ತುಂಬೆ ವೆಂಟೆಡ್ ಡ್ಯಾಂ ಯೋಜನೆಯ ಸರ್ವೇ ಕಾರ್ಯ: ಅಧಿಕಾರಿ, ಸಿಬ್ಬಂದಿಯೊಂದಿಗೆ ರೈತರನ್ನು ನೇಮಿಸಿ
ಬಂಟ್ವಾಳ, ಮಾ.23: ಹೊಸ ತುಂಬೆ ವೆಂಟೆಡ್ ಡ್ಯಾಂ ಯೋಜನೆಯ ಸರ್ವೇ ಕಾರ್ಯಕ್ಕೆ ಮನಪಾ ಅಧಿಕಾರಿ, ಸಿಬ್ಬಂದಿಯೊಂದಿಗೆ ಗ್ರಾಮ ಕ್ಕೊಬ್ಬ ರೈತರನ್ನು ನೇಮಕ ಮಾಡುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಆದೇಶಿಸಿದ್ದಾರೆ.
ನೂತನ ವೆಂಟೆಡ್ ಡ್ಯಾಂನ ಮುಳುಗಡೆ ಪ್ರದೇಶವಾದ ಸಜಿಪ ಮುನ್ನೂರು ಗ್ರಾಮದ ಮುಲಾಯಿಬೆಟ್ಟುವಿನ ರೈತರೊಬ್ಬರ ಹೊಲದಲ್ಲಿ ಬುಧವಾರ ವಿಶೇಷ ಸಭೆ ನಡೆಸಿ ಮಾತನಾಡಿದ ಅವರು, ಮನಪಾ ಮತ್ತು ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ರೈತರೊಂದಿಗೆ ಸ್ಪಂದಿಸುವಂತೆ ಸೂಚನೆ ನೀಡಿದರು. ಉದ್ದೇಶಿತ ಡ್ಯಾಂ ಎತ್ತರ ಏರಿಸಲಾಗುವುದು. 8 ಮೀ. ವ್ಯಾಪ್ತಿಗೆ ಮುಳುಗಡೆಗೊಳ್ಳುವ ಜಮೀನು ಸರ್ವೇ ಎ. 15ರಿಂದ ಮೇ. 15ರೊಳಗೆ ಪೂರ್ಣಗೊಳಿಸಲಾಗುವುದು. ಬಳಿಕ ರೈತರ ಹೊಲಗದ್ದೆ ಸೇರಿದಂತೆ ಕೃಷಿ ಜಮೀನಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ನ.4ರಂದು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರ ಹಾಗೂ ಮನಪಾ ಅಧಿಕಾರಿಗಳ ಜಂಟಿ ಸಭೆ ನಡಾವಳಿಗಳನ್ನು ಮಾಹಿತಿ ಹಕ್ಕಿ ನಡಿ ಕೇಳಲಾಗಿದ್ದು, ಜಿಲ್ಲಾಧಿಕಾರಿಯವರು ಡಿ. 23ರಂದು ಮಾಹಿತಿ ಹಕ್ಕು ಕಾಯ್ದೆಯಡಿ ಸೆಕ್ಷನ್ 6(3)ರಂತೆ ನಮ್ಮ ಅರ್ಜಿಯನ್ನು ಮನಪಾಕ್ಕೆ ವರ್ಗಾಯಿಸಿದ್ದರು. ಆದರೂ ಮನಪಾದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ರೈತರ ಸಂಘದ ಹಸಿರುಸೇನೆಯ ತಾಲೂಕು ಅಧ್ಯಕ್ಷ ಶರತ್ ಕುಮಾರ್ ಆರೋಪಿಸಿದರು.
ನಮ್ಮ ಬಳಿ ಮಾಹಿತಿಯಿಲ್ಲ!:
ರೈತರು ಕೇಳಿದ ಪ್ರಶ್ನೆಗೆ ಮಾಹಿತಿ ಕೊಡಲು ಏಕೆ ವಿಳಂಬ ಮಾಡುತ್ತಿದ್ದೀರಿ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಮನಪಾ ಅಧಿಕಾರಿಗಳಿಗೆ ಪ್ರಶ್ನಿಸಿದಾಗ ತಬ್ಬಿಬ್ಬಾದ ಅಧಿಕಾರಿಗಳು, ಅವರು ಕೇಳಿದ ಮಾಹಿತಿ ನಮ್ಮ ಬಳಿಯಿಲ್ಲ. ಆದ್ದರಿಂದ ಸಕಾಲಿಕವಾಗಿ ಮಾಹಿತಿ ಕೊಡಲು ಸಾಧ್ಯವಾಗಿರಲಿಲ್ಲ. ಇದರ ಹೊರತು ಯಾವುದೇ ದುರುದ್ದೇಶ ಇಲ್ಲ ಎಂದು ಮನಪಾ ಅಧಿಕಾರಿಗಳು ಪ್ರತಿಕ್ರಿಯಿಸಿದರು. ಹೊಸ ಡ್ಯಾಂ ನಿರ್ಮಾಣದಿಂದ ಜಲಾವೃತ್ತಗೊಳ್ಳುವ ಜಮೀನು ವಿವರ, ಸರ್ವೇ ಕಾರ್ಯ ವಿವರ ಹಾಗೂ ಮುಳುಗಡೆ ಪ್ರದೇಶಗಳಿಗೆ ಪರಿಹಾರ ಪ್ರಕಟನೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿ ಒಂದು ತಿಂಗಳೊಳಗಾಗಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಮನಪಾ ಅಧಿಕಾರಿಗಳಿಗೆ ತಾಕೀತು ಮಾಡಿದರು. ಜಿಲ್ಲಾಧಿಕಾರಿ ಸ್ಪಂದಿಸಿದ್ದರಿಂದ ರೈತರು ತಮ್ಮ ವಶದಲ್ಲಿದ್ದ ಸರ್ವೇ ಯಂತ್ರ, ಇತರ ಉಪಕರಣಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿ ವಿವಾದವನ್ನು ಬಗೆಹರಿಸಿದರು.
ಮನಪಾ ಮೇಯರ್, ಮನಪಾ ಆಯುಕ್ತ ಎಚ್.ಎನ್. ಗೋಪಾಲಕೃಷ್ಣ, ಮನಪಾ ಅಧೀಕ್ಷಕ ಇಂಜಿನಿಯರ್ ಶಿವಶಂಕರ್ ಸ್ವಾಮಿ, ಕಾರ್ಯನಿರ್ವಹಕ ಇಂಜಿನಿಯರ್ ಮಳಾಳಿ, ಸಹಾಯಕ ಎಂಜಿನಿಯರ್ ನರೇಶ್ ಶೆಣೈ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಾಗರಾಜ್, ಸಹಾಯಕ ಕಮಿಷನರ್ ಡಾ.ಅಶೋಕ್ ಡಿ.ಆರ್., ತಹಶೀಲ್ದಾರ್ ಪುರಂದರ್ ಹೆಗ್ಡೆ, ರೆವಿನ್ಯೂ ಇನ್ಸ್ಪೆಕ್ಟರ್ ದಿವಾಕರ್ ವಿಟ್ಲ, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಸದಸ್ಯೆ ನಸೀಮಾ ಬೇಗಂ, ಸಜೀಪಮುನ್ನೂರು ಗ್ರಾಪಂ ಅಧ್ಯಕ್ಷ ಶರೀಫ್, ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ ಮತ್ತು ಸ್ಥಳೀಯ ರೈತರು ಪಾಲ್ಗೊಂಡಿದ್ದರು.
ತಡವಾಗಿ ಬಂದ ಅಧಿಕಾರಿಗಳು
ಸಜಿಪಮುನ್ನೂರು, ಮುಲಾಯಿಬೆಟ್ಟು ವಿವಾದಿತ ಜಮೀನಿಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಬುಧವಾರ ಬೆಳಗ್ಗೆ 8:15ಕ್ಕೆ ಹಾಜರಾಗಿದ್ದರು. ಈ ಸಂದರ್ಭ ಮನಪಾ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಸ್ಥಳದಲ್ಲಿರಲಿಲ್ಲ. ಬಳಿಕ ಅವರಿಗೆ ಫೋನ್ ಮಾಡಿ ಸ್ಥಳಕ್ಕೆ ಬರುವಂತೆ ಸೂಚನೆ ನೀಡಲಾಯಿತು. ಒಂದು ತಾಸು ಕಳೆದು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳನ್ನು ತರಾಟೆಗೆ ತೆಗೆದ ಜಿಲ್ಲಾಧಿಕಾರಿ, ‘‘ಇಷ್ಟು ಹೊತ್ತು ಎಲ್ಲಿಗೆ ಹೋಗಿದ್ದೀರಿ? ಕತ್ತೆ ಕಾಯಲು ಹೋಗಿದ್ರಾ’’ ಎಂದು ಗರಂ ಆಗಿ ಪ್ರಶ್ನಿಸಿ ದರು. ಬಳಿಕ ಸಭೆಯ ಉದ್ದಕ್ಕೂ ಅಧಿಕಾರಿಗಳೊಂದಿಗೆ ಖಡಕ್ ಆಗಿ ವರ್ತಿಸುತ್ತಿದ್ದ ಜಿಲ್ಲಾಧಿಕಾರಿ, ರೈತರು ಕೇಳುತ್ತಿದ್ದ ಪ್ರಶ್ನೆ ಗಳಿಗೆ ಸಂಯಮದಿಂದ ಉತ್ತರಿಸುತ್ತಿದ್ದರು.
ಆತಂಕ ಬೇಡ ಎನ್ನದಿರಿ
ಮಾತು-ಮಾತಿಗೂ ರೈತರಲ್ಲಿ ಆತಂಕ ಬೇಡ ಎನ್ನುತ್ತಿರುವ ಶಾಸಕರು, ಸಚಿವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇಷ್ಟು ದಿನ ನಮ್ಮನ್ನು ಕತ್ತಲೆಯಲ್ಲೇ ಇರುವಂತೆ ಮಾಡಿದ್ದಾರೆ. ಇದುವರೆಗೆ ಚಿಕ್ಕಾಸು ಪರಿಹಾರ ಧನವೂ ನೀಡದೇ, ಕೇಳಿದ ಮಾಹಿತಿಯನ್ನೂ ನೀಡದೇ ಸತಾಯಿಸುತ್ತಿದ್ದ ಮನಪಾ ಅಧಿಕಾರಿಗಳು ಜಿಲ್ಲಾಧಿಕಾರಿಯ ಮುಂದೆ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ಆದರೂ ನಮ್ಮ ಆತಂಕ ದೂರವಾಗಿಲ್ಲ. ಹಾಗಾಗಿ ಆತಂಕ ಬೇಡ ಎಂದು ಹೇಳಿಕೆ ಕೊಡುವ ಜನಪ್ರತಿನಿಧಿಗಳು ದಯವಿಟ್ಟು ರೈತರ ಹೋರಾಟವನ್ನು ದಾರಿ ತಪ್ಪಿಸಬೇಡಿ ಎಂದು ರೈತ ಸಂಘದ ಮುಖಂಡ ಸುಧೇಶ್ ಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.