ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಆಹ್ವಾನವನ್ನು ನಿರಾಕರಿಸಿದ ಆದಿವಾಸಿಗೊತ್ರ ಸಭೆಯ ನಾಯಕಿ ಸಿ.ಕೆ.ಜಾನು
ಕಲ್ಪಟ್ಟ, ಮಾರ್ಚ್. 26: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಾನಿಲ್ಲ ಎಂದು ಆದಿವಾಸಿ ಗ್ರೋತ್ರಮಹಾಸಭಾದ ನಾಯಕಿ ಸಿ..ೆ ಜಾನು ಹೇಳಿದ್ದಾರೆ. ಬಿಜೆಪಿ ಅವರಿಗೆ ಬಲೆ ಬೀಸಿತ್ತು. ಬಿಜೆಪಿಯ ಆಹ್ವಾನವನ್ನು ನಿರಾಕರಿಸಿದ ಜಾನು ತಾನು ಚುನಾವಣೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜಾನು ಸಿದ್ಧರಿದ್ದರೆ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲು ಬಿಜೆಪಿ ಸಿದ್ಧ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಹೇಳಿಕೆ ನೀಡಿದ್ದ ಬೆನ್ನಿಗೆ ಜಾನು ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಗೋತ್ರಮಹಾಸಭಾದ ಹೊಸ ರಾಜಕೀಯ ಪಕ್ಷ ಊರು ವಿಕಸನ ಮೈತ್ರಿಕೂಟ ಈ ಬಾರಿ ಸ್ಪರ್ಧಿಸುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ಚುನಾವಣೆಯಲ್ಲಿ ಜನಪರ ಹೋರಾಟಗಳ ಮೂಲಕ ಬೆಳೆದುಬಂದವರನ್ನು ಪಕ್ಷ ಬೆಂಬಲಿಸಲಿದೆ ಎಂದು ಜಾನು ಹೇಳಿದ್ದಾರೆ.
ಅಧಿಕಾರಕ್ಕೆ ಬರಲು ಎಲ್ಲ ಪಕ್ಷಗಳು ಒಂದೇ ನೀತಿಯನ್ನು ಅನುಸರಿಸುತ್ತಿವೆ. ಅದರಲ್ಲಿ ಕೇವಲ ಬಿಜೆಪಿಯನ್ನು ಮಾತ್ರ ಆರೋಪಿಸಬೇಕಿಲ್ಲ. ಬಿಜೆಪಿಸಹಿತ ಪಕ್ಷಗಳೊಂದಿಗೆ ಚರ್ಚೆ ನಡೆಸಲು ಸಿದ್ಧ ಎಂದು ಜಾನು ಸ್ಪಷ್ಟಪಡಿಸಿದ್ದಾರೆ. ಯಾವುದೇ ಪಕ್ಷ ಮೈತ್ರಿಕೂಟಗಳಲ್ಲಿ ತನಗೆ ಅಸ್ಪಶ್ಯತೆಗಳಿಲ್ಲ ಎಂದೂ ಅವರು ಹೇಳಿದ ನಂತರ ಕುಮ್ಮನಂ ಅಭ್ಯರ್ಥಿಯಾಗಲು ಆಹ್ವಾನ ನೀಡಿದ್ದರು.
ಗೋತ್ರ ಮಹಾಸಭಾ ಈ ಸಲ ಚುನಾವಣಾ ಕಣದಲ್ಲಿಲ್ಲ ಎಂದು ಕನ್ವೀನರ್ ಗೀತಾನಂದನ್ ಕೂಡ ಹೇಳಿದ್ದಾರೆ. ಸ್ಪರ್ಧಿಸುವುದೊ ಅಥವಾ ಯಾವುದಾದರೂ ಪಕ್ಷ ಅಥವಾ ಮೈತ್ರಿಕೂಟವನ್ನು ಬೆಂಬಲಿಸುವ ಬಗ್ಗೆ ತೀರ್ಮಾನವಾಗಿಲ್ಲ. ಊರು ವಿಕಸನ ಮೈತ್ರಿಕೂಟದ ಬ್ಯಾನರಿನಲ್ಲಿ ಭವಿಷ್ಯದೆಡೆಗಿನ ಹೆಜ್ಜೆ ಇರಿಸಲು ಈಗ ಸಿದ್ಧತೆ ನಡೆಸಲಾಗುತ್ತಿದೆ.ಮುಂದಿನ ಯಾವುದಾದರೂ ಚುನಾವಣೆಯಲ್ಲಿ ಯಾವುದಾದರೂ ಮೈತ್ರಿಕೂಟದ ಭಾಗವಾಗಿ ನಾವಿರುತ್ತೇವೆ. ಆದ್ದರಿಂದ ಬಿಜೆಪಿ ಸಹಿತ ಯಾರೊಂದಿಗೂ ಚರ್ಚೆ ನಡೆಸಲು ನಾವು ಸಿದ್ಧರಿದ್ದೇವೆ ಎಂದು ಗೀತಾನಂದನ್ ಹೇಳಿರುವುದಾಗಿ ವರದಿಯಾಗಿದೆ.