ಮಹಿಳೆಯರು ರಾಜಕೀಯವಾಗಿ ಬೆಳೆಯುವುದು ಕಷ್ಟ: ರಮ್ಯಾ

ಬೆಂಗಳೂರು, ಮಾ. 21: ರಾಜಕೀಯದಲ್ಲಿ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿಯಿದೆ. ಹೀಗಾಗಿ ರಾಜಕೀಯದಲ್ಲಿ ಮಹಿಳೆಯರು ಬೆಳೆಯುವುದು ಕಷ್ಟ ಎಂದು ಮಾಜಿ ಸಂಸದೆ ಮತ್ತು ನಟಿ ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಪುರಭವನದಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಮಹಿಳೆಯರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆ ಎನ್ನುವ ಕಾರಣಕ್ಕಾಗಿ ರಾಜಕೀಯದಲ್ಲಿ ಮಹಿಳೆಯರನ್ನು ತುಳಿಯುವವರು ಹೆಚ್ಚಿದ್ದಾರೆ. ಈ ರೀತಿಯಾದ ಸಮಸ್ಯೆಗಳಿಂದ ರಾಜಕೀಯದಲ್ಲಿ ಮಹಿಳೆಯರು ಬೆಳೆಯಲು ಕಷ್ಟ ಎಂದರು.
ನಾನು ಚಿತ್ರರಂಗದ ಹಿನ್ನೆಲೆಯಲ್ಲಿ ಬಂದಿದ್ದರಿಂದ ಚುನಾವಣೆ ಯಲ್ಲಿ ಗೆಲ್ಲಲು ಕಷ್ಟವಾಗಲಿಲ್ಲ. ಆದರೆ ರಾಜಕೀಯದಲ್ಲಿ ಬೆಳೆಯಲು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಹೆಣ್ಣು ಎನ್ನುವ ಒಂದೇ ಒಂದು ಕಾರಣಕ್ಕಾಗಿ ರಾಜಕೀಯದಲ್ಲಿ ತುಳಿತಕ್ಕೆ ಒಳಗಾದೆ. ಈ ಪರಿಸ್ಥಿತಿ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರವಲ್ಲ ಎಲ್ಲ ಪಕ್ಷಗಳಲ್ಲೂ ಇವೆ ಎಂದು ಕಳವಳ ವ್ಯಕ್ತಪಡಿಸಿದರು.
ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಸಮಸ್ಯೆಗಳಿವೆ. ಈ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುವಲ್ಲಿ ವಿಫಲವಾಗುತ್ತಿದ್ದೇವೆ. ಮಹಿಳೆಯರಿಗೆ ಮಹಿಳೆಯರೇ ಸಹಾಯಕ್ಕೆ ನಿಂತಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಮಹಿಳೆಯರು ಸಂಘಟಿತರಾಗಬೇಕು. ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಪ್ರತಿ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿ, ನಮ್ಮ ದೇಶದಲ್ಲಿ ಮಹಿಳೆಯರಾಗಿ ಹುಟ್ಟಿರುವುದೇ ನಮ್ಮ ಭಾಗ್ಯ. ವಿಶ್ವದ ಬೇರೆ ಯಾವ ದೇಶದಲ್ಲಿರದ ಸ್ವಾತಂತ್ರ ನಮ್ಮ ದೇಶದ ಮಹಿಳೆಯರಿಗಿದೆ. ಆದರೆ ಸಾಂಪ್ರದಾಯಿಕ ಶೋಷಣೆ ನಮಗೆ ಮಾರಕವಾಗಿದೆ ಎಂದು ನೋವನ್ನು ತೋಡಿಕೊಂಡರು.
ದೇಶದಲ್ಲಿ ಮಹಿಳೆಯರನ್ನು ಎರಡನೆ ದರ್ಜೆ ಪ್ರಜೆಗಳಂತೆ ಕಾಣಲಾಗುತ್ತಿದೆ. ಸಮಾಜ ನಮ್ಮನ್ನೂ ಸಮಾನ ಪ್ರಜೆಗಳಂತೆ ಕಾಣಬೇಕು. ಪುರುಷರಿಂದ ನಮಗೆ ಕರುಣೆ, ಭಿಕ್ಷೆ, ಮಮಕಾರ ಬೇಕಿಲ್ಲ. ನಮಗೆ ಕೇವಲ ಗೌರವ, ಸಮಬಾಳು ನೀಡಿದರೆ ಸಾಕು ಎಂದು ಹೇಳಿದ ಅವರು, ಮಹಿಳೆಯರು ಜಾಣತನದಿಂದಲೇ ಬೆಳೆಯಬೇಕೇ ವಿನಃ ಯಾರನ್ನೂ ವಿರೋಧಿಸುವುದರಿಂದಾಗುವುದಿಲ್ಲ ಎಂದು ಹೇಳಿದರು.
ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಶೋಭಾ ಓಜಾ ಮಾತನಾಡಿ, ದೇಶದಲ್ಲಿ ಮೋದಿ ಸರಕಾರ ಬಂದಾಗಿನಿಂದಮಹಿಳೆಯರಿಗೆ ರಕ್ಷಣೆಯಿಲ್ಲದಂತಾಗಿದೆ. ದೇಶದಲ್ಲಿ ಅಪ್ರಾಪ್ತ ರ ಮೇಲೆ ಅತ್ಯಾಚಾರ, ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ಕೇಂದ್ರ ಸರಕಾರ ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದರು.
ಅತ್ಯಾಚಾರ ಮಾಡುವುದು ಎಷ್ಟು ಅಪರಾಧವೋ ಅದನ್ನು ಸಹಿಸಿ ಸುಮ್ಮನಿರುವುದೂ ಅಷ್ಟೇ ಅಪರಾಧ. ಹೀಗಾಗಿ ಅತ್ಯಾಚಾರ ಮತ್ತು ದೌರ್ಜನ್ಯಗಳ ವಿರುದ್ಧ ಮಹಿಳೆಯರು ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಹೇಳಿದ ಅವರು. ಕೇಂದ್ರ ಸರಕಾರ ಮಹಿಳೆಯರ ರಕ್ಷಣೆ ದೃಷ್ಟಿಯಿಂದ ಮಹಿಳಾ ಸುರಕ್ಷತಾ ವಿಲ್ ಅನ್ನು ಆದಷ್ಟು ಶೀಘ್ರದಲ್ಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಸಚಿವೆ ರಾಣಿ ಸತೀಶ್, ವಿಧಾನ ಪರಿಷತ್ ಸದಸ್ಯರಾದ ಮೊಟ್ಟಮ್ಮ, ಜಯಮಾಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮುಂದಿನ ಬಾರಿ ಜೆಂಡರ್ ಬಜೆಟ್
ಮುಂದಿನ ಬಜೆಟ್ ಅಧಿವೇಶನದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಮಹಿಳೆಯರಿಗೆ ವಿಶೇಷವಾಗಿ ಜೆಂಡರ್ ಬಜೆಟ್ ಮಂಡಿಸಲು ಸರಕಾರ ತೀರ್ಮಾನಿಸಿದೆ. ಅದೇ ರೀತಿ ಲೈಂಗಿಕ ಕಾರ್ಯ ಕರ್ತೆಯರು ಮತ್ತು ತೃತೀಯ ಲಿಂಗಿಗಳ ಕಲ್ಯಾಣಕ್ಕಾಗಿ ವಿಶೇಷವಾದ ಪಾಲಿಸಿಯನ್ನು ರೂಪಿಸಲಾಗುವುದು.
-ಉಮಾಶ್ರೀ, ಮಹಿಳಾ ಮತ್ತು ಮಕ್ಕಳ ಸಚಿವೆ
ನಾನು ಬಯಸಿಲ್ಲ
ನಾನು ಯಾವುದೇ ಸ್ಥಾನಮಾನವನ್ನು ಬಯಸಿಲ್ಲ. ವಿಧಾನಪರಿಷತ್ಗೆ ನನ್ನನ್ನು ಆಯ್ಕೆ ಮಾಡುವ ವಿಚಾರ ಪಕ್ಷಕ್ಕೆ ಸೇರಿದ್ದು. ಪಕ್ಷಕ್ಕೆ ಅನುಕೂಲವಾಗುವುದಾದರೆ ಯಾವುದೇ ಸ್ಥಾನ ಕೊಟ್ಟರೂ ನಿಭಾಯಿಸುವೆ.
-ರಮ್ಯಾ, ಮಾಜಿ ಸಂಸದೆ







