ಮೊಮ್ಮಗನನ್ನು ಬಿಟ್ಟಿರಲಾರದ ಅಮಾನುಷ ಅಜ್ಜ ಆತ್ಮಹತ್ಯೆ ಮಾಡುವ ಮೊದಲು ಬಾಲಕನನ್ನು ಕೊಂದೇ ಬಿಟ್ಟ !

ಪುಣೆ, ಮಾ.23:ಮೊಮ್ಮಗನ ಮೇಲೆ ಅತೀವ ಮಮಕಾರ ಹೊಂದಿದ್ದ ಅಜ್ಜನೋರ್ವ ತನ್ನ ಅಪಾರ್ಟ್ಮೆಂಟಿನಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ 10 ವರ್ಷದ ಮೊಮ್ಮಗನ ಕತ್ತು ಹಿಚುಕಿ ಕೊಂದು ಸಾಯುವಾಗಲೂ ಆತನನ್ನು ಜತೆಯಾಗಿ ಕರೆದುಕೊಂಡು ಹೋದ ಅಘಾತಕಾರಿ ಘಟನೆ ಪುಣೆಯ ಕೊಂಧ್ವಾ ಬುದ್ರುಕ್ ಪ್ರದೇಶದ ಶಾಂತಿನಗರದಿಂದ ವರದಿಯಾಗಿದೆ.
ಸುಧೀರ್ ದಗ್ದುಮಲ್ ಶಾಹ್ (65) ಯಾವತ್ತೂ ತನ್ನ ಮೊಮ್ಮಗ ಜಿನಯ್ ಜತೆಯೇ ಕಾಲ ಕಳೆಯುತ್ತಿದ್ದರಲ್ಲದೆ ಪ್ರತಿ ದಿನ ಆತನನ್ನು ಶಾಲೆಗೆ ಬಿಡಲು ಬಸ್ ಸ್ಟಾಪ್ ತನಕವೂ ಬರುತ್ತಿದ್ದರು. ಆದರೆ ಆಸ್ತಿ ವಿವಾದವೊಂದರಿಂದ ಬೇಸತ್ತಿದ್ದರೆಂದು ಹೇಳಲಾದ ಸುಧೀರ್ ಡೆತ್ ನೋಟೊಂದನ್ನು ಬರೆದಿಟ್ಟು ತನ್ನ ಮಗ ಪರೇಶ್ ಶಾ, ಸೊಸೆ, ಮೊಮ್ಮಗಳು ಗಾಢ ನಿದ್ದೆಯಲ್ಲಿರುವಾಗ ಜಿನಯ್ನನ್ನು ಹೊರಕ್ಕೆ ಕರೆದುಕೊಂಡು ಹೋಗಿ ಮೆಟ್ಟಿಲು ಬಳಿ ಆತನನ್ನು ಕತ್ತು ಹಿಚುಕಿ ಸಾಯಿಸಿ ನಂತರ ಕೆಳಕ್ಕೆ ತಾನು ಹಾರಿ ಮಾರ್ಚ್ 19ರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ನೆರೆಮನೆಯವರು ಸತ್ತು ಬಿದ್ದಿದ್ದ ಜಿನಯ್ನನ್ನು ನಂತರ ನೋಡಿದಾಗಲಷ್ಟೇಈ ಪ್ರಕರಣ ಬೆಳಕಿಗೆ ಬಂದಿತ್ತು.
‘‘ನಾನು ಇನ್ನೂ 10-15 ವರ್ಷ ಬದುಕಬಹುದು. ಆದರೆ ಈ ಸಮಯ ಕೋರ್ಟಿಗೆ ಹೋಗಿ ಸಮಯ ವ್ಯಯ ಮಾಡುವ ಬದಲು ನಾನು ಸತ್ತು ಎಲ್ಲ ಸಮಸ್ಯೆ ಬಗೆಹರಿಸಬಯಸುತ್ತೇನೆ. ನಾನು ಜಿನಯ್ನನ್ನು ನನ್ನ ಜತೆ ಕರೆದುಕೊಂಡು ಹೋಗುತ್ತೇನೆ. ಅವ ನಿಲ್ಲದೆ ನಾನಿರಲಾರೆ.’’ ಎಂದು ಡೆತ್ ನೋಟಲ್ಲಿ ಬರೆಯಲಾಗಿತ್ತು.
ಸುಧೀರ್ ವಿರುದ್ಧ ಕೊಲೆ ಪ್ರಕರಣವನ್ನು ಅವರ ಪುತ್ರ ಪರೇಶ್ ದಾಖಲಿಸಿದ್ದು ಕುಟುಂಬ ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದೆ. ಪುಣೆಯಿಂದ 63 ಕಿ.ಮೀ. ದೂರದ ಶಿರೂರಿನಲ್ಲಿ ಸುಧೀರ್ ಹೊಂದಿದ್ದ ಅಂಗಡಿಯೊಂದರ ವಿಚಾರವಾಗಿ ಸಂಬಂಧಿಯೊಬ್ಬರ ವಿರುದ್ಧ ಸುಧೀರ್ ಕೋರ್ಟ್ ಮೆಟ್ಟಿಲೇರಿದ್ದರು. ಅವರ ಕುಟುಂಬ ಅಲ್ಲಿ ಎಲೆಕ್ಟ್ರಾನಿಕ್ ಉದ್ಯಮ ಹೊಂದಿದ್ದರೂ ಒಂದು ವರ್ಷದ ಹಿಂದೆ ಅದನ್ನು ಮುಚ್ಚಿ ಪುಣೆಗೆ ವಾಸ ಬದಲಾಯಿಸಿದ್ದರು.
ಸುಧೀರ್ ಸ್ವಲ್ಪ ಸಮಯದ ಹಿಂದೆಯೇ ಆತ್ಮಹತ್ಯೆಗೆ ಯೋಚಿಸಿದ್ದರೆನ್ನಲಾಗಿದ್ದು ಕುಟುಂಬದಲ್ಲಿ ನಡೆಯಲಿದ್ದ ಧಾರ್ಮಿಕ ಕಾರ್ಯ ಅವರನ್ನು ಅವರ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿತ್ತು. ಅವರ ಕುಟುಂಬ ಸದ್ಯದಲ್ಲಿಯೇ ರಾಜಸ್ಥಾನ ಪ್ರವಾಸ ಹೋಗಲಿತ್ತು.







