ಉಪ್ಪಿನಂಗಡಿ: .ಕ. ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಪ್ರತಿನಿಧಿಗಳ ಸಂಗಮ
ಭಯೋತ್ಪಾದನೆಯು ಹೇಡಿಗಳ ಸಂಕೇತ: ಅಡ್ವೋಕೇಟ್ ಓನಂಪಳ್ಳಿ ಪೈಝಿ
ಉಪ್ಪಿನಂಗಡಿ: ಭಯವಿರುವವನು ಮಾತ್ರ ಭಯೋತ್ಪಾಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾನೆ. ಸಮಾಧಾನದಲ್ಲಿರುವವನು ಯಾವಾಗಲೂ ಧೀರನಾಗಿರುತ್ತಾನೆ. ನಮಗೆ ಯಾರದೇ ಭಯವಿಲ್ಲ. ಆದ್ದರಿಂದ ನಾವು ಸಮಾಜಘಾತುಕ ಶಕ್ತಿಗಳ ವಿರುದ್ಧ ಧೈರ್ಯದಿಂದಲೇ ಹೋರಾಡುತ್ತೇವೆ ಎಂದು ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಉಪಾಧ್ಯಕ್ಷ ಅಡ್ವೋಕೇಟ್ ಓನಂಪಳ್ಳಿ ಮುಹಮ್ಮದ್ ಫೈಝಿ ಹೇಳಿದರು.
ಉಪ್ಪಿನಂಗಡಿಯ ಪೆರ್ನೆ ಎ.ಎಂ. ಅಡಿಟೋರಿಯಂನಲ್ಲಿ ನಡೆದ ದ.ಕ. ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಪ್ರತಿನಿಧಿಗಳ ಸಂಗಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು
ಜಾತ್ಯಾತೀತ ವ್ಯವಸ್ಥೆ ಎಂಬುವುದು ಭಾರತದ ಸಂವಿಧಾನದ ರಚನೆಯ ಸಂದರ್ಭದಲ್ಲಿ ನಡೆಸಿದ ಒಡಂಬಡಿಕೆ ಆಗಿತ್ತು. ಆ ಒಡಂಬಡಿಕೆಯು ಚಾಲ್ತಿಯಲ್ಲಿರುವ ವರೆಗೂ ಸಂವಿಧಾನಕ್ಕೆ ಬದ್ದವಾಗಿ ಬದುಕಲು ಇಲ್ಲಿನ ಮುಸ್ಲಿಮರು ಸಿದ್ದರಿದ್ದಾರೆ. ಯಾವುದೇ ದೇಶದ್ರೋಹ ಸಂಘಟನೆಗಳಿಗೂ ಭಾರತದ ಜಾತ್ಯಾತೀತ ಪರಂಪರೆಯನ್ನು ಹೊಡೆದುರುಳಿಸಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದರು.
ಉಗ್ರ ಚಿಂತನೆಗಳನ್ನು ಎಸ್ಕೆಎಸ್ಸೆಸ್ಸೆಫ್ ಪ್ರೋತ್ಸಾಹಿಸುವುದಿಲ್ಲ. ನಾವು ಐಎಸ್ಐಗಳನ್ನು ಸೃಷ್ಟಿಸಲಿಲ್ಲ ಬದಲಾಗಿ ಎರಡು ಐಎಎಸ್ ಅಧಿಕಾರಿಗಳನ್ನು ಸಮಾಜಕ್ಕೆ ಸಮರ್ಪಿಸಿದ್ದೇವೆ ಎಂದು ಓನಂಪಳ್ಳಿ ಫೈಝಿ ಹೇಳಿದರು.
" ಸಂಘಟನೆ ಮತ್ತು ಭಯೋತ್ಪಾದನೆ" ಎಂಬ ವಿಷಯದ ಬಗ್ಗೆ ಮಾತನಾಡಿದ ಎಸ್ವೈಎಸ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಹಮೀದ್ ಫೈಝಿ ಅಂಬಲಕ್ಕಡವು ಮಾತನಾಡಿ, ಇಸ್ಲಾಂ ಧರ್ಮದ ತತ್ವ ಸಿದ್ಧಾಂತಗಳನ್ನು ದುರುಪಯೋಗಪಡಿಸಿಕೊಂಡು ನಕಲಿ ಧರ್ಮ ಯುದ್ಧಕ್ಕೆ ಪ್ರೋತ್ಸಾಹ ನೀಡುವ ಸಂಘಟನೆಗಳು ಇಸ್ಲಾಮಿನ ಶತ್ರುಗಳಾಗಿದ್ದು, ಅಂತಹವರ ಬಗ್ಗೆ ಜನಜಾಗೃತಿ ಮೂಡಿಸಲು ಎಸ್ಕೆಎಸ್ಸೆಸ್ಸೆಫ್ ಸದಾ ಸಕ್ರೀಯವಾಗಿದೆ ಎಂದು ಹೇಳಿದರು. ಮಧ್ಯ ಏಷಿಯಾದಲ್ಲಿ ನಡೆಯುತ್ತಿರುವ ಅಮಾನುಷ್ಯ ಕೃತ್ಯಗಳನ್ನು ನಾಗರೀಕ ಸಮಾಜ ಯಾವತ್ತೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಐಸಿಸ್ ಎಂಬುವುದು ಇಸ್ಲಾಮಿಕ್ ವಿರೋಧಿ ಶಕ್ತಿಗಳ ಸೃಷ್ಟಿಯಾಗಿದ್ದು, ಅವುಗಳನ್ನು ಕಠಿಣ ಶಬ್ಧಗಳಲ್ಲಿ ವಿರೋಧಿಸುತ್ತೇವೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷರಾದ ಇಸ್ಹಾಕ್ ಫೈಝಿ ಕುಕ್ಕಿಲ ವಹಿಸಿದ್ದರು. ಬಂದರು ಝೀನತ್ ಬಕ್ಷ್ ಮಸೀದಿ ಖತೀಬ್ ಸದಕತುಲ್ಲಾ ಫೈಝಿ ಉದ್ಘಾಟಿಸಿದರು. ಎಸ್ಕೆಎಸ್ಸೆಸ್ಸೆಫ್ ರಾಜ್ಯಧ್ಯಕ್ಷ ಮೌಲಾನಾ ಅನೀಸ್ ಕೌಸರಿ, ಮುಸ್ತಫಾ ಹಾಜಿ ಕೆಂಪಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಕುಂಬ್ರ ಕೆಐಸಿ ಸಂಚಾಲಕ ಹುಸೈನ್ ದಾರಿಮಿ ರೆಂಜಲಾಡಿ, ಖಾಸಿಂ ದಾರಿಮಿ ಕೀನ್ಯ, ಅಬ್ಬಾಸ್ ದಾರಿಮಿ ಕೆಲಿಂಜ, ಹಮೀದ್ ದಾರಿಮಿ ಸಂಪ್ಯ, ಆತೂರು ತಂಙಳ್, ಕರಾವಳಿ ತಂಙಳ್, ಇಸ್ಮಾಯೀಲ್ ಯಮಾನಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷರಾಗಿ ಆಯ್ಕೆಯಾದ ಅನೀಸ್ ಕೌಸರಿ ಅವರನ್ನು ಜಿಲ್ಲ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ರಶೀದ್ ರಹ್ಮಾನಿ ಸ್ವಾಗತಿಸಿ, ಜಲೀಲ್ ಬದ್ರಿಯಾ ವಂದಿಸಿದರು.