ಕೆ.ಸಿ.ರೋಡ್: ಎಸ್ವೈಎಸ್ಯಿಂದ ಸಾಮೂಹಿಕ ವಿವಾಹ
ಉಳ್ಳಾಲ, ಮಾ.27: ಸುನ್ನೀ ಯುವಜನ ಸಂಘ(ಎಸ್ವೈಎಸ್)ವು ಸಾಂತ್ವನ ಯೋಜನೆಯಡಿ ಬಡ ಹೆಣ್ಮಕ್ಕಳ ಮದುವೆ, ಆರ್ಥಿಕವಾಗಿ ಹಿಂದುಳಿದವರಿಗೆ ಮನೆ ನಿರ್ಮಿಸಿಕೊಡುವಂತಹ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಹೇಳಿದರು.
ಸುನ್ನೀ ಯುವಜನ ಸಂಘ ಕೆ.ಸಿ.ರೋಡ್ ಘಟಕದ ಆಶ್ರಯದಲ್ಲಿ ರವಿವಾರ ಕೊಟೆಕಾರ್ ಖಾಸಗಿ ಸಭಾಂಗಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಸ್ವೈಎಸ್ ಯುವಕರಲ್ಲಿ ಧಾರ್ಮಿಕ ಜ್ಞಾನ ಮೂಡಿಸಿ ಬಲಿಷ್ಠಗೊಳಿಸುವ ಉದ್ದೇಶ ಸಂಘಟನೆ ಹೊಂದಿದ್ದು, ಇದರ ಜೊತೆಗೆ ಸಾಮಾಜಿಕ ಸೇವೆಗಳನ್ನು ಸಾಂತ್ವನ ಯೋಜನೆಯಡಿ ಮಾಡುತ್ತಿದೆ ಎಂದರು.
ಹಿದಯಾತ್ ನಗರ ಅಲ್ ಹಿದಾಯ ಜುಮಾ ಮಸೀದಿಯ ಖತೀಬ್ ಅಸ್ಸೈಯದ್ ಸಿ.ಟಿ.ಎಂ.ಅಲಿ ಪೂಕೋಯ ತಂಙಳ್ ದುಆನೆರವೇರಿಸಿದರು. ಮಾಣಿ ದಾರುಲ್ ಇರ್ಷಾದ್ ಎಜ್ಯುಕೇಶನ್ ಸೆಂಟರ್ನ ಅಧ್ಯಕ್ಷ ಶೈಖುನಾ ಅಬ್ದುಲ್ ಹಮೀದ್ ಮುಸ್ಲಿಯಾರ್ ವಿವಾಹದ ನೇತೃತ್ವ ವಹಿಸಿದ್ದರು.
ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಎಸ್ಜೆಎಂ ತಲಪಾಡಿ ವಲಯಾಧ್ಯಕ್ಷ ಇಬ್ರಾಹೀಂ ಮದನಿ ತಲಪಾಡಿ, ಅಬ್ದುಲ್ ಹಕೀಂ ಮದನಿ ಉಚ್ಚಿಲ, ಕೆ.ಸಿ.ರೋಡ್ ಮಸೀದಿಯ ಮುದರ್ರಿಸ್ ಮುನೀರ್ ಸಖಾಫಿ, ಎಸ್ವೈಎಸ್ ವಿವಾಹ ಸಮಿತಿಯ ಅಧ್ಯಕ್ಷ ಯು.ಬಿ.ಮುಹಮ್ಮದ್ ಹಾಜಿ, ತಾಪಂ ಸದಸ್ಯ ಸಿದ್ದೀಕ್ ತಲಪಾಡಿ, ಡಾ.ಅಬ್ದುಲ್ ಖಾದರ್ ಹಾಜಿ ತಲಪಾಡಿ, ಎಸ್ಎಂಎ ತಲಪಾಡಿ ಅಧ್ಯಕ್ಷ ಬಾವ ಹಾಜಿ ಪಂಜಾಳ, ಎಸ್ಸೆಸ್ಸೆಫ್ ತಲಪಾಡಿ ಘಟಕಾಧ್ಯಕ್ಷ ಅಬ್ದುಲ್ ಹಕೀಂ ಮೊದಲಾದವರು ಉಪಸ್ಥಿತರಿದ್ದರು.
ವಿವಾಹ ಸಮಾರಂಭದ ಬಳಿಕ ‘ಸಂಘಟನೆಯ ಮಹತ್ವ’ ಎಂಬ ವಿಚಾರದಲ್ಲಿ ನಡೆದ ಅಧ್ಯಯನ ಶಿಬಿರದಲ್ಲಿ ಹಂಝ ಮದನಿ ಮಿತ್ತೂರು ವಿಷಯ ಮಂಡಿಸಿದರು.
ಎಸ್ವೈಎಸ್ ಕೆ.ಸಿ.ರೋಡ್ ಘಟಕಾಧ್ಯಕ್ಷ ಎನ್.ಎಸ್.ಉಮರ್ ಮಾಸ್ಟರ್ ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಪಲ್ಲ ವಂದಿಸಿದರು.