ಮಲೇರಿಯಾ ಬಾಧಿತರ ಮನೆ ಬಾಗಿಲಿಗೆ ಉಚಿತ ಸೇವೆ

ಮಂಗಳೂರು, ಮಾ.19: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಜಂಟಿಯಾಗಿ ಮಲೇರಿಯಾ ನಿಯಂ ತ್ರಣಕ್ಕೆ ಹೊಸ ಹೆಜ್ಜೆಯಾಗಿ ‘24x7 ಮನೆ ಬಾಗಿಲಿಗೆ ಉಚಿತ ಸೇವೆ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದೆ. ಉಚಿತ ಸೇವೆ ನೀಡುವ ಈ ಮೊಬೈಲ್ ಘಟಕಕ್ಕೆ ಮನಪಾ ಕಚೇರಿಯೆದುರು ಆರೋಗ್ಯ ಸಚಿವ ಯು.ಟಿ.ಖಾದರ್ ಇಂದು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಅರುಣ್, ಆರೋಗ್ಯ ನಿರೀಕ್ಷಕ ಸುನೀಲ್ಕುಮಾರ್, ಮನಪಾ ಆರೋಗ್ಯ ಸ್ಥಾಯಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಮೊದ ಲಾದವರು ಉಪಸ್ಥಿತರಿದ್ದರು.
ಡಾ. ಅರುಣ್ ಮಾತನಾಡಿ, ಮಲೇರಿಯಾ ರೋಗವನ್ನು ನಿಯಂತ್ರಿ ಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಪಾಲಿಕೆಯ ಸ್ಥಾಯಿ ಸಮಿತಿ ಜಂಟಿಯಾಗಿ ಈ ಹೆಜ್ಜೆಯನ್ನಿಟ್ಟಿದ್ದು, ಮಲೇರಿಯಾ ನಿಯಂತ್ರಣಕ್ಕೆ ನಾಗರಿಕರು ಸಹಕರಿಸಬೇಕು ಎಂದರು.
ಕಾರ್ಯಾಚರಣೆ ಹೇಗೆ ?
‘24x7 ಮನೆ ಬಾಗಿಲಿಗೆ ಉಚಿತ ಸೇವೆ’ ನಾಗರಿಕರು ತಮ್ಮ ಕುಟುಂ ಬದ ಸದಸ್ಯರಿಗೆ ಜ್ವರ ಕಾಣಿಸಿ ಕೊಂಡರೆ 9448556872 ಮೊಬೈಲ್ ಸಂಖ್ಯೆಗೆ ಕರೆ ಮಾಡ ಬಹುದು. ಕರೆ ಸ್ವೀಕರಿಸುವ ಮೊಬೈಲ್ ಯುನಿಟ್(ಉಚಿತ ಸೇವೆ ನೀಡುವ ಓಮ್ನಿ ವಾಹನ)ನ ಸಿಬ್ಬಂದಿ ಕರೆ ಮಾಡಿದವರ ಮನೆ ಬಾಗಿಲಿಗೆ ಬಂದು ಅವರ ರಕ್ತದ ಮಾದರಿಯನ್ನು ಪಡೆದು ಪರೀಕ್ಷೆಗೊಳಪಡಿಸುತ್ತಾರೆ. ಈ ವೇಳೆ ಮಲೇರಿಯಾದ ಲಕ್ಷಣಗಳು ಕಂಡುಬಂದಲ್ಲಿ ಈ ಯುನಿಟ್ನಿಂದ ಸ್ಥಳದಲ್ಲೇ ಉಚಿತ ವೈದ್ಯಕೀಯ ಸೇವೆ ಸಹಿತ ಉಚಿತ ಔಷಧಿಯನ್ನೂ ಒದಗಿಸಲಾಗುತ್ತದೆ. ಈ ಸೇವೆಯು ಮಂಗಳೂರು ಮಹಾನಗರ ಪಾಲಿಕೆಯ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದು, ನಾಗರಿಕರಿಗೆ 24 ಗಂಟೆಗಳ ಕಾಲ ಸೇವೆ ಲಭ್ಯವಿದೆ.







