ಎಸಿಪಿ(ಸಂಚಾರ) ನೇತೃತ್ವದಲ್ಲಿ ಹೀಗೊಂದು ಹೊಸ ಹೆಜ್ಜೆ!
ಸುಗಮ ಸಂಚಾರ: ಕರ್ತವ್ಯ ಪಾಲನೆಯಲ್ಲಿ ನಿರ್ಲಕ್ಷ ಬೇಡ

ಮಂಗಳೂರು, ಮಾ. 20: ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯ ನಡುವೆ ಸುಗಮ ಸಂಚಾರ ನಿರ್ವಹಣೆಯ ಜತೆಗೆ ಸಾರ್ವಜನಿಕರ ಜತೆ ಮಾನವೀಯತೆ, ಸೌಜನ್ಯದ ವರ್ತನೆಯ ಮೂಲಕ ಹೇಗೆ ವರ್ತಿಸಬೇಕೆಂಬ ನಿಟ್ಟಿನಲ್ಲಿ ವಿಶೇಷ ಹಾಗೂ ಅನೌಪಚಾರಿಕ ಕಾರ್ಯಕ್ರಮವೊಂದು ಇಂದು ಕದ್ರಿಯ ಸಂಚಾರ ಪೊಲೀಸ್ ಠಾಣೆಯಲ್ಲಿ ನಡೆಯಿತು.
ಇತ್ತೀಚೆಗೆ ನಗರದಲ್ಲಿ ಸಂಚಾರ ಪೊಲೀಸ್ ಸಿಬ್ಬಂದಿಯೊಬ್ಬರ ಕರ್ತವ್ಯ ನಿರ್ಲಕ್ಷವನ್ನು ಉಲ್ಲೇಖಿಸಿ ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಹಾಗೂ ಎಸಿಪಿ (ಸಂಚಾರ) ಉದಯ ನಾಯಕ್ ಅವರಿಗೆ ನಗರದ ಪತ್ರಕರ್ತ ಮಿತ್ರರ ತಂಡವೊಂದು ಕಳಕಳಿಯ ಮನವಿಯೊಂದನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ತಕ್ಷಣ ಸ್ಪಂದಿಸಿರುವ ಅಧಿಕಾರಿಗಳು, ಸಂಬಂಧಪಟ್ಟ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಸಂಚಾರ ಪೊಲೀಸ್ ಇಲಾಖೆಯು ಮಾಧ್ಯಮ ಮಿತ್ರರು ಹಾಗೂ ಸಂಚಾರ ಸಿಬ್ಬಂದಿಗಳ ಜತೆ ಸಂವಾದಕ್ಕೂ ಇದೇ ಮೊದಲ ಬಾರಿಗೆ ಅವಕಾಶ ಕಲ್ಪಿಸುವ ಮೂಲಕ ಹೊಸ ಆಯಾಮಕ್ಕೆ ನಾಂದಿ ಹಾಡಿದ್ದಾರೆ. ರವಿವಾರ ಅನೌಪಚಾರಿಕವಾಗಿ ಎರಡು ಠಾಣಾ ವ್ಯಾಪ್ತಿಯ ಸಿಬ್ಬಂದಿಗಳ ಜತೆ ನಡೆದ ಈ ಸಂವಾದ ಕಾರ್ಯಕ್ರಮವನ್ನು ಮುಂದೆ ಜಿಲ್ಲೆ ಹಾಗೂ ನಗರ ಮಟ್ಟದಲ್ಲಿ ಔಪಚಾರಿಕವಾಗಿ ಹಿರಿಯ ಅಧಿಕಾರಿಗಳು, ಹಿರಿಯ ಮಾಧ್ಯಮ ಮಿತ್ರರು ಹಾಗೂಇತರರ ಜತೆ ನಡೆಸುವ ಮೂಲಕ ಸಿಬ್ಬಂದಿಗಳಲ್ಲಿ ಹೊಸ ಹುರುಪನ್ನು ತುಂಬಲು ಮುಂದಾಗಿದ್ದಾರೆ.
ನಗರ ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ಎಸಿಪಿ ಉದಯ ನಾಯಕ್ ನೇತೃತ್ವದಲ್ಲಿ ಇಂದಿನ ಸಂವಾದ ಕಾರ್ಯಕ್ರಮದಲ್ಲಿ ಸುಗಮ ಸಂಚಾರ ವ್ಯವಸ್ಥೆಯಲ್ಲಿ ಅಪಘಾತ ಹಾಗೂ ಇನ್ನಿತರ ಘಟನೆಗಳ ಸಂದರ್ಭ ಸಂಚಾರ ಪೊಲೀಸರು ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಹಿರಿಯ ಅಧಿಕಾರಿಗಳು ಸಲಹೆ, ಸೂಚನೆಗಳನ್ನು ನೀಡಲಾಯಿತು.
ಎಸಿಪಿ ಉದಯ ನಾಯಕ್ ಮಾತನಾಡುತ್ತಾ, ಕರ್ತವ್ಯದ ವೇಳೆ ಪಾಕೆಟ್ ಡೈರಿಯಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿ ವಾಹನಗಳ ಸಂಖ್ಯೆಯನ್ನು ನಮೂದು ಮಾಡುವ ಕೆಲಸ ಮಾಡುವುದಲ್ಲದೆ, ಅಪಘಾತದ ವೇಳೆ ಸ್ಥಳದಲ್ಲಿರುವ ಸಿಬ್ಬಂದಿ ತಕ್ಷಣ ಪೂರಕವಾಗಿ ಸ್ಪಂದಿಸಿ ಅಪಘಾತಕ್ಕೀಡಾದವರಿಗೆ ನೆರವು ನೀಡುವಲ್ಲಿ ಯಾವುದೇ ಹಿಂಜರಿಕೆ ತೋರಬಾರದು ಎಂದು ಸಲಹೆ ನೀಡಿದರು.
ಸಂಚಾರ ವ್ಯವಸ್ಥೆಗೆ ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಹೋಂಗಾರ್ಡ್ಗಳ ನೆರವು ಪಡೆಯಲಾಗಿದ್ದು, ಪ್ರಸ್ತುತ 12 ಮಂದಿ ನಗರ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಗರದ ಕೆಲವೊಂದು ಪ್ರಮುಖ ರಸ್ತೆಗಳಲ್ಲಿ ಕಾಮಗಾರಿಗಳಿಂದಾಗಿ ಅಡಚಣೆಯಾಗಿದ್ದು ಶೀಘ್ರವೇ ಅವುಗಳು ಸಂಚಾರ ಮುಕ್ತವಾಗುವ ಮೂಲಕ ಬಹುತೇಕ ಸಮಸ್ಯೆಗಳು ಬಗೆಹರಿಯಲಿವೆ. ಟ್ರಾಫಿಕ್ ವಾರ್ಡನ್ಗಳೂ ಕರ್ತವ್ಯದಲ್ಲಿದ್ದು, ಸಾರ್ವಜನಿಕರು ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಬೇಕಾಗಿದೆ ಎಂದು ಅವರು ಅಭಿಪ್ರಾಯಿಸಿದರು.
ಸಿಬ್ಬಂದಿಗಳ ಕೊರತೆ, ಒತ್ತಡದ ನಡುವೆಯೂ ಸಿಬ್ಬಂದಿಗಳು ಸಾರ್ವಜನಿಕ ಪ್ರಯಾಣಿಕರ ಜತೆ ಸೌಜನ್ಯ ಹಾಗೂ ಮಾನವೀಯತೆಯ ಪ್ರದರ್ಶನದ ಮೂಲಕ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಸಂಚಾರ ಇನ್ಸ್ಪೆಕ್ಟರ್ ಸುರೇಶ್ ಕುಮಾರ್ ಪಿ. ಹೇಳಿದರು.
ಇನ್ಸ್ಪೆಕ್ಟರ್ ಮೋಹನ್ ಕೆ. ಸೇರಿದಂತೆ ಅಧಿಕಾರಿಗಳು ಹಾಗೂ 50ಕ್ಕೂ ಅಧಿಕ ಸಿಬ್ಬಂದಿ ಉಪಸ್ಥಿತರಿದ್ದರು.
ಸುಗಮ ಸಂಚಾರಕ್ಕೆ ಸಾರ್ವಜನಿಕರೂ ಕೈ ಜೋಡಿಸಿ...
ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಕಳೆದ ಸಾಲಿನಲ್ಲಿ 1.55 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ. ನಗರದಲ್ಲಿ 280 ಸಂಚಾರ ಪೊಲೀಸ್ (ಅಧಿಕಾರಿಗಳು ಸೇರಿದಂತೆ) ಸಿಬ್ಬಂದಿ ಬಲದಲ್ಲಿ ಇರುವವರ ಸಂಖ್ಯೆ 118 ಮಾತ್ರ. ಅದರಲ್ಲೂ ಬಹುತೇಕರು ಅನ್ಯ ಕಾರ್ಯಗಳಲ್ಲಿ ನಿರತರಾಗಿರುವುದರಿಂದ ಸಂಚಾರ ವ್ಯವಸ್ಥೆಯಲ್ಲಿ ದಿನದಲ್ಲಿ ಸುಮಾರು 80ಮಂದಿಯಷ್ಟು ಮಾತ್ರವೇ ಕರ್ತವ್ಯದಲ್ಲಿರುತ್ತಾರೆ.
2011ರ ನೇಮಕಾತಿಯ ಬಳಿಕ 2016ರಲ್ಲಿ 47 ಮಂದಿ ಸಂಚಾರ ಪೊಲೀಸ್ ಸಿಬ್ಬಂದಿಗಳ ನೇಮಕಾತಿ ನಡೆದಿದ್ದು, ಅವರು ಸದ್ಯ ತರಬೇತಿಯಲ್ಲಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ಅವರು ಕರ್ತವ್ಯಕ್ಕೆ ಹಾಜರಾಗುವ ಮೂಲಕ ಸಾಕಷ್ಟುಸಮಸ್ಯೆಗಳು ಬಗೆ ಹರಿಯುವ ನಿರೀಕ್ಷೆ ಇದೆ. ಇದರ ಜತೆ ಸಾರ್ವಜನಿಕರು ಕೂಡಾ ಸುಗಮ ಸಂಚಾರ ವ್ಯವಸ್ಥೆಯಲ್ಲಿ ಕೈಜೋಡಿಸುವ ಮೂಲಕ ನಗರದಲ್ಲಿ ಉತ್ತಮ ಸಂಚಾರ ವ್ಯವಸ್ಥೆಗೆ ಸಹಕರಿಸಬೇಕು ಎಂದು ಎಸಿಪಿ ಉದಯ ನಾಯಕ್ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರಿಗಳೂ ಸೇರಿದಂತೆ ವಿದ್ಯಾವಂತರು ಕೂಡಾ ವಾರದಲ್ಲಿ ಸುಮಾರು 6 ಗಂಟೆಗಳ ಅವಧಿ ಟ್ರಾಫಿಕ್ ವಾರ್ಡನ್ಗಳಾಗಿ ತಮ್ಮದೇ ವೆಚ್ಚದಲ್ಲಿ ಉಚಿತವಾಗಿ ಕರ್ತವ್ಯ ನಿರ್ವಹಿಸಲು ಅತ್ಯಂತ ಮುತುವರ್ಜಿ ತೋರಿಸುತ್ತಿದ್ದಾರೆ. ಸುಮಾರು 760 ಮಂದಿ ಟ್ರಾಫಿಕ್ ವಾರ್ಡನ್ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರು ನಗರದಲ್ಲಿ ಮಾತ್ರ ಇಂತಹ ಆಸಕ್ತಿ ಇಲ್ಲವಾಗಿದೆ. ಯುವಕರು ಈ ಬಗ್ಗೆ ಪೊಲೀಸರ ಜತೆ ಸಹಕರಿಸಿದರೆ ಸುಗಮ ಸಂಚಾರಕ್ಕೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂದು ಎಸಿಪಿ ಉದಯ ನಾಯಕ್ ಹೇಳಿದರು.
ನಮ್ಮದು ಗುತ್ತಿಗೆಯ ಬದುಕು: ಇದು ಟ್ರಾಫಿಕ್ ಸಿಬ್ಬಂದಿ ಅಳಲು
ಸಂಚಾರ ಪೊಲೀಸ್ ಸಿಬ್ಬಂದಿ ಪರವಾಗಿ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡ ಗಜೇಂದ್ರ ಹಾಗೂ ಜ್ಞಾನಶೇಖರ್, ಸಂಚಾರ ಪೊಲೀಸರಿಗೆ ರಾತ್ರಿ ಹೊತ್ತು ಮಲಗಲು ಸಿಗುವ ನಾಲ್ಕೈದು ಗಂಟೆಗಳ ಕಾಲವೂ ಸುಖ ನಿದ್ದೆ ಸಾಧ್ಯವಾಗುವುದಿಲ್ಲ. ರಾತ್ರಿಯಲ್ಲೂ ಅವರ ಕಿವಿಗಳಿಗೆ ಬಸ್ಸುಗಳ ಹಾರ್ನ್ಗಳ ಶಬ್ಧವೇ ಕೇಳುತ್ತಿರುತ್ತದೆ.
ಕುಟುಂಬ ಜೀವನದಿಂದ ದೂರವೇ ಇದ್ದು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ನೀಡಲಾಗುವುದಿಲ್ಲ. ಮನೆ ಕಟ್ಟಲು ಬ್ಯಾಂಕ್ನಲ್ಲಿ ಸಾಲಕ್ಕೆ ಮುಂದಾದರೂ ಹಲವಾರು ತಾಪತ್ರಯಗಳು. ಕೆಟ್ಟು ಹೋದ ರಸ್ತೆಗಳು, ಸಾರ್ವಜನಿಕ ಪ್ರಯಾಣಿಕರಿಂದ ಬಿರುಸಿನ ನುಡಿಗಳು, ನಗರದ ವಾಹನ ದಟ್ಟಣೆಯ ಸಿಗ್ನಲ್ಗಳಲ್ಲಿ ಎಲ್ಲರಿಗೂ ಅವಸರ. ಇವೆಲ್ಲದರದ ನಡುವೆ ನಮ್ಮದು ಗುತ್ತಿಗೆಯ ಬದುಕಾಗಿ ಬಿಟ್ಟಿದೆ ಎಂದು ಬೇಸರಿಸಿದರು.







