ಬಿಬಿಎಂಪಿಯ 110 ಹಳ್ಳಿಗಳಿಗೆ ಕುಡಿಯುವ ನೀರು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗೆ 5,018 ಕೋಟಿ ರೂ. ಯೋಜನೆಯನ್ನು ‘ಜೈಕಾ’ ಸಂಸ್ಥೆಯ ಸಹಯೋಗದೊಂದಿಗೆ ರೂಪಿಸಲು ನಿರ್ಣಯಿಸಲಾಗಿದೆ.
ವೃಷಭಾವತಿ ಕಣಿವೆ, ಹೆಬ್ಬಾಳ, ಕೋರಮಂಗಲ, ಚಲ್ಲಘಟ್ಟ ಹಾಗೂ ದೊಡ್ಡಬೆಲೆಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ರಾಜ್ಯ ಸರಕಾರದ ಶೇ.25ರಷ್ಟು ಅಂದರೆ 355.5 ಕೋಟಿ ರೂ. ಆರ್ಥಿಕ ನೆರವಿನೊಂದಿಗೆ ಮುಂದಿನ ನಾಲ್ಕು ವರ್ಷಗಳಲ್ಲಿ ಸ್ಥಾಪಿಸಲಾಗುವುದು. 22 ಕೊಳಗೇರಿಗಳಿಗೆ ನೀರು ಸರಬರಾಜು ಸೌಲಭ್ಯ ಒದಗಿಸುವ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಜಿಕೆವಿಕೆ ಜಲಸಂಗ್ರಹಗಾರದಿಂದ ಎಚ್ಬಿಆರ್ ಜಲ ಸಂಗ್ರಹಗಾರದವರೆಗೆ ಕೊಳವೆ ಮಾರ್ಗ ಒದಗಿಸುವ ಯೋಜನೆ. ಹುಳಿಮಾವು, ಬೇಗೂರು, ಸಾರಕ್ಕಿ ಅಗರ ಮತ್ತು ಕೆ.ಆರ್. ಪುರಂ ಕೆರೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣ ಘಟಕಗಳನ್ನು ಸ್ಥಾಪಿಸುವ ಯೋಜನೆ. ಕೋರಮಂಗಲ ಕ್ರೀಡಾ ಸಂಕೀರ್ಣದ ಬಳಿ ಪಂಪ್ ಹೌಸ್ ನಿರ್ಮಾಣ ಮತ್ತು ಪ್ರಸ್ತುತ ಇರುವ ಮುಖ್ಯ ಕೊಳವೆಯನ್ನು ಕ್ರೀಡಾ ಸಂಕೀರ್ಣದಿಂದ ‘ಕೆ-ಸಿ’ ವ್ಯಾಲಿ ಸಂಸ್ಕರಣಾ ಘಟಕದವರೆಗೂ ಅಳವಡಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.
ಬೆಂಗಳೂರು ಮೆಟ್ರೋ ರೈಲು ಯೋಜನೆ: ನಮ್ಮ ಮೆಟ್ರೊ ಜಾಲದಲ್ಲಿ ಒಟ್ಟು 27 ಕಿ.ಮೀ. ಕಾರ್ಯಾಚರಣೆ ಆರಂಭವಾಗಿದೆ. 2016ರ ಮಧ್ಯದಲ್ಲಿ ಹಂತ 1ರ ಯೋಜನೆ ಪೂರ್ಣಗೊಳ್ಳಲಿದೆ. ಎರಡನೆ ಹಂತದ ಕಾಮಗಾರಿಗಳ ಎರಡು ರೀಚ್ಗಳ ಕಾಮಗಾರಿ ಗುತ್ತಿಗೆಯನ್ನು ವಹಿಸಲಾಗಿದೆ. ಈ ಯೋಜನೆಯನ್ನು 2020ರಲ್ಲಿ ಪೂರ್ಣಗೊಳಿಸಲಾಗುವುದು. ರಾಜ್ಯ ಸರಕಾರವು ಸಿಲ್ಕ್ ಬೋರ್ಡ್ನಿಂದ ಕೆ.ಆರ್.ಪುರಂ ಜಂಕ್ಷನ್ ಹಾಗೂ ಇತರೆ ಮೆಟ್ರೊದ ಹೊಸ ಪಥಗಳಿಗೆ ಹಣಕಾಸು ವ್ಯವಸ್ಥೆ ಮಾಡಲು ವಿನೂತನ ವಿಧಾನಗಳನ್ನು ಅಳವಡಿಸಲು ಯೋಜಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 2016-17ರಲ್ಲಿ ಸುಮಾರು 3 ಸಾವಿರ ಫ್ಲಾಟ್ಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯ ಕಾಮಗಾರಿ ಪ್ರಗತಿಯಲ್ಲಿದ್ದು, 10 ಸಾವಿರ ನಿವೇಶನಗಳನ್ನು ಮುಂದಿನ ಸಾಲಿನ ಮಾರ್ಚ್ ಒಳಗಾಗಿ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುವುದು.ಇಂದಿರಾನಗರ, ಆರ್.ಟಿ.ನಗರ ಮತ್ತು ಆಸ್ಟೀನ್ ಟೌನ್ ವಾಣಿಜ್ಯ ಸಂಕೀರ್ಣವನ್ನು ಖಾಸಗಿ ಸಹಭಾಗಿತ್ವದ(ಪಿಪಿಪಿ) ಅಡಿಯಲ್ಲಿ ಪುನರ್ ನಿರ್ಮಿಸಲಾಗುವುದು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಡಿಎ ಮತ್ತು ಬಿಎಂಆರ್ಡಿಎಗಳ ಕೆರೆ ಅಭಿವೃದ್ಧಿ ವತಿಯಿಂದ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಪುನಶ್ಚೇತನ ಕ್ರಮಗಳನ್ನು ಪ್ರಾರಂಭಿಸಲಾಗುವುದು.
ಬೆಂಗಳೂರು ನಗರದಲ್ಲಿ ವಾಹನ ದಟ್ಟನೆ ಸುಗಮಗೊಳಿಸಲು 100 ಕಿ.ಮೀ. ಉದ್ದದ ಸುಮಾರು 18 ಸಾವಿರ ಕೋಟಿ ರೂ.ವೆಚ್ಚದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಹೆಬ್ಬಾಳ ಜಂಕ್ಷನ್, ಕೆ.ಆರ್.ಪುರಂ ನಿಂದ ತುಮಕೂರು ರಸ್ತೆ ಮತ್ತು ವರ್ತೂರು ಕೋಡಿಯಿಂದ ಮೈಸೂರು ರಸ್ತೆ ಹಾಗೂ ಇತರೆ ಮೂರು ಮೇಲ್ಮಟ್ಟದ ರಸ್ತೆಗಳನ್ನು ನಿರ್ಮಿಸಲು ಯೋಜನಾ ವರದಿ ತಯಾರಿಸಲಾಗುತ್ತಿದೆ.







