1.70 ಲಕ್ಷ ಮಕ್ಕಳು ಶಿಕ್ಷಣ ವಂಚಿತರು
ಕುಶಾಲನಗರ,ಮಾ.25: ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಪತ್ರಿಕಾವರದಿ ಆಧರಿಸಿ ರಾಜ್ಯ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಹಿತಾಶಕ್ತಿ ಪ್ರಕರಣ ದಾಖಲಿಸಿಕೊಂಡು ಎರಡು ವರ್ಷಗಳಾಗುತ್ತಾ ಬಂದಿದೆ.
ಈ ಹಿನ್ನೆಲೆಯಲ್ಲಿ ಎಷ್ಟು ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂದು ಮಾಹಿತಿ ನೀಡಿ ಎಂದು ನ್ಯಾಯಾಲಯ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಕೋರಿದ ಹಿನ್ನೆಲೆಯಲ್ಲಿ ಇಲಾಖೆಯು 2013 ರ ನವೆಂಬರ್ನಲ್ಲಿ ರಾಜ್ಯಾದ್ಯಂತ ವೈಜ್ಞ್ಞಾನಿಕ ಸಮೀಕ್ಷೆಯನ್ನು ನಡೆಸಿದಾಗ 1.70 ಲಕ್ಷ ಮಕ್ಕಳು ಶಾಲೆಯಿಂದ ಹೊರಗಿರುವ ಅಂಶ ಬೆಳಕಿಗೆ ಬಂದಿದ್ದು, ಅದರಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿಗೆ ಬಂದ ನಂತರ ಇಷ್ಟೊಂದು ಮಕ್ಕಳು ಶಾಲೆಯಿಂದ ಹೊರಗಿರುವ ಅಂಶ ಆಂತಕಕಾರಿ ಬೆಳವಣಿಗೆಯಾಗಿ ಕಂಡು ಬಂದಿತ್ತು.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಒಂದು ವರ್ಷದ ಅವಧಿಯಲ್ಲಿ 1 ಲಕ್ಷದ 10 ಸಾವಿರಕ್ಕೂ ಅಧಿಕ ಮಕ್ಕಳನ್ನೂ ಮುಖ್ಯವಾಹಿನಿಗೆ ಕರೆ ತಂದಿರುವುದಾಗಿ ಅಲ್ಲದೆ ಇನ್ನು 53 ಸಾವಿರ ಮಕ್ಕಳು ಶಾಲೆಯಿಂದ ಹೊರಗಿರುವುದಾಗಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿತ್ತು. ಈ ಮನವಿಗೆ ಸ್ಪಂದಿಸಿದ ನ್ಯಾಯಾಲಯವು ಇದೊಂದು ಗಂಭೀರ ಸಮಸ್ಯೆ ಉಳಿದ ಎಲ್ಲ ಮಕ್ಕಳನ್ನೂ ಶಾಲೆಗೆ ಕರೆತಂದು ಈ ಅಂಕಿ ಸಂಖ್ಯೆಯನ್ನು ಸೊನ್ನೆಗೆ ಇಳಿಸಬೇಕು ಎಂದು ತಾಕೀತು ಮಾಡುತ್ತಲೇ ಬಂದಿದೆ. ಪ್ರಕರಣದ ಗಂಭೀರತೆಯನ್ನು ಅರಿತ ಸರಕಾರವು ಶಿಕ್ಷಣ ಇಲಾಖೆಯ ಮೂಲಕ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಅಭಿಯಾನ ಹಮ್ಮಿಕೊಂಡಿರುವುದಾಗಿ ಹೈಕೋರ್ಟ್ಗೆ ಪ್ರಮಾಣ ಪತ್ರವನ್ನು ಸಲ್ಲಿಸಿದೆ. ಆದರೆ ಅಭಿಯಾನದ ಮಾತಿರಲಿ ಮಕ್ಕಳನ್ನು ಶಾಲೆಗೆ ತರಲು ಬೇಕಿರುವ ಪ್ರಾಮಾಣಿಕ ಮತ್ತು ಶ್ರದ್ಧೆಯ ಕೆಲಸ ಶಿಕ್ಷಣ ಇಲಾಖೆಯಿಂದ ಆಗುತ್ತಿದೆಯೇ ಎಂದು ಹುಡುಕಲು ಹೊರಟರೆ ನಿಜವಾಗಿ ನಿರಾಸೆಯಾಗುತ್ತದೆ.
ವಿವಿಧ ಇಲಾಖೆಗಳ ಸಮನ್ವಯತೆ ಸಾಧಿಸುವುದರ ಜೊತೆಗೆ ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಕಾರದಿಂದ ಈ ಕೆಲಸವನ್ನು ಮಾಡಿ ಎಂದು ನ್ಯಾಯ ಪೀಠವೇನೋ ಹೇಳಿತ್ತು. ಆದರೆ ಸ್ವಯಂ ಸೇವಾ ಸಂಸ್ಥೆಗಳೇನೂ ಸ್ವಯಂ ಇಚ್ಛೆಯಿಂದ ಇದರಲ್ಲಿ ತೊಡಗಿಸಿಕೊಂಡವು ಆದರೆ, ಇತರೆ ಇಲಾಖೆಗ ಳಿಗೆ ನಿರ್ದೆಶನವೇನೂ ಹೋಗಲಿಲ್ಲಿ ಜೊತೆಗೆ ತಮ್ಮ ಇಲಾಖೆಯ ಕೆಲಸಗಳೇ ಬೇಕಾದಷ್ಟು ಇರುವಾಗ ಈ ಹೆಚ್ಚಿನ ಹೊರೆ ಹೊತ್ತುಕೊಳ್ಳಲು ಹೇಗೆ ಸಾಧ್ಯ ಎಂಬುದೇ ಇತರೆ ಇಲಾಖೆಗಳ ಪ್ರಶ್ನೆ ಹೀಗಾಗಿ ಇವುಗಳು ಸ್ವಯಂ ಪ್ರೇರಿತರಾಗಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಶಾಲೆಗೆ ಸೇರಿಸಲು ಮುತುವರ್ಜಿ ವಹಿಸಲಿಲ್ಲ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಅಂತರ್ ಇಲಾಖಾ ಮುಖ್ಯಸ್ಥರ ಮತ್ತು ಉನ್ನತಾಧಿಕಾರಿಗಳ ಸಮಿತಿ ಸಭೆಗಳು ಕೆಲವು ನಡೆದರೂ ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮೀಣಾಭಿವೃದ್ಧ್ದಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಪೊಲೀಸ್. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧ್ದಿ, ಸಮಾಜ ಕಲ್ಯಾಣ, ಪ.ಜಾತಿ ಮತ್ತು ಪ.ಪಂಗಡ ಮತ್ತು ಅಲ್ಪಸಂಖ್ಯಾಂತ ಇಲಾಖೆಯ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ ತೋಟಗಳಲ್ಲಿ ಮಕ್ಕಳಿಗೆ ಕಾಫಿ. ಕೀಳುವ ಕೆಲಸ ಜೊತೆಗೆ ಮೆಣಸು ಕೀಳುವ ಕೆಲಸಕ್ಕೆ ಮಕ್ಕಳನ್ನು ತಮ್ಮ ಮನೆಯ ಹಿಂಭಾಗದ ರೂಮ್ ಗಳಲ್ಲಿ ಮುಚ್ಚಿಟ್ಟು ಒಂದು ಹೊತ್ತು ಊಟ ಹಾಕಿ ಸಿಕ್ಕಿದಷ್ಟು ಸಂಬಳ ಕೊಟ್ಟು ಸಾಕಿಕೊಳ್ಳುತ್ತಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದ ಶಾಲೆಯ ಶಿಕ್ಷಕರು ತೋಟದ ಮಾಲಕರನ್ನು ವಿಚಾರಿಸಿದರೆ ಸಾರ್ ಜೇನು ಕುರುಬರ ಮಕ್ಕಳು ಬಂದು ಶಾಲೆಯಲ್ಲಿ ಕುಳಿತು ಪಾಠ ಕಲಿತರೆ ನಮ್ಮ ಮನೆಯಲ್ಲಿ ಕೆಲಸ ಮಾಡುವವರು ಯಾರು ಎಂದು ಹಾರಿಕೆಯ ಉತ್ತರವನ್ನು ಕೊಟ್ಟು ಕಳುಹಿಸುತ್ತಾರೆ. ಸರಕಾರ ಈ ವಿಷಯದ ಬಗ್ಗೆ ಗಂಭೀರ ಕ್ರಮ ಕೈ ಗೊಳ್ಳಬೇಕಾಗಿದೆ.







