"ನಾನೊಬ್ಬ ಅಮಾನವೀಯ,ಅಮಾನುಷ, ಭೀಕರ ವ್ಯಕ್ತಿ".: ಡೇವಿಡ್ ಹೆಡ್ಲಿ
ಮುಂಬೈ, ಮಾ.25: "ನಾನೊಬ್ಬ ಅಮಾನವೀಯ,ಅಮಾನುಷ, ಭೀಕರ ವ್ಯಕ್ತಿ ಎಂದು ಮುಂಬೈ ಬಾಂಬ್ ಸ್ಫೋಟ ಪ್ರಕರಣದ ಅರೋಪಿ ಡೇವಿಡ್ ಕೊಲ್ಮನ್ ಹೆಡ್ಲಿ ನ್ಯಾಯಾಲಯಕ್ಕೆ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ.
ಹೆಡ್ಲಿ ಪಾಟಿ ಸವಾಲು ಪ್ರಕ್ರಿಯೆ ಮುಂಬೈ ನಲ್ಲಿ ನಡೆಯುತ್ತಿದ್ದು ಈ ವೇಳೆ "ಹೌದು ನಾನೊಬ್ಬ ದುಷ್ಟ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ’ ಎಂದನು.
"ಏಕೋ ಗೊತ್ತಿಲ್ಲ ಭಾರತ ಎಂದರೆ ನನಗೆ ಸ್ವಾಭಾವಿಕವಾಗಿ ದ್ವೇಷ ಉಕ್ಕುತ್ತದೆ. ಬಾಲ್ಯದಿಂದಲೂ ಭಾರತವನ್ನು ದ್ವೇಷಿಸುವ ಗುಣ ನನ್ನಲ್ಲಿ ಬೆಳೆದಿತ್ತು. ಭಾರತಕ್ಕೆ ಅತೀ ಹೆಚ್ಚು ಹಾನಿ ಮಾಡಲು ನಾನು ಚಿಕ್ಕಂದಿನಿಂದಲೂ ಹಾತೊರೆದಿದ್ದೆ. ಇದಕ್ಕೆ ಕಾರಣವೂ ಇದೆ. ಅದೇನೆಂದರೆ ನಾನು ಓದುತ್ತಿದ್ದ ಪಾಕಿಸ್ತಾನದ ಶಾಲೆಯ ಮೇಲೆ ಭಾರತ ಬಾಂಬ್ ಹಾಕಿತ್ತು. 1971ರಲ್ಲಿ ಭಾರತದ ವಾಯುಸೇನೆಯ ವಿಮಾನಗಳು ಶಾಲೆಯ ಮೇಲೆ ಬಾಂಬ್ಗಳನ್ನು ಹಾಕಿದ್ದವು. ಈ ಕಾರಣಕ್ಕಾಗಿ ಭಾರತದ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ನಾನು ಉಗ್ರನಾದೆ.ಉಗ್ರ ಸಂಘಟನೆ ಲಷ್ಕರ್ ಸೇರಿದೆ ” ಎಂದು ಹೇಳಿಕೆ ನೀಡಿದ್ದಾನೆ.
"ನಾನು ಉಗ್ರನಾಗಿದ್ದ ಬಗ್ಗೆ ನನ್ನ ತಂದೆಗೆ ಮಾಹಿತಿ ಇತ್ತು. ನನಗೆ ಲಷ್ಕರ್ ಜೊತೆಗೆ ಸಂಪರ್ಕ ಇರುವ ವಿಚಾರ ತಂದೆಗೆ ಗೊತ್ತಿತ್ತು. ನನ್ನ ತಂದೆ 2008 ಡಿ.25ರಂದು ನಿಧನರಾದರು.ಅವರು ನಿಧನರಾದ ಕೆಲವೇ ವಾರಗಳಲ್ಲಿ ಪಾಕಿಸ್ತಾನದ ಅಂದಿನ ಪ್ರಧಾನಿ ಯೂಸುಫ್ ಗಿಲಾನಿ ನನ್ನ ಮನೆಗೆ ಬಂದಿದ್ದರು ” ಎಂದು ಹೇಳಿಕೆ ನೀಡುವ ಮೂಲಕ ಉಗ್ರರೊಂದಿಗೆ ಪಾಕ್ ಸರಕಾರದ ಸಂಪರ್ಕದ ಬಗ್ಗೆ ಹೆಡ್ಲಿ ಬಯಲು ಮಾಡಿದ್ದಾನೆ.
"ನನ್ನ ತಂದೆ ರೇಡಿಯೊ ಪಾಕಿಸ್ತಾನದ ನಿವೃತ್ತಿ ಡಿಜಿ. ನಾನು ನನ್ನ ತಂದೆಗೆ ಲಷ್ಕರ್ ಸೇರಿರುವ ಬಗ್ಗೆ ಮಾಹಿತಿ ನೀಡಿದ್ದೆ. ಅವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ನನ್ನ ಸಹೋದರ ಮತ್ತು ಪಾಕಿಸ್ತಾನದಲ್ಲಿ ಇದ್ದಾರೆ. ಆದರೆ ಅವರು ಎಲ್ಲಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಲಾರೆ. ಅದೇ ರೀತಿ ನಾನು ಅಮೆರಿಕದ ಯಾವ ಜೈಲಿನಲ್ಲಿ ಬಂಧಿಯಾಗಿರುವೆ ಎನ್ನುವುದನ್ನು ಹೇಳಲಾರೆ.”
ನನ್ನ ಮಾಜಿ ಪತ್ನಿ ದೂರಿನಂತೆ ನಾನು ಪಾಕಿಸ್ತಾನದಲ್ಲಿ ಒಮ್ಮೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದೆ. ಅಮೆರಿಕ ವಿರುದ್ಧ ದಾಳಿ(9/11) ಬಗ್ಗೆ ಈ ವರೆಗೆ ನನ್ನನ್ನು ವಿಚಾರಣೆಗೊಳಪಡಿಸಿಲ್ಲ. ” ಎಂದು ಹೆಡ್ಲಿ ಅಭಿಪ್ರಾಯಪಟ್ಟಿದ್ಧಾನೆ.