ಪ್ರತ್ಯೇಕ ಗಾಂಜಾ ಮಾರಾಟ ಪ್ರಕರಣ: ಐವರ ಬಂಧನ
ಉಡುಪಿ, ಮಾ.25: ಉಡುಪಿ ನಗರ ಹಾಗೂ ಮಣಿಪಾಲದಲ್ಲಿ ಡಿಸಿಐಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐದು ಮಂದಿಯನ್ನು ಬಂಧಿಸಲಾಗಿದೆ.
ಮಾ.24ರಂದು ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಹೊಸನಗರ ತಾಲೂಕಿನ ಮಂಜಗಳಲೆ ಗ್ರಾಮದ ಲಕ್ಷ್ಮೀನಾರಾಯಣ ಭಟ್(64) ಎಂಬಾತನನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ 30ಸಾವಿರ ರೂ. ವೌಲ್ಯದ ಒಟ್ಟು 1ಕೆ.ಜಿ. 560 ಗ್ರಾಂ ತೂಕದ ಗಾಂಜಾವನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಸಿಐಬಿಯ ಇನ್ನೊಂದು ತಂಡ ಕಾರ್ಯಾಚರಣೆ ನಡೆಸಿ ಮಣಿಪಾಲದ ಟೆಂಪೊ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಗತಿನಗರದ ಮುಹಮ್ಮದ್ ತನ್ಸೀಲ್(20), ಅಲೆವೂರು ಮಂಚಿಕೆರೆಯ ಅರುಣ್(36), ಉತ್ತರ ಪ್ರದೇಶದ ವಿಕಲ್ಪ ಶುಕ್ಲ (20), ಭರತ್(19) ಎಂಬವರನ್ನು ಬಂಧಿಸಿ, 5ಸಾವಿರ ರೂ. ವೌಲ್ಯದ ಒಟ್ಟು 260 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಎಸ್ಪಿ ಅಣ್ಣಾಮಲೈ ನಿರ್ದೇಶನದಲ್ಲಿ, ಡಿವೈಎಸ್ಪಿ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಉಡುಪಿ ಡಿಸಿಐಬಿ ಇನ್ಸ್ಪೆಕ್ಟರ್ ಟಿ.ಆರ್. ಜೈಶಂಕರ್ ನೇತೃತ್ವದಲ್ಲಿ ಎಎಸ್ಸೈ ರೊಸಾರಿಯೋ ಡಿಸೋಜ, ಸಿಬ್ಬಂದಿಯರಾದ ಚಂದ್ರ ಶೆಟ್ಟಿ, ಸುರೇಶ, ರಾಘವೇಂದ್ರ ಉಪ್ಪುಂದ, ರಾಜ್ಕುಮಾರ್ ಬೈಂದೂರು, ರಾಘವೇಂದ್ರ, ರಾಮು ಹೆಗ್ಡೆ, ರವಿಚಂದ್ರ, ಪ್ರವೀಣ, ಶಿವಾನಂದ, ದಯಾನಂದ ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ.