ಡಿಸಿ ವರ್ಗಾವಣೆಗೆ ಕಾಂಗ್ರೆಸ್ನಲ್ಲೇ ಪರ-ವಿರೋಧ?

ಮಂಗಳೂರು, ಮಾ.23: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅವರ ವರ್ಗಾವಣೆಗೆ ಜಿಲ್ಲೆಯ ಕಾಂಗ್ರೆಸ್ನ ಕೆಲವು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯರಲ್ಲಿ ಒತ್ತಡ ಹೇರಿದ್ದಾರೆ ಎಂಬ ಬಗ್ಗೆ ಊಹಾಪೋಹ, ವದಂತಿಗಳು ಹರಿದಾಡುತ್ತಿದೆ. ಜಿಲ್ಲಾಧಿಕಾರಿ ಇಬ್ರಾಹೀಂ ಅವರನ್ನು ಜಿಲ್ಲೆಯಿಂದ ತಕ್ಷಣ ವರ್ಗಾವಣೆ ಮಾಡಬೇಕೆಂದು ಜಿಲ್ಲೆಯ ಮೂವರು ಶಾಸಕರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಆಗ್ರಹಿಸಿದ್ದಾರೆ. ಇದಕ್ಕೆ ಜಿಲ್ಲೆಯ ಇನ್ನೋರ್ವ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಜಿಲ್ಲಾಧಿಕಾರಿಯವರ ವರ್ಗಾವಣೆ ವಿಷಯಕ್ಕೆ ಸಂಬಂಧಿಸಿ ಜಿಲ್ಲೆಯ ಕಾಂಗ್ರೆಸ್ನಲ್ಲೇ ಪರ-ವಿರೋಧ ವ್ಯಕ್ತವಾಗುತ್ತಿರುವುದು ಜಿಲ್ಲೆಯ ಮೂವರು ಸಚಿವರನ್ನು ಮುಜುಗರಕ್ಕೀಡು ಮಾಡಿದೆ ಎನ್ನಲಾಗಿದೆ.
ಇಬ್ರಾಹೀಂ ದಕ್ಷ ಅಧಿಕಾರಿ: ವಸಂತ ಬಂಗೇರ
ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಓರ್ವ ದಕ್ಷ ಅಧಿಕಾರಿಯಾಗಿದ್ದಾರೆ. ಜನರ ಹಿತದೃಷ್ಟಿಯಿಂದ ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳು ಜಿಲ್ಲೆಯಲ್ಲಿ ಇರಬೇಕು. ಅಂತಹವರನ್ನು ಉಳಿಸಿಕೊಳ್ಳುವುದು ಕೂಡಾ ನಮ್ಮ ಕರ್ತವ್ಯವಾಗಬೇಕು. ಆದ್ದರಿಂದ ಅವರ ವರ್ಗಾವಣೆಗೆ ನನ್ನ ವಿರೋಧ ಇದೆ. ಈ ಬಗ್ಗೆ ಉಳಿದವರು ಏನು ಹೇಳುತ್ತಾರೆ ಎಂಬುದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬೆಳ್ತಂಗಡಿ ಶಾಸಕ ವಸಂತ ಬಂಗೇರ ತಿಳಿಸಿದ್ದಾರೆ.
ನಾನೇಕೆ ಒತ್ತಡ ಹೇರಬೇಕು: ಶಕುಂತಲಾ ಶೆಟ್ಟಿ ಪ್ರಶ್ನೆ
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ವರ್ಗಾವಣೆಗೆ ಕಾಂಗ್ರೆಸ್ನ ಕೆಲವು ಶಾಸಕರು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದಾರೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಜಿಲ್ಲಾಧಿಕಾರಿಯವರಿಂದ ನನಗೆ ಯಾವ ತೊಂದರೆಯೂ ಇಲ್ಲದಿರುವಾಗ ನಾನೇಕೆ ಅವರ ವರ್ಗಾವಣೆಗೆ ಒತ್ತಡ ಹೇರಬೇಕು ಎಂದು ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಪ್ರಶ್ನಿಸಿದ್ದಾರೆ.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸಕ್ಕೆ ಸಂಬಂಧಿಸಿ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿಯವರ ಹೆಸರು ಮುದ್ರಿತಗೊಂಡಿರುವುದಕ್ಕೆ ಸಾಕಷ್ಟು ಗೊಂದಲ ಸೃಷ್ಟಿಸಲಾಯಿತು. ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿಯವರು ಹೆಸರು ಮುದ್ರಿಸಿಲ್ಲ. ಅವರ ಕೆಳಗಿನ ಅಧಿಕಾರಿಗಳು ಹೆಸರು ಮುದ್ರಿಸಿರುವುದರಿಂದ ಈ ಗೊಂದಲ ಸೃಷ್ಟಿಯಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿ ಡಿಸಿ ಇಬ್ರಾಹೀಂ ಅವರ ವರ್ಗಾವಣೆಗೆ ಒತ್ತಾಯಿಸುವುದು ಅವಿವೇಕಿಗಳ ಕಾರ್ಯ ಎಂದವರು ಜಿಲ್ಲಾಧಿಕಾರಿಯವರ ವರ್ಗಾವಣೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ತಪ್ಪು ಮಾಹಿತಿ: ಜೆ.ಆರ್.ಲೊಬೊ
ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ವರ್ಗಾವಣೆಗೆ ಮುಖ್ಯಮಂತ್ರಿಯವರಲ್ಲಿ ಒತ್ತಡ ಹೇರಿದ್ದೇನೆಂಬುದು ತಪ್ಪು ಸಂದೇಶ. ಈ ಬಗ್ಗೆ ವಾಟ್ಸ್ಆ್ಯಪ್ಗಳಲ್ಲಿ ವದಂತಿಗಳು ಹರದಾಡುತ್ತಿದ್ದು, ಡಿಸಿ ವರ್ಗಾವಣೆಗೆ ನಾನು ಮುಖ್ಯಮಂತ್ರಿಗೆ ಒತ್ತಡ ಹೇರಿಲ್ಲ ಎಂದು ಶಾಸಕ ಜೆ.ಆರ್.ಲೊಬೊ ಪ್ರತಿಕ್ರಿಯಿಸಿದ್ದಾರೆ.
ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಬೇಕು. ಆ ಚೌಕಟ್ಟು ಮೀರಿದರೆ ಅಂತಹ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕೋ, ಉಳಿಸಿಕೊಳ್ಳಬೇಕೋ ಎಂಬುದು ಸರಕಾರಕ್ಕೆ ಬಿಟ್ಟ ವಿಚಾರ. ನಾನು ಹಾಗೂ ಶಾಸಕರಾದ ಮೊದಿನ್ ಬಾವ ಮತ್ತು ಶಕುಂತಲಾ ಶೆಟ್ಟಿ ಅವರು ಡಿಸಿ ಇಬ್ರಾಹೀಂ ವರ್ಗಾವಣೆಗೆ ಸಿಎಂರ ಮೇಲೆ ಒತ್ತಡ ಹೇರಿದ್ದೇವೆ ಎಂಬ ವದಂತಿಗಳು ವಾಟ್ಸ್ಆ್ಯಪ್ಗಳಲ್ಲಿ ಹರಡಿದಾಡುತ್ತಿವೆ. ಇಂತಹ ವದಂತಿಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ.
ಒತ್ತಡ ಹೇರಿಲ್ಲ: ಮೊಯ್ದೀನ್ ಬಾವ
ಡಿಸಿ ಇಬ್ರಾಹೀಂ ಅವರ ವರ್ಗಾವಣೆಗೆ ನಾನು ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಿಲ್ಲ. ಅದರ ಅಗತ್ಯವೂ ನನಗೆ ಬಿದ್ದಿಲ್ಲ ಎಂದು ಶಾಸಕ ಮೊದಿನ್ ಬಾವ ಪ್ರತಿಕ್ರಿಯಿಸಿದ್ದಾರೆ.
ಡಿಸಿ ವರ್ಗಾವಣೆಗೆ ಜಿಲ್ಲೆಯ ಕೆಲವು ಶಾಸಕರು ಸಿಎಂ ಮೇಲೆ ಒತ್ತಡ ಹೇರಿದ್ದಾರೆ ಎಂಬುದು ಸುಳ್ಳು. ಡಿಸಿ ವರ್ಗಾವಣೆ ವಿಷಯದಲ್ಲಿ ನನಗೆ ಮತ್ತು ಶಾಸಕ ವಸಂತ ಬಂಗೇರ ಅವರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಇಲ್ಲಸಲ್ಲದ ವದಂತಿಗಳು ವಾಟ್ಸ್ಆ್ಯಪ್ಗಳಲ್ಲಿ ಹರಿಯ ಬಿಟ್ಟಿದ್ದಾರೆ. ಇಂತಹ ಆರೋಪಗಳಲ್ಲಿ ಸತ್ಯಾಂಶವಿಲ್ಲ. ಜಿಲ್ಲೆಯ ಜನರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಅದು ಜಿಲ್ಲಾಧಿಕಾರಿಯಾಗಲಿ, ಇತರ ಅಧಿಕಾರಿಯಾಗಲಿ. ಜಿಲ್ಲೆಯ ಜನರ ಸಮಸ್ಯೆಗಳಿಗೆ ಸರಿಯಾದ ಸ್ಪಂದಿಸದಿದ್ದರೆ ಅವರನ್ನು ಇಟ್ಟುಕೊಳ್ಳುವುದು, ಬಿಡುವುದು ನಾನು ನಿರ್ಧರಿಸುವುದಲ್ಲ. ಅದು ಸರಕಾರ ನಿರ್ಧರಿಸುತ್ತದೆ ಎಂದರು.







