ಕಸ ಸಾಗಣೆ ವಾಹನಗಳಿಗೆ ಹಸಿರು ನಿಶಾನೆ

ಬೆಂಗಳೂರು, ಮಾ. 23: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿ ಕಸ ಸಾಗಣೆಗೆ ಖರೀದಿಸಿರುವ 25 ಕಾಂಪ್ಯಾಕ್ಟರ್ ನೂತನ ವಾಹನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ವಿಧಾನಸೌಧದ ಮುಂಭಾಗದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಹಸಿರು ನಿಶಾನೆ ತೋರಿಸಿದರು.
ಬೆಂಗಳೂರು ನಗರದಲ್ಲಿ ಪ್ರತಿದಿನ ಸುಮಾರು 3,500 ಟನ್ ಘನ ತ್ಯಾಜ್ಯ ಉತ್ಪಾದನೆ ಆಗುತ್ತಿದ್ದು, ತ್ಯಾಜ್ಯದ ಸಂಗ್ರಹಣೆ, ಬೀದಿ ಗುಡಿಸುವಿಕೆ, ಸಾಗಣೆ, ಸಂಸ್ಕರಣೆ ಹಾಗೂ ವಿಲೇವಾರಿಗೆ ಸುಮಾರು 23 ಸಾವಿರ ಕಾರ್ಮಿಕರು ಹಾಗೂ 670 ಕಾಂಪ್ಯಾಕ್ಟರ್ ಮತ್ತು ಲಾರಿಗಳನ್ನು ಉಪಯೋಗಿಸಿಕೊಂಡು ಗುತ್ತಿಗೆದಾರರ ಮೂಲಕ ನಿರ್ವಹಿಸಲಾಗುತ್ತಿದೆ.
ಆ ಪೈಕಿ ಬಿಬಿಎಂಪಿಯ 2,700 ಖಾಯಂ ಪೌರ ಕಾರ್ಮಿಕರು ಮತ್ತು 55 ಕಾಂಪ್ಯಾಕ್ಟರ್ ಮತ್ತು ಲಾರಿಗಳಿಂದ ಕೆಲ ಪ್ರದೇಶಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ತ್ಯಾಜ್ಯವನ್ನು ಮೂಲದಲ್ಲಿಯೇ ಬೇರ್ಪಡಿಸಿ ಸಂಗ್ರಹಿಸುವ ಕಾರ್ಯವನ್ನು ಪ್ರೋತ್ಸಾಹಿಸಲು 189 ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ವಾರ್ಡುಗಳಲ್ಲಿ ಸಂಗ್ರಹಿಸುತ್ತಿರುವ ಒಣತ್ಯಾಜ್ಯವನ್ನು ಪುನರ್ಬಳಕೆ ಮಾಡಲಾಗುತ್ತಿದೆ ಎಂದು ಪಾಲಿಕೆ ತಿಳಿಸಿದೆ.
5 ಟನ್ ಸಾರ್ಮಥ್ಯದ 13ಸ್ಥಳಗಳಲ್ಲಿ ಕೇಂದ್ರೀಕೃತ ಬಯೋಮಿಥಿನೇಜೇಷನ್ ಘಟಕಗಳನ್ನು ಸ್ಥಾಪಿಸಲಾಗಿದ್ದು, ಅವುಗಳಲ್ಲಿ 11 ಘಟಕಗಳು ಕಾರ್ಯಾರಂಭಿಸಿದ್ದು, ಹಸಿತ್ಯಾಜ್ಯವನ್ನು ಸಂಸ್ಕರಿಸಲಾಗುತ್ತಿದೆ. ಅಲ್ಲದೆ, ಕಸವನ್ನು ಮೂಲದಲ್ಲೇ ಬೇರ್ಪಡಿಸಿ ನೀಡಲು ಜನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪಾಲಿಕೆ ತಿಳಿಸಿದೆ.
ತ್ಯಾಜ್ಯ ಸಂಸ್ಕರಣೆ ಉದ್ದೇಶದಿಂದ ರಾಜ್ಯ ಸರಕಾರ 440 ಕೋಟಿ ರೂ.ಗಳ ಅನುದಾನದಡಿಯಲ್ಲಿ ಕನ್ನಹಳ್ಳಿ ಸೀಗೆಹಳ್ಳಿ ದೊಡ್ಡಬಿದರಕಲ್ಲು, ಲಿಂಗದೀರನಹಳ್ಳಿ, ಸುಬ್ಬರಾಯನಪಾಳ್ಯ ಮತ್ತು ಚಿಕ್ಕನಾಗಮಂಗಲದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಒಟ್ಟು 2,300 ಟನ್ ತ್ಯಾಜ್ಯ ಸಂಸ್ಕರಿಸಲು ಸ್ಥಾಪಿಸಲಾಗಿರುತ್ತದೆ ಎಂದು ಗೊತ್ತಾಗಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೂಲ ಸೌಕರ್ಯ ಅಭಿವೃದ್ಧಿ ಹಜ್ ಹಾಗೂ ವಾರ್ತಾ ಸಚಿವ ಆರ್.ರೋಷನ್ ಬೇಗ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಬಿಎಂಪಿ ಮೇಯರ್ ಮಂಜುನಾಥ ರೆಡ್ಡಿ, ಉಪ ಮೇಯರ್ ಹೇಮಲತಾ ಗೋಪಾಲಯ್ಯ, ಸದಸ್ಯರಾದ ಪದ್ಮನಾಭರೆಡ್ಡಿ, ಸತ್ಯನಾರಾಯಣ, ಆಯುಕ್ತ ಕುಮಾರನಾಯಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಿಬಿಎಂಪಿಯಲ್ಲಿ 4 ಸಾವಿರ ಮಂದಿ ಪೌರಕಾರ್ಮಿಕರ ನೇಮಕಾತಿಗೆ ಮಂಜೂರಾತಿ ನೀಡಲಾಗಿದೆ. ಅಲ್ಲದೆ, ಘನತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಲು ಈ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಪರಿಸರ ಅಭಿಯಂತರರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗಿದೆ. -ಮಂಜುನಾಥ ರೆಡ್ಡಿ, ಬಿಬಿಎಂಪಿ ಮೇಯರ್







