ಜೀರ್ಣೋದ್ಧಾರ ಪಿಡುಗಿನಿಂದ ರಕ್ಷಿಸಲು ‘ಪಂಚಶಕ್ತಿ ಬನ’ ಸೃಷ್ಟಿ

ಹೆಬ್ರಿ, ಮಾ.20: ಉಡುಪಿಯ ‘ನಮ್ಮ ಮನೆ, ನಮ್ಮ ಮರ’ ತಂಡದ ವತಿಯಿಂದ ಪಂಚಶಕ್ತಿ ಬನವನ್ನು ಸೃಷ್ಟಿಸುವ ಹಾಗೂ ಉರಗತಜ್ಞ ಗುರುರಾಜ್ ಸನಿಲ್ ಅವರ ‘ಹುತ್ತದ ಸುತ್ತಮುತ್ತ’ ಕೃತಿಯ ಬಿಡುಗಡೆ ಕಾರ್ಯಕ್ರಮ ರವಿವಾರ ಹೆಬ್ರಿ ಶಿವಪುರದ ಮುಕ್ಕಾಣಿ ಗ್ರಾಮದಲ್ಲಿ ನಡೆಯಿತು.
ಕರಾವಳಿಯಲ್ಲಿ ವ್ಯಾಪಕವಾಗಿರುವ ನಾಗಬನಗಳು ಇಂದು ಅಳಿಯುತ್ತಿರುವ ಹಿನ್ನೆಲೆಯಲ್ಲಿ ಅದರ ರಕ್ಷಣೆ ಹಾಗೂ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉದ್ಯಮಿ ಮುಹಮ್ಮದ್ ಅನ್ಸಾರ್ ಶಿವಪುರದಲ್ಲಿ ನೀಡಿರುವ ಆರು ಸೆಂಟ್ಸ್ ಜಾಗದಲ್ಲಿ ಹುತ್ತದ ಸಹಿತ ಪಂಚಶಕ್ತಿ ಬನವನ್ನು ನಿರ್ಮಿಸ ಲಾಗುತ್ತಿದೆ. ಇಲ್ಲಿ ಗಿಡ ನೆಡುವ ಮೂಲಕ ಅನ್ಸಾರ್ ಹಾಗೂ ಉದ್ಯಮಿ ಗಣೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಶ್ವತ್ಥ, ಆಲ, ರೆಂಜೆ, ಸುರಗಿ, ಕರ್ಮಾರು, ಹೆಬ್ಬಲಸು, ಹಲಸು, ಮಾವು, ನೇರಳೆ, ಹಾಲೇಮರ, ರಾಂಪತ್ರೆ, ಕುಂಟಾಲ, ರಾಮಫಲ, ಲಕ್ಷಣಫಲ, ಸೀತಾಫಲ, ನೇರಳೆ, ಕಿಸ್ಕಾರ, ನೆಲ್ಲಿ, ಬಿಲ್ವಪತ್ರೆ, ಅಶೋಕ, ಗುಲಗಂಜಿ ಸೇರಿದಂತೆ 51 ಪ್ರಭೇದಗಳ ಸಸಿಗಳನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರು ವೈಜ್ಞಾನಿಕ ರೀತಿಯಲ್ಲಿ ನೆಟ್ಟರು.
ಬಳಿಕ ಅಲ್ಲೇ ಸಮೀಪದ ಕಾಡಿನಲ್ಲಿ ನಡೆದ ಸಮಾರಂಭ ದಲ್ಲಿ ಗುರುರಾಜ್ ಸನಿಲ್ ಅವರ ಐದನೆ ಕೃತಿ ‘ಹುತ್ತದ ಸುತ್ತಮುತ್ತ’ವನ್ನು ಅವಿನಾಶ್ ಕಾಮತ್ ಬಿಡುಗಡೆಗೊಳಿಸಿದರು. ಅಂಕಣಕಾರ ನರೇಂದ್ರ ರೈ ದೇರ್ಲ ಕೃತಿ ಪರಿಚಯ ಮಾಡಿದರು.
‘ಗೇರುಬೀಜ ಫ್ಯಾಕ್ಟರಿ ಆರಂಭಿಸಲು ಮುಹಮ್ಮದ್ ಅನ್ಸಾರ್ ಇಲ್ಲಿನ ಜಾಗವನ್ನು ಖರೀದಿಸಿದ್ದರು. ಜಾಗ ಸಮತಟ್ಟು ಮಾಡುವ ವೇಳೆ ಇಲ್ಲಿ ಹುತ್ತವೊಂದು ಕಂಡುಬಂತು. ಅದನ್ನು ಪರಿಶೀಲಿಸುವಾಗ ಅದರಲ್ಲೊಂದು ಮರ ಹಾವು ಇತ್ತು. ಹಾವು ಸೇರಿದಂತೆ ಅಪಾರ ಜೀವವೈವಿಧ್ಯ ಹಾಗೂ ಸಸ್ಯಸಂಕುಲಗಳ ವಾಸಸ್ಥಾನವಾಗಿರುವ ನಾಗಬನಗಳ ನಾಶದ ಬಗ್ಗೆ ಅನ್ಸಾರ್ಗೆ ತಿಳಿಹೇಳಿದೆ. ಈ ಬಗ್ಗೆ ಮನದಟ್ಟಾಗಿ ಅವರು ತಮ್ಮ ಜಾಗದಲ್ಲಿ ಆರು ಸೆಂಟ್ಸ್ ಜಾಗವನ್ನು ನಾಗಬನ ಸೃಷ್ಟಿಗೆ ಅವಕಾಶ ಮಾಡಿಕೊಟ್ಟರು’ ಎಂದು ಗುರುರಾಜ್ ಸನಿಲ್ ತಿಳಿಸಿದರು.
ಈ ಬನಕ್ಕೆ ಜೀರ್ಣೋದ್ಧಾರದ ಪಿಡುಗು ತಗಲಿ ಮುಂದೆ ಕಾಂಕ್ರಿಟ್ ನಾಗಬನ ಆಗದಂತೆ ನೋಡಿಕೊಳ್ಳಲು ಪಂಚಶಕ್ತಿ ಬನವನ್ನು ಸೃಷ್ಟಿ ಮಾಡಲಾಗಿದೆ. ಇಲ್ಲಿ ನೆಟ್ಟ ಗಿಡಗಳಿಗೆ ಒಂದು ವರ್ಷ ನೀರು ಹಾಕಿದರೆ ಸಾಕು. ಮುಂದೆ ಅದೇ ಬೆಳೆದು ಸಹಸ್ರಾರು ಜೀವವೈವಿಧ್ಯಗಳಿಗೆ ಆಸರೆಯಾಗಲಿದೆ ಎಂದವರು ಹೇಳಿದರು.
ನಾಗಬನಗಳಲ್ಲಿ ಸಾಕಷ್ಟು ಜಾತಿಯ ಮರಗಳಿರುತ್ತವೆ. ಅಲ್ಲಿ ಹಲವು ಜಾತಿಯ ಪ್ರಾಣಿ, ಪಕ್ಷಿಗಳು, ಕೀಟಗಳು ಬದುಕುತ್ತಿರುತ್ತವೆ. ಆದರೆ ಇದೀಗ ನಾಗಬನಗಳನ್ನು ನಾಶ ಮಾಡುವ ಮೂಲಕ ಅಸಂಖ್ಯ ಜೀವಜಾಲಗಳನ್ನೇ ನಾಶಮಾಡುವ ಕೆಲಸ ನಡೆಯುತ್ತಿದೆ ಎಂದು ಅವರು ಖೇದ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಪ್ರಸಾದ್, ಶಶಿಧರ್, ಕಲ್ಲೂರ ನಾಗೇಶ್, ಯಶೋಧರ್ ಮೊದಲಾದವರು ಉಪಸ್ಥಿತರಿದ್ದರು. ರಂಗಭೂಮಿ ಕಲಾವಿದ ರವಿರಾಜ್ ಎಚ್.ಪಿ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







