ವೈಸ್ಚಾನ್ಸಲರ್ ಅಪ್ಪಾರಾವ್ ಕೇಂದ್ರಕ್ಕೆ ವಾಪಸು ಪ್ರಧಾನಿಗೆ ಮನವಿ: ತೆಲಂಗಾಣ ಮುಖ್ಯಮಂತ್ರಿ

ಹೈದರಾಬಾದ್, ಮಾರ್ಚ್.27: ಹೈದರಾಬಾದ್ ಸೆಂಟ್ರಲ್ ಯುನಿವರ್ಸಿಟಿ ವೈಸ್ ಚಾನ್ಸಲರ್ ಅಪ್ಪಾರಾವ್ರನ್ನು ವಾಪಸು ಕರೆಯಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯನ್ನು ವಿನಂತಿಸುವೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ತೆಲಂಗಾಣ ವಿಧಾನ ಸಭೆಗೆ ತಿಳಿಸಿದ್ದಾರೆ. ವಿಶ್ವವಿದ್ಯಾನಿಲಯದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಉತ್ತರಿಸುತ್ತಾ ಅವರು ಈ ರೀತಿ ಹೇಳಿರುವುದಾಗಿ ಮಾಧ್ಯಮಗಳು ವರದಿಮಾಡಿವೆ. ಇನ್ನೆರಡು ಮೂರು ದಿವಸಗಳೊಳಗೆ ಈ ವಿಷಯವನ್ನು ಪ್ರಧಾನಿಯೊಂದಿಗೆ ಚರ್ಚಿಸುವೆ ಎಂದು ಅವರು ಹೇಳಿದ್ದಾರೆ.
ಅಪ್ಪಾರಾವ್ರನ್ನು ಕೇಂದ್ರಸರಕಾರ ಮರಳಿ ಕರೆಯಿಸಿಕೊಳ್ಳಬೇಕೆಂಬ ನಿರ್ಣಯ ಪಾಸು ಮಾಡಬೇಕೆಂದು ಪ್ರತಿಪಕ್ಷಗಳ ಆಗ್ರಹಕ್ಕೆ ಸರಕಾರ ಅನುಮತಿ ನೀಡಿಲ್ಲ. ಸೆಂಟ್ರಲ್ ಯುನಿವರ್ಸಿಟಿ ರಾಜ್ಯಸರಕಾರದ ಅಧಿಕಾರ ವ್ಯಾಪ್ತಿಗೊಳಪಡುವುದಿಲ್ಲ ಎಂದು ನಿರ್ಣಯಕ್ಕೆ ಅಂಗೀಕಾರಕ್ಕೆ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಕಳೆದ 22ರಂದು ಕ್ಯಾಂಪಸ್ನಲ್ಲಿ ನಡೆದ ಘಟನೆಗಳಕುರಿತು ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆಂದು ಮುಖ್ಯಮಂತ್ರಿ ಚಂದ್ರಶೇಖರ ರಾವ್ ತಿಳಿಸಿದ್ದಾರೆ.





