ಉಡುಪಿ: 19 ಗ್ರಾಪಂಗಳಿಗೆ ಘನತ್ಯಾಜ್ಯ ವಿಲೇವಾರಿ ಘಟಕ : ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್
ಉಡುಪಿ, ಮಾ.16: ಸ್ವಚ್ಛ ಭಾರತ್ ಮಿಷನ್ನಡಿ ಉಡುಪಿ ಜಿಲ್ಲೆಯನ್ನು ಬಯಲು ಶೌಚಾಲಯ ಮುಕ್ತ ಜಿಲ್ಲೆಯಾಗಿ ಗುರುತಿಸಲಾಗಿದ್ದು, ಕೇಂದ್ರ ಸರಕಾರದಿಂದ ಶ್ರೀವೇ ಅಧಿಕೃತ ಘೋಷಣೆಗೆ ತಯಾರಾಗಿ ನಿಂತಿದೆ.
ಜಿಲ್ಲೆಯಲ್ಲಿ ತ್ಯಾಜ್ಯ ವಿಲೇವಾರಿ ಹಾಗೂ ಸ್ವಚ್ಛತೆಯನ್ನು ನಿರಂತರವಾಗಿ ಕಾಯ್ದುಕೊಳ್ಳಲು ಎಲ್ಲ ಗ್ರಾಪಂಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕಗಳ ಸ್ಥಾಪನೆಗೆ ಆದ್ಯತೆ ನೀಡಿ, ಯೋಜನೆಗಳನ್ನು ಅನುಷ್ಠಾನಗೊಳಿಸಿ ಎಂದು ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬುಧವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
2012ರ ಯೋಜನಾ ಅನುಷ್ಠಾನ ಗುರಿಯಡಿ 27,966 ಶೌಚಾಲಯ ನಿರ್ಮಾಣದ ನಿಗದಿತ ಗುರಿಯಲ್ಲಿ 27,872 ಶೌಚಾಲಯಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಜಿಲ್ಲೆಯನ್ನು ಒಡಿಎಫ್(ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆಯಾಗಿಸಲು)ನ್ನಾಗಿ ರೂಪಿಸಲು ಎಲ್ಲ ಗ್ರಾಪಂಗಳಲ್ಲಿ ಸ್ವಯಂ ವೌಲ್ಯಮಾಪನ ಮತ್ತು ಅಂತರ್ ತಾಲೂಕು ವೌಲ್ಯಮಾಪನ ನಡೆಸಲಾಗಿದೆ. ನ್ಯೂನತೆಗಳನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗಿದೆ ಎಂದವರು ಹೇಳಿದರು. ಶಾಲೆ ಹಾಗೂ ಅಂಗನವಾಡಿ ನೈರ್ಮಲ್ಯಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದ ಪ್ರಿಯಾಂಕಾ, 19 ಗ್ರಾಪಂಗಳಿಗೆ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಸರಕಾರದಿಂದ ಅನುಮೋದನೆ ದೊರಕಿದ್ದು, ಜಮೀನು ಗುರುತಿಸಿ ಕೆಲಸ ಆರಂಭಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಡುಪಿ ತಾಲೂಕಿನ ಕೊಕ್ಕರ್ಣೆ, ಯಡ್ತಾಡಿ, ಪೆರ್ಡೂರು, ಕಲ್ಯಾಣಪುರ, ಮುದರಂಗಡಿ, ವಾರಂಬಳ್ಳಿ ಕುಂದಾಪುರ ತಾಲೂಕಿನ ತ್ರಾಸಿ, ಬಸ್ರೂರು, ಸಿದ್ದಾಪುರ, ಮರವಂತೆ ಹಾಗೂ ಕಾರ್ಕಳ ತಾಲೂಕಿನ ಸಾಣೂರು, ನೀರೆ, ಮುಂಡ್ಕೂರು, ಬೆಳ್ಮಣ್, ಮಿಯಾರು, ವರಂಗ, ಮರ್ಣೆ, ಬೈಲೂರು, ಈದುವಿಗೆ ಒಟ್ಟು ತಲಾ 20 ಲಕ್ಷ ರೂ. ಅನುದಾನ ನಿಗದಿಪಡಿಸಿ ಅನುಷ್ಠಾನಗೊಳಿಸಲು ಆದೇಶಿಸಲಾಗಿದೆ ಎಂದರು. ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಹಸಿಕಸವನ್ನು ಗೊಬ್ಬರವಾಗಿ ಪರಿವರ್ತಿಸಿ ಶಾಲಾ ಕೈತೋಟಗಳಿಗೆ ಬಳಸುವಂತೆ ಯೋಜನೆಯನ್ನು ಅಳವಡಿಸಿ ಎಂದು ಜಿಲ್ಲೆಯ ವಿದ್ಯಾಂಗ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಉಡುಪಿ ತಾಲೂಕಿನ ಹೆಗ್ಗುಂಜೆ, ಕಾಡೂರು, ಬಡಗಬೆಟ್ಟು, ಅಲೆವೂರು ಗ್ರಾಪಂ, ಕುಂದಾಪುರ ತಾಲೂಕಿನ ತ್ರಾಸಿ, ಹೊಸಾಡು, ತಲ್ಲೂರು, ಕೋಣಿ ಗ್ರಾಪಂ, ಕಾರ್ಕಳ ತಾಲೂಕಿನ ಎರ್ಲಪ್ಪಾಡಿ, ವರಂಗ, ಮಿಯಾರು, ಕಡ್ತಲ ಗ್ರಾಪಂ ವ್ಯಾಪ್ತಿಯಲ್ಲಿ ಪೈಪು ಕಾಂಪೋಸ್ಟ್ ಪ್ರಾರಂಭಿಸಲಾಗಿದೆ. ಜನರು ತಮ್ಮ ಮನೆಯಲ್ಲಿ ಹಸಿಕಸವನ್ನು ರಸಗೊಬ್ಬರವಾಗಿ ಪರಿವರ್ತಿಸಲು ಮುಂದಾಗಿದ್ದಾರೆ ಎಂದರು.
ಇದೇ ಮಾದರಿಯನ್ನು ಜಿಲ್ಲೆಯ ಶಾಲಾ, ಕಾಲೇಜುಗಳಲ್ಲಿ ಅಳವಡಿಸುವುದರಿಂದ ಮಕ್ಕಳ ಮೂಲಕ ಹೆತ್ತವರು ಯೋಜನೆಯ ಬಗ್ಗೆ ಆಸಕ್ತಿ ತೋರಿಸು ವುದಲ್ಲದೆ, ತ್ಯಾಜ್ಯ ವಿಲೇ ಸುಲಭವಾಗಿ ತ್ಯಾಜ್ಯದಿಂದ ಗೊಬ್ಬರ ಉತ್ಪಾದನೆ ಯಾಗಲಿದೆ ಎಂದು ಸಿಇಒ ಹೇಳಿದರು.
ಬೇಸಿಗೆಯಲ್ಲಿ ನೀರಿನಿಂದ ಹರಡುವ ರೋಗಗಳ ಬಗ್ಗೆ ಎಚ್ಚರಿಕೆ ವಹಿಸಲು ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದರು. ಉಪ ಕಾರ್ಯದರ್ಶಿ ಶ್ರೀನಿವಾಸ್ ರಾವ್ ಹಾಗೂ ಇತರ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.







