‘ಶೀಘ್ರವೇ ಪೊಲೀಸ್ ಇಲಾಖೆಯಲ್ಲಿ ವಿದ್ಯಾರ್ಥಿಗಳು’
ಉಪ್ಪಿನಂಗಡಿ, ಮಾ.18: ವಿದ್ಯಾರ್ಥಿಗಳಲ್ಲಿ ಸಮಾಜಸೇವೆಯ ಮನೋಭಾವನೆ ಬಿತ್ತಿ, ಅವರಲ್ಲಿ ಉತ್ತಮ ನಾಯಕತ್ವ ಗುಣ ಬೆಳೆಸುವ ಮೂಲಕ ಉತ್ತಮ ನಾಗರಿಕರನ್ನಾಗಿಸುವ ಇರಾದೆ ನಮ್ಮ ಮುಂದಿದ್ದು, ಉಪ್ಪಿನಂಗಡಿಯಲ್ಲಿ ಸದ್ಯದಲ್ಲಿಯೇ ಅದಕ್ಕೆ ಚಾಲನೆ ನೀಡಲಾಗುವುದು ಎಂದು ಎಎಸ್ಪಿಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.
ಮೂರು ತಿಂಗಳ ಅವಧಿಗೆ ಕರ್ತವ್ಯ ನಿರ್ವಹಿಸಲು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಆಗಮಿಸಿರುವ ಅವರು, ವಿದ್ಯಾರ್ಥಿಗಳನ್ನು ಪೊಲೀಸ್ ಇಲಾಖೆ ಬಳಸಿಕೊಳ್ಳುವುದು ಜಿಲ್ಲಾ ಎಸ್ಪಿಯವರ ಕನಸಾಗಿದ್ದು, 8, 9, 10ನೆ ತರ ಗತಿ ವಿದ್ಯಾರ್ಥಿಗಳಲ್ಲಿ ಸಂಚಾರಿ ನಿಯಮ, ಪೊಕ್ಸೊ ಮುಂತಾದ ಕಾನೂನುಗಳ ಮಾಹಿತಿ, ಮಾದಕ ವ್ಯಸನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಲಿದೆ. ಅವರಿಗೆ ಪೊಲೀಸ್ ಪೆರೇಡ್ನಲ್ಲಿ ಭಾಗವಹಿಸುವ ಅವಕಾಶ ನೀಡಿ ಪೊಲೀಸ್ ಶಿಸ್ತನ್ನು ಮೈಗೂಡಿಸುವ ಪ್ರಯತ್ನ ಮಾಡಲಿದೆ ಎಂದು ಪತ್ರಿಕೆಗೆ ತಿಳಿಸಿದರು.
ಜಾತ್ರಾ ಬಂದೋಬಸ್ತ್ ಸೇರಿದಂತೆ ನೈಸರ್ಗಿಕ ವಿಕೋಪಗಳಂತಹ ತುರ್ತು ಸಂದರ್ಭದ ಬಗ್ಗೆ ನೆರವು ನೀಡಲು ವಿದ್ಯಾರ್ಥಿಗಳನ್ನು ಪೊಲೀಸ್ ಇಲಾಖೆ ಬಳಸಿಕೊಳ್ಳಲಿದೆ. ಮೂಲತಃ ಬಿಜಾಪುರದ ಇಂಡಿ ತಾಲೂಕಿ ನವರಾದ ಲಕ್ಷ್ಮಣ್ ನಿಂಬರ್ಗಿ ಇದೀಗ ಹುಬ್ಬ ಳ್ಳಿಯಲ್ಲಿ ನೆಲೆಸಿದ್ದು, ಅಲ್ಲಿಯೇ ಎಂಜಿ ನಿಯರಿಂಗ್ ಶಿಕ್ಷಣ ಮುಗಿಸಿ 2014ರಲ್ಲಿ ನಾಗರಿಕ ಸೇವಾ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿಯಾಗಿದ್ದಾರೆ. ತಮ್ಮ ಪ್ರೊಬೆಷನರಿ ಅವಧಿಯಲ್ಲಿ ಅವರು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದರು.





