ಪ್ರವಾಸೋದ್ಯಮ
ರಾಜ್ಯ ಬಜೆಟ್ 2016-17
ಬೆಂಗಳೂರು, ಮಾ.18: ಪ್ರವಾಸೋದ್ಯಮ ಇಲಾಖೆಗೆ ಒಟ್ಟಾರೆಯಾಗಿ 507 ಕೋಟಿ ರೂ.ಒದಗಿಸಲಾಗಿದೆ. ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ ಮತ್ತು ಐಹೊಳೆ ಹಾಗೂ ಮುಚಖಂಡಿ ಗ್ರಾಮದ ಬ್ರಿಟಿಷ್ ಕಾಲದ ಕೆರೆಯನ್ನು ಅಭಿವೃದ್ಧಿಪಡಿಸಲು ಹಾಗೂ ಕಾರವಾರ, ಬೀದರ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರವಾಸಿ ತಾಣಗಳನ್ನು 10 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಮಾದರಿ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲಾಗುವುದು.
ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ವತಿಯಿದ ಜಂಗಲ್ ಕ್ಯಾಂಪ್ಸ್ ಮತ್ತು ಟ್ರೇಲ್ಸ್ ಹೆಸರಿನ ಸಾಮಾನ್ಯ ದರ್ಜೆಯ ವಸತಿ ಅವಕಾಶವನ್ನು ಕಲ್ಪಿಸಲಾಗುವುದು. ಪ್ರವಾಸಿಗರಿಗೆ ಮಾಹಿತಿ ಹಾಗೂ ಇತರ ಸೇವೆಗಳನ್ನು ನೀಡಲು ಸಮಗ್ರ ಡಿಜಿಟಲ್ ಪೋರ್ಟಲ್ನ್ನು ಪ್ರಾರಂಭಿಸಲಾಗುವುದು. ಮೈಸೂರಿನ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಖಾಯಂ ವಸ್ತು ಪ್ರದರ್ಶನ ಕೇಂದ್ರ ನಿರ್ಮಿಸಲಾಗುವುದು.
‘ಕುಟೀರ’ ಹೆಸರಿನಡಿ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತ್ಯುತ್ತಮ ದರ್ಜೆಯ ಮೂಲ ಸೌಲಭ್ಯಗಳನ್ನು ಪ್ರವಾಸಿಗರಿಗೆ ಒದಗಿಸಲು ಉದ್ದೇಶಿಸಲಾಗಿದೆ. ಬೆಂಗಳೂರಿನಲ್ಲಿ ನಡೆದ ಓಪನ್ ಸ್ಟ್ರೀಟ್ ಕಾರ್ಯಕ್ರಮವನ್ನು ಹೆಚ್ಚು ದೇಶಿ ಹಾಗೂ ವಿದೇಶಿ ಪ್ರವಾಸಿಗರನ್ನು ಆಕರ್ಷಣೆ ಮಾಡಲು ಅಂತಾರಾಷ್ಟ್ರೀಯ ಮಟ್ಟಕ್ಕೆ ಉನ್ನತೀಕರಿಸಲಾಗುವುದು ಹಾಗೂ ಇತರೆ ಸ್ಥಳಗಳಿಗೆ ವಿಸ್ತರಿಸಲಾಗುವುದು. ಗೋಲ್ಡನ್ ಚ್ಯಾರಿಯಟ್ ಐಷಾರಾಮಿ ರೈಲಿನಲ್ಲಿ ಹೆಚ್ಚಿನ ದೇಶಿಯ ಪ್ರವಾಸಿಗರನ್ನು ಆಕರ್ಷಿಸಲು ಕೈಗೆಟಕುವ ಬೆಲೆಯ ಪ್ರವಾಸಿ ಪ್ಯಾಕೇಜ್ಗಳನ್ನು ಪರಿಚಯಿಸಲಾಗುವುದು.
ಬೆಂಗಳೂರಿನಲ್ಲಿ ಎರಡು ವಷರ್ಗಳಿಗೊಮ್ಮೆ ಕರ್ನಾಟಕ ಟ್ರಾವೆಲ್ ಮಾರ್ಟ್ನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಏರ್ ಮತ್ತು ಹೆಲಿ ಟ್ಯಾಕ್ಸಿ ಸೇವೆಗಳನು ಪ್ರೋತ್ಸಾಹಿಸಲಾಗುವುದು. ಬೀದರ್ ಹಾಗೂ ವಿಜಯಪುರ ನಗರಗಳಲ್ಲಿ ಕಂಡು ಬಂದಿರುವ ಪ್ರಾಚೀನ ಕಾಲದ ನೀರು ಸರಬರಾಜು ವ್ಯವಸ್ಥೆಯನ್ನು ಪುನರುತ್ಥಾನಗೊಳಿಸಿ ಅದನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಜೈನ ಮತ್ತು ಬೌದ್ಧ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲಾಗುವುದು.





