿಗೆ ಹಲವಾರು ದಾನಿಗಳು ಮೂಲಭೂತ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಈಗ ಪ್ರಥಮ ದರ್ಜೆ ಕಾಲೇಜು ಹೋರಾಟ ಸಮಿತಿ ಎಂದು ರಚಿಸಿಕೊಂಡು ಕೇವಲ ಒಂದು ಪಕ್ಷದದವರು ಸಮಿತಿಯಲ್ಲಿ ಇದ್ದು ಎಲ್ಲಾ ವರ್ಗದವರನ್ನು ಅದರಲ್ಲಿ ಸೇರಿಸಿಲ್ಲ. ಅಷ್ಟಕ್ಕೂ ಹೋರಾಟ ಸಮಿತಿಯೇ ಅಗತ್ಯವಿಲ್ಲ. ಶಾಲಾಭಿವೃದ್ಧಿ ಸಮಿತಿ ಕಳೆದ ಆರು ತಿಂಗಳ ಹಿಂದೆ ಕಾಲೇಜಿಗೆ ಸ್ಥಳ ಖಾದಿರಿಸುವಂತೆ ಕೇಳಿಕೊಂಡ ಮೇರೆಗೆ ಪ್ರಥಮ ದರ್ಜೆ ಕಾಲೇಜಿಗೆ ಮೀಸಲಿಟ್ಟ ಸ್ಥಳದಿಂದ ಐದು ಎಕ್ರೆಯನ್ನು ಗುರುತು ಮಾಡಲಾಗಿದೆ. ಇದರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರು ಹೇಳಿಕೊಳ್ಳುವ ಏನೂ ಸಾಧನೆ ಮಾಡಿಲ್ಲ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರ ವ್ಯವಹಾರ ನಡೆದು ಮುಂದಿನ ವರ್ಷಕ್ಕೆ ಪ್ರಥಮ ದರ್ಜೆ ಕಾಲೇಜು ಮಂಜೂರಾಗುವ ನಿರೀಕ್ಷೆಯಿದೆ. ಇದಿಷ್ಟು ವಾಸ್ತವ ಇದನ್ನು ಮರೆ ಮಾಚಿ ಪುಕ್ಕಟೆ ಪ್ರಚಾರಕ್ಕಾಗಿ ಸುಳ್ಳು ಹೇಳುವುದನ್ನು ಬಿಟ್ಟು ಉತ್ತಮ ಕೆಲಸಗಳನ್ನು ಮಾಡಿ ಪ್ರಚಾರ ಗಿಟ್ಟಿಸಲಿ ಎಂದು ಮೀರಾ ಸಾಹೇಬ್ ಹೇಳಿದರು.





