ಹೊಸ ಮದ್ಯದಂಗಡಿ ತೆರೆಯುವ ಪ್ರಸ್ತಾವ ಇಲ್ಲ: ಮನೋಹರ ತಹಶೀಲ್ದಾರ್
ಬೆಂಗಳೂರು, ಮಾ. 27: ರಾಜ್ಯದಲ್ಲಿ ಹೊಸ ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿದಂತೆ ಹೊಸ ಮದ್ಯದಂಗಡಿಗಳನ್ನು ತೆರೆಯುವ ಯಾವುದೇ ಪ್ರಸ್ತಾವನೆ ರಾಜ್ಯ ಸರಕಾರದ ಮುಂದಿಲ್ಲ ಎಂದು ಅಬಕಾರಿ ಸಚಿವ ಮನೋಹರ ಎಚ್.ತಹಶೀಲ್ದಾರ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಕೆಲವು ಸಿಎಲ್-2 ಮದ್ಯದಂಗಡಿಗಳಲ್ಲಿ ಗರಿಷ್ಠ ಮಾರಾಟದ ಬೆಲೆಗಿಂತಲೂ ಹೆಚ್ಚಿನ ಬೆಲೆಯನ್ನು ಪಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಎಂಎಸ್ಐಎಲ್ ವತಿಯಿಂದ ಸಿಎಲ್-11ಸಿ ಹೊಸ ಮದ್ಯದಂಡಿಗಳನ್ನು ತೆರೆಯುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
2016-17ನೆ ಸಾಲಿನ ಆಯವ್ಯಯದಲ್ಲಿ ಅಬಕಾರಿ ಇಲಾಖೆಗೆ 16,510 ಕೋಟಿ ರೂ. ಆರ್ಥಿಕ ಗುರಿಯನ್ನು ರಾಜ್ಯ ಸರಕಾರ ನಿಗದಿಪಡಿಸಿದೆ ಎಂದು ಉತ್ತರ ನೀಡಿರುವ ಸಚಿವರು, ಕಳೆದ ಮೂರು ವರ್ಷಗಳಲ್ಲಿ ಅಬಕಾರಿ ಇಲಾಖೆ ಒಟ್ಟು 40,016 ಕೋಟಿ ರೂ.ಗಳಷ್ಟು ಅಬಕಾರಿ ರಾಜಸ್ವ ಸಂಗ್ರಹ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.





