ತೋಟಕ್ಕೆ ಬೆಂಕಿ: ಲಕ್ಷಾಂತರ ರೂ. ಹಾನಿ

ಮುಂಡಗೋಡ, ಮಾ.26: ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಬಾಳೆ, ಅಡಿಕೆ ಗಿಡಗಳು ಸುಟ್ಟು ಕರಕಲಾದ ಘಟನೆ ತಾಲೂಕಿನ ಇಂದೂರ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ.
ಪ್ರಕಾಶ್ ಗೋಖಲೆ ಎಂಬವರ 3 ಎಕರೆ ಹಾಗೂ ನಾಗೇಶ್ ಕದಂ ಎಂಬವರ 2ಎಕರೆ ಪ್ರದೇಶದಲ್ಲಿ ಬೆಳೆದ ಬಾಳೆ, ಅಡಿಕೆ ಮರಗಳು ಬೆಂಕಿಗಾಹುತಿಯಾಗಿವೆ. ಮಧ್ಯಾಹ್ನದ ಸಮಯದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಇಡಿ ತೋಟಕ್ಕೆ ವ್ಯಾಪಿಸಿದೆ. ತೋಟದಲ್ಲಿದ್ದ ಕೂಲಿಯವರು ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದರೂ, ಬಿರುಬಿಸಿಲಿನ ಗಾಳಿಯೊಂದಿಗೆ ಬೆಂಕಿಯು ತೀವ್ರತೆಯನ್ನು ಪಡೆದುಕೊಂಡಿದೆ. ನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ 2-3 ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು ಎಂದು ತಿಳಿದು ಬಂದಿದೆ.
ಸುಮಾರು ಸಾವಿರಕ್ಕೂ ಹೆಚ್ಚು ಅಡಿಕೆ, ಬಾಳೆ ಗಿಡಗಳು ಬೆಂಕಿಗಾಹುತಿಯಾಗಿದ್ದು, ಅಂದಾಜು 6-8ಲಕ್ಷ ರೂ. ಹಾನಿ ಸಂಭವಿಸಿದೆ ಎಂದು ರೈತರಿಬ್ಬರು ನೋವಿನಿಂದ ಹೇಳಿದರು.
Next Story





