ಮಂಗಳೂರು : ಸ್ವಾವಲಂಬನೆಯ ಹಾದಿಯಲ್ಲಿ ನವಸಾಕ್ಷರರ ವೃತ್ತಿ ಕೌಶಲ್ಯ ತರಬೇತಿ

ಮಂಗಳೂರು.ಮಾ.21:ಜಿಲ್ಲೆಯಲ್ಲಿ ಸಾಕ್ಷರತೆಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ನವಸಾಕ್ಷರರು ಕಲಿಕೆಯೊಂದಿಗೆ ಗಳಿಕೆ ಸ್ವಾವಲಂಬನೆಯ ಹಾದಿಯಲ್ಲಿ ಸಾಗಲು ನವಸಾಕ್ಷರರ ವೃತ್ತಿ ಕೌಶಲ್ಯ ತರಬೇತಿ ಶಿಬಿರ ನಡೆದಿದೆ.
ಈ ವೃತ್ತಿ ಕೌಶಲ ತರಬೇತಿ ಶಿಬಿರದ ಮೂಲಕ ಕಳೆದ ಮೂರು ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 42 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 44 ಕೇಂದ್ರಗಳ ಮೂಲಕ 613ಮಂದಿ ತರಬೇತಿ ಪಡೆದಿದ್ದಾರೆ.ಈ ತರಬೇತಿಯ ಮೂಲಕ ದೈನಂದಿನ ಬಳಕೆಯ ಸಾಮಾಗ್ರಿಗಳಾದ ಹರ್ಬಲ್ ಫಿನಾಯಿಲ್,ಸಾಬೂನು ,ಸಾಬೂನು ದ್ರಾವಣ,ಸಾಬೂನು ಪೌಡರ್,ಕ್ಲೆನಿಂಗ್ ಪೌಡರ್ ತಯಾರಿಯ ಬಗ್ಗೆ ತರಬೇತಿ ನೀಡಲಾಗಿದೆ. ತರಬೇತಿಯಲ್ಲಿ 592 ಮಹಿಳೆಯರು ಮತ್ತು 21ಪುರುಷರು ಸೇರಿದ್ದಾರೆ.ಈ ಪೈಕಿ 156 ಮಂದಿ ಪರಿಶಿಷ್ಟ ಜಾತಿ,84ಮಂದಿ ಪರಿಶಿಷ್ಟ ಪಂಗಡದವರು,99 ಅಲ್ಪ ಸಂಖ್ಯಾತ ಸಮುದಾಯದವರು ಇತರ 274ಮಹಿಳೆಯರು ತರಬೇತಿ ಪಡೆದಿರುತ್ತಾರೆ.ವ್ಯಕ್ತಿತ್ವ ವಿಕಾಸ ,ಕಲಿಕೆ,ಜೀವನ ಸಮೃದ್ಧಿ ,ಸ್ವಚ್ಛತೆ ,ಮಹಾತ್ಮ ಗಾಂಧಿ ನರೇಗಾ,ಸೌರಶಕ್ತಿ ಬಳಕೆ ಇತ್ಯಾದಿ ವಿಷಯಗಳ ಕುರಿತಾದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪ್ರೇರಕರು ಸಂಪನ್ಮೂ ಲ ವ್ಯಕ್ತಿಗಳಾಗಿ ಯಶಸ್ವಿಯಾಗಿ ನಡೆಸಿರುತ್ತಾರೆ.ಈ ತರಬೇತಿಯ ಮೂಲಕ ತಯಾರಿಸಲಾದ ಉತ್ಪನ್ನಗಳನ್ನು ಗ್ರಾಮ ಪಂಚಾಯತ್ಗಳ ಸಹಕಾರದೊಂದಿಗೆ ಗ್ರಾಮ ವಿಕಾಸ ಕೇಂದ್ರ ಮತ್ತು ಅಕ್ಷರ ಅಂಗಡಿಗಳ ಮೂಲಕ ಮಾರಾಟ ಮಾಡಲು ತರಬೇತಿಯ ಸಂದರ್ಭದಲ್ಲಿ ಪ್ರೋತ್ಸಾಹ ನೀಡಲಾಗಿದೆ.ಇದರೊಂದಿಗೆ ಮಹಿಳೆಯರ ಸ್ವ ಉದ್ಯೋಗ ಮತ್ತು ಸ್ವಾವಲಂಬನೆಯ ಬದುಕಿಗೆ ಪೋತ್ಸಾಹ ನೀಡಲಾಗುತ್ತಿದೆ. ಈ ಬಾರಿಯ ವೃತ್ತಿ ಕೌಶಲ ತರಬೇತಿ ನಡೆಸಲು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಸಕ್ತಿವಹಿಸಿ ಪ್ರೇರಣೆ ,ಪ್ರೊತ್ಸಾಹ ನೀಡಿದ್ದಾರೆ.ತರಬೇತಿಯ ಅವಧಿಯಲ್ಲಿ 3 ಪ್ರಗತಿ ಪರಿಶೀಲನಾ ಸಭೆ ನಡೆದಿದೆ ಈ ಸಭೆಯಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ,ಕಾರ್ಯಕ್ರಮ ಅಧಿಕಾರಿ,ಮಹಾತ್ಮ ಗಾಂಧಿ ನರೇಗಾ ಮಾಜಿ ಒಂಬುಡ್ಸ್ ಮನ್ ,ಜನಶಿಕ್ಷಣ ಟ್ರಸ್ಟ್ ಸಂಯೋಜಕರು ,ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು,ಪಂಚಾಯತ್ ಅಧ್ಯಕ್ಷರು,ವೃತ್ತಿ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ ಶಿಕ್ಷಣಾರ್ಥಿಗಳಿಗೆ ಹಾಗೂ ತರಬೇತಿ ನಡೆಸುವವರಿಗೆ ಪ್ರೇರಣೆ ಪೋತ್ಸಾಹ ನೀಡಿದ್ದಾರೆಂದು ತರಬೇತುದಾರರು,ಶಿಬಿರಾರ್ಥಿಗಳು ತಿಳಿಸಿದ್ದಾರೆ.‘‘ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ತಮಗೆ ತಾವೆ ಸಹಾಯ ಮಾಡಿಕೊಳ್ಳುವ ಮೂಲಕ ಸ್ವಾವಲಂಬನೆಯ ಬದುಕನ್ನು ಸಾಗಿಸಲು ಬೇಕಾಗುವ ವೃತ್ತಿ ಕೌಶಲ್ಯವನ್ನು ಮೈಗೂಡಿಸಿಕೊಳ್ಳಲು;ಬದುಕಿನಲ್ಲಿ ಕಲಿಕೆ,ದುಡಿಮೆ,ಜೀವನ ಸಮೃದ್ಧಿ,ಸ್ವಚ್ಛತೆಯ ವೌಲ್ಯಗಳನ್ನು ಅಳವಡಿಸಿಕೊಳ್ಳಲು ಈ ರೀತಿಯ ಸ್ವಯಂ ಕಲಿಕೆಯ ಶಿಬಿರಗಳು ಸಹಕಾರಿ’’ ಎಂದು ಮಹಾತ್ಮ ಗಾಂಧಿ ನರೇಗಾ ಮಾಜಿ ಒಂಬುಡ್ಸ್ಮೆನ್ ಶೀನ ಶೆಟ್ಟಿ ತಿಳಿಸಿದ್ದಾರೆ.
ಕೇಂದ್ರದಲ್ಲಿ ತರಬೇತಿ ಪಡೆದ ನವಸಾಕ್ಷರರಿಗೆ ಮಾರ್ಚ್ 22ರಂದು ಜೀವನ ಸಮೃದ್ಧಿ ಶಿಕ್ಷಣ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಮುಡಿಪು ಜನಶಿಕ್ಷಣ ಟ್ರಸ್ಟ್ ಕಚೇರಿಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಜನಶಿಕ್ಷಣ ಟ್ರಸ್ಟ್ನ ನಿರ್ದೇಶಕರಾದ ಕೃಷ್ಣ ಮೂಲ್ಯ ತಿಳಿಸಿದ್ದಾರೆ.

ಕೊಳ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಂದ್ರದಲ್ಲಿ ಫಿನಾಯಿಲ್,ಸೋಪು ತಯಾರಿ ಹಾಗೂ ಇತರ ವೃತ್ತಿ ಕೌಶಲ ಪಡೆದಿರುವ ಮಹಿಳಾ ತಂಡ,ಮಂಗಳೂರು ತಾಲೂಕಿನ ಎದುರು ಪದವು ಕೇಂದ್ರದಲ್ಲಿ ಮಹಿಳೆಯರು ಸಾಬೂನು,ಇತರ ಕರಕುಶಲ ಸಾಮಗ್ರಿಗಳನ್ನು ತಯಾರಿಸುವ ತರಬೇತಿ ನೀಡುತ್ತಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ನವಸಾಕ್ಷರ ಮಹಿಳೆಯರು.







