ಪುತ್ತೂರು:ಮಿನಿ ವಿಧಾನ ಸೌಧದ ಮುಂಬಾಗದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿ-ದಲಿತ ಮುಖಂಡರ ಒತ್ತಾಯ
ದಲಿತರ ಕುಂದುಕೊರತೆಗಳ ಸಭೆ
ಪುತ್ತೂರು: ಪುತ್ತೂರಿನ ಕೇಂದ್ರ ಸ್ಥಾನದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸುವಂತೆ ಹಲವಾರು ವರ್ಷಗಳಿಂದ ದಲಿತ ಸಂಘಟನೆಗಳು ಬೇಡಿಕೆ ಸಲ್ಲಿಸಿದ್ದರೂ ಆಡಳಿತ ವರ್ಗದಿಂದ ಸ್ಪಂಧನೆ ಸಿಕ್ಕಿಲ್ಲ. ಈ ತನಕ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಶೀಘ್ರವೇ ಮಿನಿವಿಧಾನ ಸೌಧದ ಮುಂಬಾಗದಲ್ಲಿ ಡಾ. ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಯ ಮುಖಂಡರು ಗುರುವಾರ ಪುತ್ತೂರಿ ತಾಪಂ. ಸಭಾಂಗಣದಲ್ಲಿ ನಡೆದ ದಲಿತ ಕುಂದುಕೊರತೆಗಳ ಸಭೆಯಲ್ಲಿ ಆಗ್ರಹಿಸಿದರು.
ಪುತ್ತೂರು ತಹಸೀಲ್ದಾರ್ ಸಣ್ಣರಂಗಯ್ಯ ಅವರ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಆನಂದ ಮಿತ್ತಬೈಲ್, ಸೇಸಪ್ಪ ನೆಕ್ಕಿಲು ಮತ್ತಿತರರು ನಾವು ಹಲವು ವರ್ಷಗಳಿಂದ ಡಾ. ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಬೇಡಿಕೆಯನ್ನು ದಲಿತ ಕುಂದುಕೊರತೆಗಳ ಸಭೆಯಲ್ಲಿ ಮಂಡಿಸುತ್ತಿದ್ದರೂ ಅದನ್ನು ಕಾರ್ಯಸೂಚಿಗಳಲ್ಲಿ ಪ್ರಸ್ತಾಪಿಸದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಸೇಸಪ್ಪ ನೆಕ್ಕಿಲು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಆನಂದ ಮಿತ್ತಬೈಲ್. ಗಿರಿಧರ ನಾಯ್ಕೆ ಮತ್ತಿತರರು ಇದೊಂದು ಕೇವಲ ಚರ್ಚೆಗೆ ಸೀಮಿತವಾದ ವಿಷಯವಲ್ಲ. ಇದನ್ನು ಗಂಭೀರ ವಿಷಯ ಎಂದು ಪರಿಗಣಿಸಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಅವರು, ಅಂಬೇಡ್ಕರ್ ಪ್ರತಿಮೆ ನಿರ್ಮಾಣ ವಿಚಾರ ಸರಕಾರಿ ಮಟ್ಟದಲ್ಲಿ ತೀರ್ಮಾನ ಆಗಬೇಕಾದ ಸಂಗತಿಯಾಗಿದ್ದು, ಈ ಬಗ್ಗೆ ನೀವು ಮನವಿ ನೀಡಿದಲ್ಲಿ ಸರ್ಕಾರಕ್ಕೆ ಕಳುಹಿಸಿಕೊಡುವ ಕೆಲಸ ಮಾಡಲಾಗುವುದು ಎಂದರು.
ಅಂಬೇಡ್ಕರ್ ಭವನಕ್ಕೆ ಒತ್ತಾಯ: ಈಗಿನ ಉಪ ನೊಂದಣಾಧಿಕಾರಿ ಕಚೇರಿ ಮಿನಿ ವಿಧಾನಸೌಧಕ್ಕೆ ಸ್ಥಳಾಂತರ ಮಾಡಿದ ಮೇಲೆ ಆ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಬೇಕು. ಈ ಬಗ್ಗೆಯೂ ಹಿಂದಿನಿಂದಲೇ ಬೇಡಿಕೆ ಮಂಡಿಸುತ್ತಾ ಬರಲಾಗಿದೆ ಎಂದು ಆನಂದ ಮಿತ್ತಬೈಲ್ ಹೇಳಿದರು. ನಮ್ಮ ಬೇಡಿಕೆ ಇರುವಂತೆಯೇ ಉಪ ನೊಂದಣಾಧಿಕಾರಿ ಕಚೇರಿ ಸ್ಥಳದ ಪಹಣಿಯನ್ನು ಸರಕಾರಿ ಆಸ್ಪತ್ರಗೆ ವರ್ಗಾಯಿಸಲಾಗಿದೆ ಎಂಬ ಮಾಹಿತಿ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಉಪ ನೋಂದಣಾಧಿಕಾರಿ ಕಚೇರಿ ಸ್ಥಳಾಂತರ ಆಗುವವರೆಗೆ ಏನೂ ಹೇಳುವಂತಿಲ್ಲ ಎಂದು ತಹಸೀಲ್ದಾರ್ ಸ್ಪಷ್ಟನೆ ನೀಡಿದರು.
ಡಿಸಿ ಮನ್ನಾ ಭೂಮಿಯನ್ನು ಮಂಜೂರು ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ವಿಲೇವಾರಿ ಮಾಡದ ವಿಳಂಬ ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು. ಜನರ ಭಾವನೆಗಳು ಸ್ಫೋಟಗೊಳ್ಳಲು ಅವಕಾಶ ನೀಡಬೇಡಿ. ಕಾನೂನು ಬದ್ಧವಾಗಿ ಜನರಿಗೆ ಸಿಗಬೇಕಾದ ಅವಕಾಶಗಳನ್ನು ನೀಡಿ ಎಂದು ಆಗ್ರಹಿಸಲಾಯಿತು. ಶೀಘ್ರ ಮಂಜೂರು ಮಾಡುವ ಭರವಸೆ ನೀಡಲಾಯಿತು.
ನೆಟ್ಟಣಿಗೆ ಮುಡ್ನೂರು ಗ್ರಾಪಂ ವ್ಯಾಪ್ತಿಯ ಮಡ್ಯಲಮೂಲೆ, ಓಣಿಯಡ್ಕ ಪರಿಸರದಲ್ಲಿ ಮದ್ಯದಂಗಡಿ ತೆರೆಯಲು ಪ್ರಯತ್ನ ನಡೆಯುತ್ತಿದ್ದು, ಪಂಚಾಯತ್ನಿಂದ ಕಟ್ಟಡಕ್ಕೆ ಎನ್ಓಸಿ ಸಿಗದಿದ್ದರೂ ಮದ್ಯದಂಗಡಿ ತೆರೆಯಲು ಯತ್ನಿಸಲಾಗುತ್ತಿದೆ. ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ರಾಮ ಮೇನಾಲ ಆಗ್ರಹಿಸಿದರು. ಗ್ರಾಪಂ ಎನ್ಓಸಿ ನೀಡದ ಕಟ್ಟಡದಲ್ಲಿ ವೈನ್ಸ್ಟೋರ್ ತೆರೆಯಲು ಸಾಧ್ಯವಿಲ್ಲ ಎಂದು ತಾಪಂ ಇಓ ಜಗದೀಶ್ ಹೇಳಿದರು. ದಲಿತ ಕಾಲೊನಿ ಇರುವ ಪ್ರದೇಶದಲ್ಲಿ ಮದ್ಯದಂಗಡಿ ಸ್ಥಾಪಿಸಿ ಅವರು ಕುಡಿಯುವಂತೆ ಪ್ರೇರಣೆ ನೀಡುವುದು ದಲಿತ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಬರುತ್ತದೆ. ಈ ಬಗ್ಗ ತಕ್ಷಣ ಕ್ರಮ ಕೈಗೊಂಡು ಮದ್ಯದಂಗಡಿ ಸ್ಥಾಪನೆಯಾಗದಂತೆ ನೋಡಿಕೊಳ್ಳಬೇಕು ಎಂದು ಆನಂದ ಮಿತ್ತಬೈಲ್ ಹೇಳಿದರು. ಕೇವಲ 6000 ಜನ ಸಂಖ್ಯೆ ಇರುವ ನೆಟ್ಟಣಿಗೆ ಮುಡ್ನೂರಿನಲ್ಲಿ ಈಗಾಗಲೇ ಎರಡು ಮದ್ಯದಂಗಡಿಗಳಿವೆ. ಹೀಗಿರುವಾಗ ಇನ್ನೊಂದರ ಅಗತ್ಯವಿಲ್ಲ.ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ರಾಮ ಮೇನಾಲ ಮತ್ತು ಗಿರಿದರ ನಾಯ್ಕೊ ಒತ್ತಾಯಿಸಿದರು.
ಕೊಳ್ತಿಗೆ ಗ್ರಾಮದ ಪಾಲ್ತಾಡಿ ಎಂಬಲ್ಲಿನ ನಿವಾಸಿ ಭೋಜ ಎಂಬವರ ಪುತ್ರ ಬಾಬು ಎಂಬವರಿಗೆ 1.01 ಎಕರೆ ಜಮೀನು ಅಕ್ರಮ - ಅಕ್ರಮದಲ್ಲಿ ಮಂಜೂರಾಗಿದ್ದರೂ, ಇದರ ವಿರುದ್ದ ಆಕ್ಷೇಪ ಸಲ್ಲಿಸಿದ್ದಾರೆ ಎಂಬ ನೆಪದಲ್ಲಿ ರದ್ದುಪಡಿಸಲಾಗಿದೆ. ಇದರ ಹಿಂದೆ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿರುವ ಸಂಶಯವಿದೆ ಎಂದು ಗಿರಿಧರ ನಾಯ್ಕಾ ಆಪಾದಿಸಿದರು. 2001ರಲ್ಲಿ ಬಾಬು ಅವರಿಗೆ ಅಕ್ರಮ ಸಕ್ರಮದಲ್ಲಿ ಜಮೀನು ಮಂಜೂರಾಗಿತ್ತು. ಇದೇ ಪರಿಸರದ ಭೂಮಾಲೀಕರು ಇದಕ್ಕೆ ಆಕ್ಷೇಪ ಸಲ್ಲಿಸಿದ್ದರು. ಆದರೆ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೆ 2011ರಲ್ಲಿ ಅಕ್ರಮ ಸಕ್ರಮ ಮಂಜೂರಾತಿಯನ್ನು ರದ್ದು ಮಾಡಿದ್ದಾರೆ. ಇದರ ವಿರುದ್ದ ಮಾಡಿದ ಯಾವ ಮನವಿಗೂ ಸ್ಪಂದನೆ ಸಿಕ್ಕಿಲ್ಲ ಎಂದು ಅವರು ನುಡಿದರು. ಎ.ಸಿ. ಮಟ್ಟದ ಅಧಿಕಾರಿಗಳು ರದ್ದು ಮಾಡಿದ್ದರೆ ಅದಕ್ಕೆ ನಾವು ಏನೂ ಮಾಡುವಂತಿಲ್ಲ. ಬಡವರಿಗೆ ಇದರಿಂದ ಅನ್ಯಾಯವಾಗಿದ್ದರೆ ಈ ಬಗ್ಗೆ ಸಭೆಯಲ್ಲಿ ನಿರ್ಣಯ ಮಾಡಿ ಕಳುಹಿಸೋಣ ಎಂದು ತಹಸೀಲ್ದಾರ್ ನುಡಿದರು.
ಪುತ್ತೂರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಜಗದೀಶ್ ಎಸ್, ಕಡಬ ವಿಶೇಷ ತಹಸೀಲ್ದಾರ್ ನಿಂಗಯ್ಯ ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಅಧಿಕಾರಿ ರಾಮಕೃಷ್ಣ ಭಟ್ ಸ್ವಾಗತಿಸಿ ಕಲಾಪ ನಿರ್ವಹಿಸಿದರು.