ಎತ್ತಿನಹೊಳೆ ಯೋಜನೆ: ಸಮರ್ಪಕ ಮಾಹಿತಿಗೆ ಆಗ್ರಹಿಸಿ ಧರಣಿ
ಬಂಟ್ವಾಳ, ಮಾ.22: ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಸಾರ್ವತ್ರಿಕ ಪ್ರಶ್ನೆಗಳಿಗೆ ಉತ್ತರ ಬಯಸಿ ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಸಮಿತಿ ವತಿಯಿಂದ ‘‘ಸಮರ್ಪಕ ಮಾಹಿತಿ ಕೊಡಿ’’ ಎಂದು ಒತ್ತಾಯಿಸಿ ತಾಲೂಕು ಕಚೇರಿ ಮುಂಭಾಗದಲ್ಲಿ ಧರಣಿ ನಡೆಯಿತು. ನೇತ್ರಾವತಿ ನದಿ ತಿರುವು ಯೋಜನೆಯನ್ನು ಜಿಲ್ಲೆಯ ಜನತೆ ತೀವ್ರವಾಗಿ ವಿರೋಧಿಸಿದ್ದರೂ, ಸರಕಾರ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಲು ವಿಫಲವಾಗಿದೆ. ಹಲವಾರು ಸಂಘಟನೆಗಳು ಹತ್ತಾರು ಬಾರಿ ಪ್ರತಿಭಟನೆ ನಡೆಸಿದ್ದರೂ, ಸರಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಸ್ಥಳೀಯ ಶಾಸಕರಾದಿ ಜನಪ್ರತಿನಿಧಿಗಳು ತಮ್ಮ ನಿಲುವನ್ನು ಸ್ಪಷ್ಟ ಪಡಿಸಲು ಈ ಆಂದೋಲನವನ್ನು ರೂಪಿಸಲಾಗಿದೆ ಎಂದು ಬಂಟ್ವಾಳ ತಾಲೂಕು ನ್ಯಾಯಪರ ಸಮಿತಿ ಅಧ್ಯಕ್ಷ ಕೃಷ್ಣ ಅಲ್ಲಿಪಾದೆ ತಿಳಿಸಿದ್ದಾರೆ. ಯೋಜನಾ ಪ್ರದೇಶದಲ್ಲಿ 9.55 ಟಿಎಂಸಿ ಲಭ್ಯವಿದ್ದು, 1.25ಟಿಎಂಸಿ ಪೂರ್ವಕ್ಕೆ ಸಾಗಿಸಲು ಲಭ್ಯ ಇರುತ್ತದೆ. ಆದರೆ 24ಟಿಎಂಸಿ ನೀರನ್ನು ಎಲ್ಲಿಂದ ಪೂರೈಸಲಾಗುತ್ತಿದೆ? 600 ಹೆಕ್ಟೇರ್ ಅರಣ್ಯ ಭೂಮಿ ಮಂಜೂರು ಮಾಡಲಾಗಿದೆಯೇ? ಜಿಲ್ಲೆಯ ಜನಜೀವನದ ಮೇಲೆ ಉಂಟಾಗುವ ಪರಿಣಾಮವನ್ನು ಅಧ್ಯಯನ ಮಾಡಲಾಗಿದೆಯೇ? 370 ಎಂಡಬ್ಲ್ಯೂ ವಿದ್ಯುತ್ ಶಕ್ತಿ ಆವಶ್ಯಕತೆ ಇದ್ದು, ಇದರ ಪೂರೈಕೆ ಹೇಗೆ ಮಾಡಲಾಗುತ್ತದೆ? ಆ ೆಕಾರಿಡಾರ್ ಸಂರಕ್ಷಣಾ ಕ್ರಮಗಳೇನು? ಯೋಜನೆ ವಿಫಲವಾದರೆ 91 ಸಾವಿರ ಕೋಟಿ ನಷ್ಟಕ್ಕೆ ಯಾರು ಹೊಣೆ? ಮೀನುಗಾರಿಕೆಯ ಮೇಲಾಗುವ ಪರಿಣಾಮವನ್ನು ಅಧ್ಯಯನ ಮಾಡಲಾಗಿದೆಯೇ? ಎಂಬ 11 ಪ್ರಶ್ನೆಗಳನ್ನು ಅರಣ್ಯ ಸಚಿವರಿಗೆ ನ್ಯಾಯಪರ ಸಮಿತಿ ಸಲ್ಲಿಸಿತ್ತು. ಹಾರೂನ್ ರಶೀದ್, ಪ್ರಭಾಕರ ದೈವಗುಡ್ಡೆ ಮಾತನಾಡಿದರು. ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಸಮಿತಿಯ ಅಧ್ಯಕ್ಷ ಕೃಷ್ಣ ಅಲ್ಲಿಪಾದೆ, ಬಿ.ಎಂ. ಪ್ರಭಾಕರ ದೈವಗುಡ್ಡೆ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಸುವರ್ಣ ಕಾಯರ್ಮಾರ್, ಕೋಶಾಧಿಕಾರಿ ಅಯೂಬ್ ಜಿ.ಕೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುರ್ರಝಾಕ್ ಗುಂಪಕಲ್ಲು, ನಾರಾಯಣ ನಾಯ್ಕೆ ಮಾವಿನಕಟ್ಟೆ ಧರಣಿಯಲ್ಲಿ ಪಾಲ್ಗೊಂಡರು.