ಪರಿಶಿಷ್ಟಜಾತಿ ಗುಂಪಲ್ಲಿ ಇತರೆ ಜಾತಿ ಸೇರ್ಪಡೆ ಬೇಡ
ಲೋಕಸಭೆಯಲ್ಲಿ ಧ್ರುವನಾರಾಯಣ್ ಮನವಿ
ಚಾಮರಾಜನಗರ, ಮಾ.21: ಪರಿಶಿಷ್ಟ ಜಾತಿ ಗುಂಪಿನಲ್ಲಿ ಈಗಾಗಲೇ 1,206 ಜಾತಿಗಳಿದ್ದು, ಇತರ ಜಾತಿಗಳನ್ನು ಸೇರ್ಪಡೆ ಮಾಡಬಾರದು. ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿ ಸಮಾಜದ ಅಭಿವೃದ್ಧಿಗೆ ಅನುಗುಣವಾಗಿ ಕ್ರಮಕೈಗೊಳ್ಳಬೇಕು ಎಂದು ಸಂಸದ ಆರ್. ಧ್ರುವನಾರಾಯಣ ಆಗ್ರಹಿಸಿದ್ದಾರೆ.
ಹೊಸದಿಲ್ಲಿಯ ಲೋಕಸಭೆಯಲ್ಲಿಂದು ಪರಿಶಿಷ್ಟ ಜಾತಿ ತಿದ್ದುಪಡಿ ಮಸೂದೆ ಕುರಿತು ಮಾತನಾಡಿದ ಅವರು, ಪರಿಶಿಷ್ಟ ಜಾತಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಅಸ್ಪ್ಪಶ್ಯ ಜಾತಿಗಳನ್ನು ಸೇರಿಸಿದರೆ ತೊಂದರೆಯಿಲ್ಲ. ಆದರೆ ಮುಂದುವರಿದ ಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿಸುಂತೆ ಬೇಡಿಕೆ ಬರುತ್ತಿದ್ದು, ಇದು ಉತ್ತಮ ಬೆಳವಣಿಗೆಯಲ್ಲ ಎಂದು ಹೇಳಿದರು.
ಪರಿಶಿಷ್ಟ ಜಾತಿಯಲ್ಲಿ 1,206 ಜಾತಿಗಳನ್ನು ಸೇರ್ಪಡೆ ಮಾಡಲಾಗಿದೆ. ಆದರೆ ಮೀಸಲಾತಿಯು 1950 ರಲ್ಲಿ ನಿಗದಿಪಡಿಸಿದಂತೆ ಪರಿಶಿಷ್ಟ ಜಾತಿಗೆ ಶೇ.15 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ. 7.5 ರಷ್ಟು ಮೀಸಲಾತಿಯೇ ಇದ್ದು, ಮೀಸಲಾತಿ ಪ್ರಮಾಣವನ್ನೂ ಹೆಚ್ಚಿಸಬೇಕು. ಖಾಸಗಿ ಸಂಸ್ಥೆಗಳಲ್ಲೂ ಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕು. ಮೆಟ್ರಿಕ್ ಪೂರ್ವ ಮತ್ತು ನಂತರದ ಪರಿಶಿಷ್ಠ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಶಿಷ್ಯ ವೇತನವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ರಾಜೀವ್ ಗಾಂಧಿ ಅವರು ಪ್ರಧಾನ ಮಂತ್ರಿಗಳಾಗಿದ್ದ ಅವಧಿಯಲ್ಲಿ ಬ್ಯಾಕ್ ಬ್ಯಾಕ್ ಲಾಗ್ ಹುದ್ದೆಗಳನ್ನು ಸ್ಪೆಷಲ್ ಡ್ರೈವ್ ಮೂಲಕ ಕೇಂದ್ರ ಸರಕಾರದ ವ್ಯಾಪ್ತಿಯ ಎಲ್ಲ ಇಲಾಖೆಗಳಲ್ಲಿ ಖಾಲಿ ಇದ್ದ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದ್ದರು. ಅದೇ ಮಾದರಿಯಲ್ಲಿ ಕೇಂದ್ರ ಸರಕಾರವು ವಿಶೇಷ ನೇಮಕಾತಿ ಮೂಲಕ ಬ್ಯಾಕ್ ಲಾಗ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಸಂವಿಧಾನದ 341 ನೆ ಕಲಂ ನಡಿ ಪರಿಶಿಷ್ಟ ಜಾತಿ ಅವರಿಗೆ ಸೌಲಭ್ಯಗಳನ್ನು ನೀಡಲಾಗಿದೆ. ತಿದ್ದುಪಡಿಯಡಿ 5 ರಾಜ್ಯಗಳಲ್ಲಿ ಕೆಲವು ಮಾರ್ಪಾ ಡುಗಳನ್ನು ಮಾಡಿಕೊಳ್ಳಲಾಗಿದೆ. ಕೆಲವು ಜಾತಿಗಳನ್ನು ಪರಿಶಿಷ್ಟ ಜಾತಿಗೆ ಹರಿಯಾಣ, ಕೇರಳ ಮತ್ತು ಘತ್ತೀಸ್ಗಡ ರಾಜ್ಯದಲ್ಲಿ ಸೇರಿಸಲಾಗಿದೆ. ಕೆಲವು ಹೊಸ ಜಾತಿಗಳನ್ನು ಸೇರಿಸಲಾಗುತ್ತಿದೆ. ಬಜೆಟ್ನಲ್ಲೂ ಮೀಸಲಾತಿಗನುಗುಣವಾಗಿ ಅನುದಾನವನ್ನು ಮೀಸಲಿಟ್ಟಿಲ್ಲ, ಒಟ್ಟು 19.78 ಲಕ್ಷ ಕೋಟಿ ರೂ. ಆಯವ್ಯಯದಲ್ಲಿ ಜನಸಂಖ್ಯೆಗನುಗುಣವಾಗಿ ಪರಿಶಿಷ್ಠ ಜಾತಿಯ ಏಳಿಗೆಗಾಗಿ ಶೇ.16.8 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ. 8.8 ರಷ್ಟು ಮೀಡಲಿಡಬೇಕು. ಆದರೆ ಪರಿಶಿಷ್ಟ ಜಾತಿಗೆ 3,88,833 ಕೋಟಿ ಹಾಗೂ ಪರಿಶಿಷ್ಟ ಪಂಗಡಕ್ಕೆ 75,764 ಕೋಟಿ ಅನುದಾವನ್ನು ಮೀಸಲಿಡಲಾಗಿದೆ ಎಂದು ವಿವರಿಸಿದರು.
ಪರಿಶಿಷ್ಟ ಸಮುದಾಯದ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಮುಂಜಾಗ್ರತೆ ಕ್ರಮಕೈಗೊಂಡು ಯಾವುದೇ ದೌರ್ಜನ್ಯಗಳು ನಡೆಯದಂತೆ ಕ್ರಮಕೈಗೊಳ್ಳಲು ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಸ್ವೀಕರ್ ಅವರಿಗೆ ಮನವಿ ಮಾಡಿದರು.





