ಪುಸ್ತಕ ಪ್ರೀತಿ ಸಂಸ್ಕೃತಿ ಅಳವಡಿಸಿಕೊಳ್ಳಿ: ಚೇತನ್ ಕುಮಾರ್

ಕುಂದಾಪುರ, ಮಾ.22: ಪಾಶ್ಚಾತ್ಯರ ಅದೆಷ್ಟೋ ಸಂಸ್ಕೃತಿಗಳಿಗೆ ಮಾರು ಹೋಗುವ ನಾವು ಅವರ ಪುಸ್ತಕ ಪ್ರೀತಿ ಸಂಸ್ಕೃತಿಯನ್ನು ಸ್ವೀಕರಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ವಿದೇಶಿಗರಂತೆ ನಾವೂ ಎಳವೆಯಲ್ಲೇ ಸಾಹಿತ್ಯಾಸಕ್ತಿಯನ್ನು ಬೆಳೆಸಿ ಕೊಳ್ಳಬೇಕು ಎಂದು ಕುಂದಾಪುರದ ಬಿ.ಬಿ. ಹೆಗ್ಡೆ ಕಾಲೇಜಿನ ಕನ್ನಡ ಉಪನ್ಯಾಸಕ ಚೇತನ್ ಕುಮಾರ್ ಶೆಟ್ಟಿ ಹೇಳಿದ್ದಾರೆ. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ಕಾಲೇಜಿನ ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗ ಇತ್ತೀಚೆಗೆ ನಡೆಸಿದ ನನ್ನ ಮೆಚ್ಚಿನ ಪುಸ್ತಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ನಾರಾಯಣ ತಂತ್ರಿ ಅಧ್ಯಕ್ಷತೆ ವಹಿ ಸಿದ್ದರು. ಕನ್ನಡ ವಿಭಾಗ ಮುಖ್ಯಸ್ಥೆ ಡಾ.ರೇಖಾ ವಿ.ಬನ್ನಾಡಿ ಉಪಸ್ಥಿತರಿದ್ದರು. ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗದ ಅಧ್ಯಕ್ಷೆ ಅಮೃತಾ ಸ್ವಾಗತಿಸಿದರು. ಉಪಾಧ್ಯಕ್ಷ ನಿತಿನ್ ವಂದಿಸಿ, ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.
ನನ್ನ ಮೆಚ್ಚಿನ ಪುಸ್ತಕ ಸ್ಪರ್ಧೆಯಲ್ಲಿ ಮಹಾಲಕ್ಷ್ಮೀ(ಪ್ರಥಮ ಬಿ.ಎ) ಪ್ರಥಮ, ಚೈತ್ರಾ(ತೃತೀಯ ಬಿ.ಎ) ದ್ವಿತೀಯ, ಶಿಕ್ರಾನ್(ತೃತೀಯ ಬಿ.ಎಸ್ಸಿ) ತೃತೀಯ ಸ್ಥಾನ ಗಳಿಸಿದರು.





