ಎ.ಜೆ. ಆಸ್ಪತ್ರೆ: ಮಕ್ಕಳ ಹೃದ್ರೋಗ ತಜ್ಞರಿಂದ ಅಪರೂಪದ ಸಾಧನೆ
ಮಂಗಳೂರು, ಮಾ.21: ಹೃದಯದಲ್ಲಿ ಜನ್ಮತಃ ರಂಧ್ರ ವೆಂಟ್ರಿಕ್ಯುಲರ್ ಸೆಪ್ಟಲ್ ದೋಷವಿದ್ದ 7 ಮಕ್ಕಳಿಗೆ ಚಿಕಿತ್ಸೆ ನೀಡುವಲ್ಲಿ ಎಜೆ ಆಸ್ಪತ್ರೆಯ ತಂಡ ಯಶಸ್ವಿಯಾಗಿದೆ.
ಈ ಮಕ್ಕಳ ಹೃದಯದಲ್ಲಿ ಜನ್ಮತಃ ರಂಧ್ರವಿರುವುದನ್ನು ಮಕ್ಕಳ ಹೃದ್ರೋಗ ತಜ್ಞ ಡಾ. ಪ್ರೇಮ್ ಆಳ್ವ ಎ. ಜೆ. ಆಸ್ಪತ್ರೆಯಲ್ಲಿ ಎಕೋಕಾರ್ಡಿಯೋಗ್ರಾಮ್ ಮಾಡುವ ಮೂಲಕ ಪತ್ತೆಹಚ್ಚಿದರು. ಇದು ಹೃದಯದಲ್ಲಿ ಶುದ್ಧ ಮತ್ತು ಅಶುದ್ಧ ರಕ್ತವು ಮಿಶ್ರಣಗೊಳ್ಳುವ ಒಂದು ಸ್ಥಿತಿ. ಈ ಮಕ್ಕಳಿಗೆ ಪದೇ ಪದೇ ಶ್ವಾಸಕೋಶದ ಸೋಂಕು, ಆಟ ಆಡುವಾಗ ಉಸಿರಾಟದ ತೊಂದರೆ ಮತ್ತು ಇತರ ಮಕ್ಕಳಂತೆ ತಮ್ಮ ದಿನನಿತ್ಯದ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಕೆಲವು ಮಕ್ಕಳ ಹೃದಯದ ಎಡ ಭಾಗವು ಅಸಹಜವಾಗಿ ದೊಡ್ಡದಾಗಿದ್ದು, ಹೃದಯದ ಒತ್ತಡವು ಹೆಚ್ಚಾಗಿತ್ತು. ಆದ್ದರಿಂದ ಈ ರಂಧ್ರಗಳನ್ನು ತೆರೆದ ಹೃದಯ ಶಸ್ತ್ರಚಿಕಿತ್ಸೆಯಿಲ್ಲದೆ ಶುದ್ಧ ರಕ್ತವನ್ನು ಕೊಂಡು ಹೋಗುವ ಅಪಧಮನಿಯ ಮೂಲಕ ಡಿವೈಸ್ ಕ್ಲೋಷರ್ ಆಫ್ ವಿಎಸ್ಡಿ ತಂತ್ರಜ್ಞಾನವನ್ನು ಬಳಸಿ ಮುಚ್ಚಲು ನಿರ್ಧರಿಸಲಾಯಿತು.
ಹೃದಯದ ರಂಧ್ರದ ಗಾತ್ರ ಮತ್ತು ರಂಧ್ರವನ್ನು ಮುಚ್ಚಲು ಬೇಕಾಗುವ ಸಾಧನದ ನಿಖರವಾದ ಗಾತ್ರವನ್ನು ಪತ್ತೆಹಚ್ಚುವುದು ಅತ್ಯಂತ ಕ್ಲಿಷ್ಟಕರವಾಗಿತ್ತು. ಡಾ. ಪ್ರೇಮ್ ಆಳ್ವರವರ ನಾಯಕತ್ವದಲ್ಲಿ ಅರಿವಳಿಕೆ ತಜ್ಞರಾದ ಡಾ. ಬಿ. ವಿ. ತಂತ್ರಿ ಮತ್ತು ಡಾ. ಟ್ರೆವರ್ ಸಿಕ್ವೇರಾ ಸಹಯೋಗದೊಂದಿಗೆ ಚಿಕಿತ್ಸೆಯನ್ನು ನೀಡಲಾಯಿತು. ಈ ಚಿಕಿತ್ಸೆಗೆ ಒಳಗಾಗಿದ್ದ ಎಲ್ಲ 7 ಮಕ್ಕಳು ಆರೋಗ್ಯವಂತರಾಗಿದ್ದು, ಮೂರು ದಿನಗಳ ಅವಧಿಯಲ್ಲೇ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಮೊತ್ತಮೊದಲ ಭಾರಿಗೆ ಮಂಗಳೂರಿನಲ್ಲಿ ಅಪಧಮನಿಯ ಮೂಲಕ ವಿ.ಎಸ್.ಡಿ.ಗಳನ್ನು ಎ.ಡಿ.ಒ. 1 ಸಾಧನಗಳನ್ನು ಉಪಯೋಗಿಸಿ ಮಾಡಲಾಯಿತು.
ಮಂಗಳೂರಿನಲ್ಲಿ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ವಿಶೇಷವಾಗಿ ಮಕ್ಕಳ ಹೃದ್ರೋಗ ವಿಭಾಗವನ್ನು ಹೊಂದಿರುವ ಏಕೈಕ ಕೇಂದ್ರವಾಗಿದೆ. ಈ ಎಲ್ಲ ಮಕ್ಕಳಿಗೆ ಅನೇಕ ಸರಕಾರಿ ಯೋಜನೆಗಳ ಮೂಲಕ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗಿದೆ.