ಬೆಳ್ತಂಗಡಿ: ಜನರ ತೀವ್ರ ವಿರೋಧವಿದ್ದರೂ ಜನವಸತಿಯ ನಡುವೆಯೇ ತ್ಯಾಜ್ಯ ಘಟಕದ ನಿರ್ಮಾಣ
ಬೆಳ್ತಂಗಡಿ: ಜನರ ತೀವ್ರ ವಿರೋಧವಿದ್ದರೂ ಜನವಸತಿಯ ನಡುವೆಯೇ ತ್ಯಾಜ್ಯ ಘಟಕದ ನಿರ್ಮಾಣ ಮಾಡುತ್ತಿರುವುದು ಮುಂಡಾಜೆ ಪಂಚಾಯತ್ನ ಉದ್ದಟತನವನ್ನು ತೋರಿಸುತ್ತದೆ. ವಿರೋಧದ ನಡುವೆಯೂ ಘಟಕದ ನಿರ್ಮಾಣಕ್ಕೆ ಮುಂದಾದಲ್ಲಿ ಅದರ ವಿರುದ್ದ ಎಲ್ಲರೂ ಸೇರಿ ಪ್ರತಿಭಟನೆ ಮಾಡಲಾಗುವುದು ಎಂದು ಕುರುಡ್ಯ, ಕುಳೂರು, ಕಾನರ್ಪ ನಾಗರಿಕರ ಪರವಾಗಿ ಸತ್ಯನಾರಾಯಣ ಹೊಳ್ಳ ಎಚ್ಚರಿಸಿದ್ದಾರೆ.
ಅವರು ಬುಧವಾರ ಬೆಳ್ತಂಗಡಿ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತ್ಯಾಜ್ಯ ಘಟಕದಿಂದಾಗುವ ತೊಂದರೆಯ ಬಗ್ಗೆ ಮಾಹಿತಿ ನೀಡಿದರು.
ಮುಂಡಾಜೆ ಗ್ರಾಮ ಪಂಚಾಯತಿಯವರು ಕುರುಡ್ಯ-ಕೂಳುರು ಎಂಬ ಪ್ರದೇಶದಲ್ಲಿ ಕಳೆದ ವರ್ಷದಿಂದೀಚೆಗೆ ರೂ. 20 ಲಕ್ಷ ವೆಚ್ಚದಲ್ಲಿ ತ್ಯಾಜ್ಯ ಘಟಕವನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ. ಇಲ್ಲಿ 2 ಬಸ್ ತಂಗುದಾಣಗಳಿದ್ದು ಸುತ್ತಮುತ್ತ ಸುಮಾರು 60 ಮನೆಗಳಿವೆ. ಇಲ್ಲಿ ಘಟಕ ಸ್ಥಾಪಿಸುವುದು ಸರಿಯಲ್ಲವೆಂದು ವಾರ್ಡ್ ಸಭೆಯಲ್ಲೂ, ಪಂ. ಕಚೇರಿಗೂ ಮನವಿ ನೀಡಿದ್ದಲ್ಲದೆ ಜನವಸತಿ ಇಲ್ಲದ ನಿಡಿಗಲ್ ಎಂಬಲ್ಲಿ ನಿರ್ಮಿಸಲು ಕೋರಲಾಗಿತ್ತು. ಶಾಸಕರೂ ಈ ಬಗ್ಗೆ ಪಂ.ಗೆ ಸೂಚಿಸಿದ್ದರು. ಹೀಗಿದ್ದರೂ ಯಾರದೋ ಹಿತಾಸಕ್ತಿಗಾಗಿ, ಹಟ ಹಿಡಿದು ಜನವಸತಿ ಇರುವಲ್ಲಿಯೇ ನಿರ್ಮಿಸುವತ್ತ ಪಂ. ಆಡಳಿತ ಹೊರಟಿದೆ. ಘಟಕದಿಂದಾಗಿ ಸುತ್ತಮುತ್ತಲಿನ ಜನರು ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದು ನಿಶ್ಚಿತ. ಹೀಗಾಗಿ ನಾವು ಅದನ್ನು ತೀವ್ರವಾಗಿ ವಿರೋಧಿಸುತ್ತೇವೆ. ಅಧಿಕಾರವಿದೆಯೆಂದು ಜನವಿರೋಧಿಯಾಗಿ ವರ್ತಿಸುವುದು ಸರಿಯಲ್ಲ. ಘಟಕ ನಿರ್ಮಿಸಲು ಹೊರಟಲ್ಲಿ ಪರಿಸರದ ಜನಸೇರಿ ಅದನ್ನು ತಡೆಯುವುದು ನಿಶ್ಚಿತ ಎಂದರು.
ಗೋಷ್ಠಿಯಲ್ಲಿ ಕೆ. ಮಹಮ್ಮದ್, ಸುಂದರ ನಾಯ್ಕ, ಹೊನ್ನಪ್ಪ ನಾಯ್ಕ, ಬಾಲಕೃಷ್ಣ ಶೆಟ್ಟಿ, ಮಾಧವ ಭಟ್ ಕೆ. ಇದ್ದರು.