ಫರಂಗಿಪೇಟೆ: ಯುವಕನಿಗೆ ದುಷ್ಕರ್ಮಿಗಳಿಂದ ಹಲ್ಲೆ, ಪ್ರಕರಣ ದಾಖಲು
ಬಂಟ್ವಾಳ: ಯುವಕನೋರ್ವನ ಮೇಲೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿ ಪರಾರಿಯಾದ ಘಟನೆ ಇಲ್ಲಿನ ಫರಂಗಿಪೇಟೆ ಸಮೀಪದ ಕುಂಪನಮಜಲು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಕುಂಪನಮಜಲು ನಿವಾಸಿ ಚಂದ್ರಹಾಸ ಎಂಬವರ ಮಗ ಮಿತುನ್(26) ಹಲ್ಲೆಗೊಳಗಾದ ಯುವಕ.
ಮಂಗಳೂರಿನಲ್ಲಿ ಸ್ಟಿಕರ್ ಕಟ್ಟಿಂಗ್ ಕೆಲಸ ಮಾಡುವ ಮಿತುನ್ ಕೆಲಸ ಮುಗಿಸಿ ರಾತ್ರಿ 10:30ರ ಸುಮಾರಿಗೆ ಮನೆಗೆ ಹೋಗುತ್ತಿರುವಾಗ ಕುಂಪನಮಜಲಿನ ಬಜನ ಮಂದಿರದ ಬಳಿ ಹಿಂದಿನಿಂದ ಬಂದ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿ ಪರಾರಿಯಾಗಿದೆ ಎಂದು ತಿಳಿದು ಬಂದಿದೆ.
ಹಲ್ಲೆಯಿಂದ ಮಿತುನ್ ನ ತಲೆಗೆ ಗಾಯವಾಗಿದ್ದು, ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿರುವ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ದುಷ್ಕರ್ಮಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸಂಘಪರಿವಾರದ ಕಾರ್ಯಕರ್ತನಾಗಿರುವ ಆತ, ಕುಂಪನಮಜಲಿನಲ್ಲಿರುವ ಎರಡು ಬಜನ ಮಂದಿರಗಳ ಪೈಕಿ ಒಂದರ ಪರ ಗುರುತಿಸಿ ಇನ್ನೊಂದು ಬಣದವರ ಕೆಂಗಣ್ಣಿಗೆ ಗುರಿಯಾಗಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.