ಮಾರ್ಚ್ ತಿಂಗಳ ಪಡಿತರ ವಿವರ
ಬೆಂಗಳೂರು, ಮಾ. 16: ಸಾರ್ವಜನಿಕ ವಿತರಣಾ ಪದ್ಧತಿ ಅನ್ವಯ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಚೀಟಿದಾರರಿಗೆ ವಿತರಿಸುವ ಆಹಾರ ಧಾನ್ಯಗಳ ಪ್ರಮಾಣ ಮತ್ತು ದರಗಳ ಮಾರ್ಚ್ ತಿಂಗಳ ಜಿಲ್ಲಾವಾರು ಮಾಹಿತಿ ಬಿಡುಗಡೆಯಾಗಿದೆ.
ಎಎವೈ ಮತ್ತು ಬಿಪಿಎಲ್ ಪಡಿತರ ಚೀಟಿಗಳಿಗೆ ಉಚಿತವಾಗಿ ಆಹಾರಧಾನ್ಯ ವಿತರಣೆಯಾಗುತ್ತಿದ್ದು, ರಾಜ್ಯ ವ್ಯಾಪ್ತಿಯ ಜಿಲ್ಲೆಗಳ ಎಎವೈ ಪಡಿತರ ಚೀಟಿಗೆ 29 ಕೆಜಿ ಅಕ್ಕಿ ಹಾಗೂ 6ಕೆ.ಜಿ. ಗೋಧಿ ಹಂಚಿಕೆ ನೀಡಲಾಗಿದೆ.
ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿನ ಬಿಪಿಎಲ್ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 3ಕೆಜಿ ಅಕ್ಕಿ ಹಾಗೂ 2 ಕೆಜಿ ಗೋಧಿ ವಿತರಣಾ ಪ್ರಮಾಣ ನಿಗದಿಪಡಿಸಲಾಗಿದ್ದು, ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ, ಚಿಕ್ಕಬಳ್ಳಾಪುರ, ರಾಮನಗರ ಹಾಗೂ ಬೆಂ.ಅ.ಪ. ಪ್ರದೇಶದ ಬಿಪಿಎಲ್ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 4 ಕೆಜಿ ಅಕ್ಕಿ ಹಾಗೂ 1 ಕೆಜಿ ಗೋಧಿ ವಿತರಿಸಲು ಸೂಚಿಸಲಾಗಿದೆ. ಎಎವೈ ಮತ್ತು ಬಿಪಿಎಲ್ ಪ್ರತಿ ಪಡಿತರ ಚೀಟಿಗಳಿಗೆ ತಾಳೆ ಎಣ್ಣೆ 1 ಲೀ. 25 ರೂ. ಅಯೋಡಿಯನ್ಯುಕ್ತ ಉಪ್ಪುಒಂದು ಕೆಜಿಗೆ 2 ರೂ. ಹಾಗೂ ಸಕ್ಕರೆ 2 ಕೆಜಿಗೆ 13.50 ರೂ. ದರದಂತೆ ಹಂಚಿಕೆ ಮಾಡಲು ಹೇಳಲಾಗಿದೆ.
ನೋಂದಣಿಯಾದ ಎಪಿಎಲ್ ಪಡಿತರ ಚೀಟಿಯ ಏಕ ಸದಸ್ಯ ಕುಟುಂಬಕ್ಕೆ 5 ಕೆಜಿ ಆಹಾರಧಾನ್ಯವನ್ನು (3ಕೆಜಿ ಅಕ್ಕಿ ಮತ್ತು 2 ಕೆಜಿ ಗೋಧಿ) ಹಾಗೂ ಒಂದಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ 10 ಕೆಜಿ ಆಹಾರ ಧಾನ್ಯವನ್ನು (5 ಕೆಜಿ ಅಕ್ಕಿ, 5 ಕೆಜಿ ಗೋಧಿ) ಪ್ರತಿ ಕೆಜಿ ಅಕ್ಕಿಗೆ 15 ರೂ. ಹಾಗೂ ಪ್ರತಿ ಕೆಜಿ ಗೋಧಿಗೆ 10 ರೂ.ದರದಲ್ಲಿ ಹಂಚಿಕೆ ನೀಡಲಾಗಿದೆ.
ಎಎವೈ ಮತ್ತು ಬಿಪಿಎಲ್ನ ಏಕ ಸದಸ್ಯ ಮತ್ತು ದ್ವಿ ಸದಸ್ಯ ಅನಿಲರಹಿತ ಪಡಿತರ ಚೀಟಿಗಳಿಗೆ 3 ಲೀಟರ್ನಂತೆ ಮೂರು ಮತ್ತು ಹೆಚ್ಚಿನ ಸದಸ್ಯರಿರುವ ಪಡಿತರ ಚೀಟಿಗೂ 5 ಲೀಟರ್ನಂತೆ ಹಾಗೂ ಗ್ರಾಮಾಂತರ ಪ್ರದೇಶದ ಎಪಿಎಲ್ ಅನಿಲ ರಹಿತ ಪಡಿತರ ಚೀಟಿಗಳಿಗೆ 2 ಲೀಟರ್ನಂತೆ ಸೀಮೆಎಣ್ಣೆ ವಿತರಣಾ ಪ್ರಮಾಣವನ್ನು ನಿಗದಿಪಡಿಸಿ ಹಂಚಿಕೆ ಮಾಡಲಾಗಿದೆ.





