ಎ.ಜೆ. ಆಸ್ಪತ್ರೆಗೆ ರಾಮಕೃಷ್ಣ ಬಜಾಜ್ ನ್ಯಾಶನಲ್ ಕ್ವಾಲಿಟಿ ಪ್ರಶಸ್ತಿ
ಮಂಗಳೂರು, ಮಾ.26: ಇಂಡಿಯನ್ ಮರ್ಚಂಟ್ ಚೇಂಬರ್ಸ್ನ 2015ನೆ ವರ್ಷದ ರಾಮಕೃಷ್ಣ ಬಜಾಜ್ ನ್ಯಾಶನಲ್ ಕ್ವಾಲಿಟಿ ಪ್ರಶಸ್ತಿಗೆ ನಗರದ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಪಾತ್ರವಾಗಿದೆ. ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ, ಮೇಕಿಂಗ್ ಕ್ವಾಲಿಟಿ ಹ್ಯಾಪ್ಪನ್ ಕಾನ್ಫರೆನ್ಸ್ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಇಂಡಿಯನ್ ಮರ್ಚಂಟ್ ಚೇಂಬರ್ಸ್ ಪ್ರತೀ ವರ್ಷವು ಗುಣಮಟ್ಟದ ಜಾಗೃತಿಯನ್ನು ಹೊಂದಿರುವ ಭಾರತ ಮತ್ತು ವಿದೇಶಗಳಲ್ಲಿನ ವ್ಯಾಪಾರದ ವಿವಿಧ ವಿಭಾಗಗಳಲ್ಲಿ ಉನ್ನತ ಸೇವೆಯನ್ನು ನೀಡುವ ಸಂಸ್ಥೆಗಳನ್ನು ಆಯ್ಕೆ ಮಾಡಿ ಅವುಗಳಲ್ಲಿನ ಉನ್ನತ ಅಭ್ಯಾಸಗಳು, ಪ್ರಕ್ರಿಯೆಗಳು, ಭವಿಷ್ಯದ ಗುರಿಗಳನ್ನು ಪರಿಶೀಲಿಸಿ ಹೆಚ್ಚಿನ ಪರಿಶೀಲನೆಗಾಗಿ ಎಲ್ಲ ದಾಖಲೆಗಳನ್ನು ದೇಶದ ಉನ್ನತ ವ್ಯಾಪಾರ ನಿರ್ವಾಹಕರಿಗೆ ಕಳುಹಿಸಿಕೊಡಲಾಗುತ್ತದೆ. ಪರಿಶೀ ಲನೆಯ ಫಲಿತಾಂಶದ ಮೇಲೆ ಈ ಪ್ರಶಸ್ತಿಯು ನಿರ್ಧರಿತವಾಗಿರುತ್ತದೆ ಹಾಗೂ ಇದು ವ್ಯಾಪಾರ ಕ್ಷೇತ್ರದಲ್ಲಿ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಸಂಸ್ಥೆಯು ಆರೋಗ್ಯ ಸೇವೆಗಳ ವರ್ಗದಲ್ಲಿ ಪರ್ಫಾಮೆನ್ಸ್ ಎಕ್ಸಲೆನ್ಸ್ ಪ್ರಶಸ್ತಿಗಾಗಿ ಸ್ಪರ್ಧಿಸಿತ್ತು.
ಪೂರ್ವ ವೌಲ್ಯಮಾಪನಕ್ಕೆ ಮುಂಬೈಯಲ್ಲಿ ಇಂಡಿಯನ್ ಮರ್ಚಂಟ್ ಚೇಂಬರ್ಸ್ನ ಆವರಣದಲ್ಲಿ ನಡೆದ ಸಭೆಯಲ್ಲಿ ಎ.ಜೆ. ಆಸ್ಪತ್ರೆ ಮತ್ತು ಸಂಶೋ ಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಮತ್ತವರ ತಂಡವು ಪರೀಕ್ಷಕರ ಸಮ್ಮುಖದಲ್ಲಿ ಆಸ್ಪತ್ರೆಯ ಪ್ರಮುಖ ಲಕ್ಷಣಗಳು ಮತ್ತು ಮುಖ್ಯಾಂಶಗಳನ್ನು ಪ್ರಸ್ತುತ ಪಡಿಸಿದರು. ಪರೀಕ್ಷಕರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆಸ್ಪತ್ರೆಯು ಪ್ರಶಸ್ತಿಗೆ ಒಳಪಡುತ್ತದೆಂದು ತೀರ್ಪು ನೀಡಿದ್ದರು.