'ದಲಿತರ ಪರವಾಗಿದ್ದ ಟಿಪ್ಪುಗೆ ದೇಶದ್ರೋಹ ಪಟ್ಟ'

ಮನೆಯಂಗಳದಲ್ಲಿ ಮಾತುಕತೆಯಲ್ಲಿ ಚಿಂತಕ ಡಾ.ಜವರಯ್ಯ
ಬೆಂಗಳೂರು, ಮಾ.19: ಮೈಸೂರಿನ ವೀರ ಹೋರಾಟಗಾರ ಟಿಪ್ಪು ಸುಲ್ತಾನ್ ತನ್ನ ಸೈನ್ಯದಲ್ಲಿ ದಲಿತರನ್ನು ನೇಮಿಸಿಕೊಂಡಿದ್ದ. ಇದನ್ನೇ ನೆಪವಾಗಿಟ್ಟುಕೊಂಡು ಕೆಲವು ಮೂಲಭೂತವಾದಿಗಳು ಟಿಪ್ಪುವಿಗೆ ದೇಶ ದ್ರೋಹ ಪಟ್ಟ ಕಟ್ಟುತ್ತಿದ್ದಾರೆ ಎಂದು ಅಂಬೇಡ್ಕರ್ ವಾದಿ ಚಿಂತಕ ಡಾ.ಮ.ನ.ಜವರಯ್ಯ ತಿಳಿಸಿದ್ದಾರೆ.
ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ನಯನ ಸಭಾಂಗಣದಲ್ಲಿ ಆಯೋಜಿ ಸಿದ್ದ 'ಮನೆಯಂಗಳದಲ್ಲಿ ಮಾತುಕತೆ' ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಹಲವು ಪ್ರದೇಶಗಳನ್ನು ತಮ್ಮ ಕೈವಶ ಮಾಡಿಕೊಂಡಿದ್ದ ಬ್ರಿಟಿಷರಿಗೆ ಟಿಪ್ಪು ಸುಲ್ತಾನ್ ಆಳ್ವಿಕೆಗೆ ಮೈಸೂರು ಪ್ರಾಂತವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಟಿಪ್ಪು ಸುಲ್ತಾನ್ ತನ್ನ ಸೈನ್ಯ ಬಲಿಷ್ಠಗೊಳಿಸಲು ದಲಿತ ಯುವಕರನ್ನು ನೇಮಿಸಿಕೊಂಡಿದ್ದ. ಹೀಗಾಗಿಯೇ ಬ್ರಿಟಿಷರು ಟಿಪ್ಪು ಸೈನ್ಯವನ್ನು ನೋಡಿ ನಡುಗುತ್ತಿದ್ದರೆಂದು ತಿಳಿಸಿದರು.
ಮಾಜಿ ಸಚಿವ ಅರಣ್ಶೌರಿ 'ವರ್ಶಿಪ್ಪಿಂಗ್ ಫಾಲ್ಸ್ ಗಾಡ್ಸ್'(ಸುಳ್ಳು ದೇವರುಗಳ ಸೃಷ್ಟಿ) ಕೃತಿಯಲ್ಲಿ ಅಂಬೇಡ್ಕರ್ರವರನ್ನು ದೇಶದ್ರೋಹಿ ಎಂದು ಕರೆದಿದ್ದರು. ಅವರ ಮಾತನ್ನು ಅನುಯಾಯಿಗಳೂ ಒಪ್ಪುವುದಿಲ್ಲ. ಈ ರೀತಿಯಲ್ಲಿ ಅಂಬೇಡ್ಕರ್ ಅವರನ್ನು ತೇಜೋವಧೆ ಮಾಡುವಂತಹ ಕೃತ್ಯಗಳು ದೇಶದಲ್ಲಿ ನಡೆಯುತ್ತಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
1970ರವರೆಗೂ ರಾಜ್ಯದಲ್ಲಿ ಅಂಬೇಡ್ಕರ್ ಕುರಿತು ಒಂದು ಲೇಖನ ಬಂದಿರಲಿಲ್ಲ. ಹೀಗಾಗಿ ನಾನು ಅಂಬೇಡ್ಕರ್ ಕುರಿತು ಪುಸ್ತಕ ರಚಿಸಿ, ಪ್ರಕಾಶಕರಲ್ಲಿ ಮುದ್ರಣಕ್ಕಾಗಿ ಬೇಡಿಕೆ ಇಟ್ಟೆ. ಆದರೆ, ಒಬ್ಬ ಪ್ರಕಾಶಕನೂ ಮುದ್ರಿಸಲು ಮುಂದೆ ಬರಲಿಲ್ಲ. ಹೀಗಾಗಿ ಅವರಿವರ ಬಳಿ ಹಣವನ್ನು ಸಂಗ್ರಹಿಸಿ ಮುದ್ರಿಸಬೇಕಾಯಿತು ಎಂದು ಅವರು ಸ್ಮರಿಸಿದರು.
ದಲಿ ಚಳವಳಿಗಾರರು ತಮ್ಮ ಹೋರಾಟಗಳನ್ನು ಮತ್ತೊಮ್ಮೆ ಪುನರ್ ವಿಮರ್ಶಿಸಿ ಕೊಳ್ಳಬೇಕಾದ ಅಗತ್ಯವಿದೆ. ಕೇವಲ ಬ್ರಾಹ್ಮಣರು ಸೇರಿದಂತೆ ಮೇಲ್ಜಾತಿ ಸಮುದಾಯವನ್ನು ಟೀಕಿಸುವುದರಲ್ಲೇ ಸಮಯ ಕಳೆಯಬಾರದು. ಬೌದ್ಧಿಕವಾಗಿ ಅವರಿಗಿಂತ ಸಮರ್ಥರಾಗುವತ್ತ ಗಮನ ಹರಿಸಬೇಕೆಂದು ಚಿಂತಕ ಡಾ.ಮ.ನ.ಜವರಯ್ಯ ಕಿವಿಮಾತು ಹೇಳಿದರು.
ವಿಶ್ವದಲ್ಲಿಯೇ ಮೊಟ್ಟಮೊದಲ ಬಾರಿಗೆ ಸಮಾನತೆಯ ಬೀಜ ಬಿತ್ತಿದವರು ಶಿವಶರಣರು. ಅಂತಹ ಮಹಾನ್ ಶರಣರು ಮೆಟ್ಟಿದ ನಾಡಲ್ಲಿ ಜನಿಸಿರುವ ನಾವೇ ಪುಣ್ಯವಂತರು. ಹೀಗಾಗಿ ಶರಣರ ಆದರ್ಶಗಳಾದ ಜಾತಿ ವಿನಾಶ, ಸಮಾನತೆ, ಭ್ರಾತೃತ್ವಗಳನ್ನು ಮೈಗೂಡಿಸಿಕೊಂಡು ಹೊಸ ನಾಡನ್ನು ಕಟ್ಟಬೇಕು ಎಂದು ಅವರು ಆಶಿಸಿದರು.





