ಬೀದಿ ದೀಪದಡಿಯಲ್ಲಿ ಐಎಎಸ್ ಕನಸು

ನದೀಮುಲ್ ಹಸನ್ ಎಂಬ ಪ್ರತಿಭಾವಂತ ವಿದ್ಯಾರ್ಥಿಯ ವ್ಯಥೆ
ಉ.ಪ್ರ, ಮಾ.27: ಬೀದಿ ದೀಪದ ಬೆಳಕಿನ ಅಡಿಯಲ್ಲಿ ಪುಸ್ತಕದ ಪುಟಗಳನ್ನು ತಿರುವುತ್ತಿರುವ 20 ಹರೆಯದ ನದೀಮುಲ್ ಹಸನ್ ಮುಂದೊಂದು ದಿನ ಐಎಎಸ್ ಅಧಿಕಾರಿ ಆಗುವ ಕನಸನ್ನು ಹೊತ್ತಿದ್ದಾನೆ. ಮೋಡೆಲ್ ಟೌನ್ನಲ್ಲಿರುವ ಮಹಾನಂದ್ ಮಿಶನ್ ಹರಿಜನ ಕಾಲೇಜ್ನಲ್ಲಿ ಬಿಎಸ್ಸಿ ಕಲಿಯುತ್ತಿರುವ ಹಸನ್ ಬೀದಿ ದೀಪಗಳ ಬೆಳಕಿನ ಅಡಿಯಲ್ಲಿ ಕಲಿತು ಮುಂದೆ ತನ್ನ ಕುಟುಂಬಕ್ಕೆ ಉತ್ತಮ ಬದುಕನ್ನು ಒದಗಿಸಬೇಕು ಎಂಬ ಉದ್ದೇಶವನ್ನು ಹೊಂದಿದ್ದಾನೆ.
ಆತನ ಸಹೋದರ ಮೆಹ್ಮೂದ್ ಬೀದಿಬದಿಯಲ್ಲಿ ಕಬ್ಬಿನ ಹಾಲು ಮಾರಿ ಮನೆಯನ್ನು ನೋಡಿಕೊಳ್ಳುತ್ತಿದ್ದಾನೆ ಮತ್ತು ಹಸನ್ ಅವರ ಪುಸ್ತಕ ಮತ್ತು ಆತನ ಕಾಲೇಜ್ ಶುಲ್ಕವನ್ನು ಭರಿಸುತ್ತಾನೆ. ರಾಜ್ ನಗರದ ಸೆಕ್ಟರ್ 9ನೆ ಫುಟ್ಪಾತ್ನಲ್ಲಿ ಅವರ ವಾಸ. ತನ್ನ ಕನಸನ್ನು ಈಡೇರಿಸುವ ಸಲುವಾಗಿ ಹಸನ್ ಪ್ರತಿದಿನ ಮುಂಜಾನೆ ಐದು ಗಂಟೆಗೆ ಎದ್ದು ಐದು ಗಂಟೆಗಳ ಕಾಲ ನಿರಂತರವಾಗಿ ಓದುತ್ತಾನೆ.
ನಂತರ ಆತ ಕಾಲೇಜಿಗೆ ತೆರಳಿ ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಮರಳುತ್ತಾನೆ. ಸ್ವಲ್ಪ ವಿಶ್ರಾಂತಿಯ ನಂತರ ಮತ್ತೆ ಓದಿಗೆ ಕುಳಿತುಕೊಳ್ಳುವ ಆತ ಸಂಜೆ ಐದು ಗಂಟೆಗೆ ಏಳುತ್ತಾನೆ. ಅನಂತರ ಆತ ಸಹೋದರನಿಗೆ ಊಟ ತಯಾರಿಸುವಲ್ಲಿ ಸಹಾಯ ಮಾಡುತ್ತಾನೆ ಮತ್ತು ವಾಪಸ್ ಮಧ್ಯರಾತ್ರಿಯವರೆಗೆ ಓದು ಮುಂದುವರಿಸುತ್ತಾನೆ, ಎಲ್ಲವೂ ಬೀದಿದೀಪದ ಅಡಿಯಲ್ಲಿ.
ಆದರೆ ಮಳೆಯ ಸಮಯದಲ್ಲಿ, ಧೂಳು ಅಥವಾ ವಿದ್ಯುತ್ ವ್ಯತ್ಯಯವಾದ ಸಂದರ್ಭದಲ್ಲಿ ಆತನಿಗೆ ತನ್ನ ನಿತ್ಯ ಕಾರ್ಯವನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ತನಗೆ ಕಲಿಯಲು ಅಸಾಧ್ಯವಾಗುತ್ತದೆ ಮತ್ತು ತಾನು ಮರುದಿನ ಅಂದಿನ ಓದನ್ನು ಒಟ್ಟಿಗೆ ಮುಗಿಸಬೇಕಾಗುತ್ತದೆ ಎಂದಾತ ಹೇಳುತ್ತಾನೆ. ಪುಸ್ತಕವನ್ನು ಖರೀದಿಸುವುದು ಕೂಡಾ ದೊಡ್ಡ ಸವಾಲಿನ ಕೆಲಸ, ಸಹೋದರನ ವ್ಯವಹಾರ ಅಷ್ಟು ಚೆನ್ನಾಗಿ ನಡೆಯುತ್ತಿಲ್ಲ ಮತ್ತು ತಂದೆಯಿಂದ ಕೂಡಾ ಹಣ ನೀಡಲು ಸಾಧ್ಯವಾಗುತ್ತಿಲ್ಲ.
ತನ್ನದು ಬಡಕುಟುಂಬ. ಬದುಕಲು ಸಾಕಾಗುವಷ್ಟು ಹಣ ಕೂಡಾ ತಮ್ಮಲಿಲ್ಲ ಎಂದಾತ ಹೇಳುತ್ತಾನೆ.
ಹಸನ್ನ ಹೆತ್ತವರು ಬಹ್ರೆಚ್ ಜಿಲ್ಲೆಯ ಹಳ್ಳಿಯ ನಿವಾಸಿಗಳಾಗಿದ್ದು ಅಲ್ಲಿ ಆತನ ತಂದೆ ಕೃಷಿ ಕಾರ್ಮಿಕರಾಗಿ ದುಡಿಯುತ್ತಾರೆ. ತನ್ನ ಸಹೋದರನಿಗೆ ಮದುವೆಯಾಗಿದ್ದು, ಆತನ ಇಬ್ಬರು ಮಕ್ಕಳು ತಮ್ಮ ಹೆತ್ತವರ ಜೊತೆ ವಾಸಿಸುತ್ತಾರೆ. ಅವರನ್ನು ಇಲ್ಲಿ ತಂದು ಕೂರಿಸಲು ಆತನಿಂದ ಸಾಧ್ಯವಾಗುತ್ತಿಲ್ಲ ಎಂದಾತ ಹೇಳುತ್ತಾನೆ. ಕಳೆದ ವರ್ಷ ಹಸನ್ ಅಂತಿಮ ಪರೀಕ್ಷೆಯಲ್ಲಿ ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಒಟ್ಟಾರೆಯಾಗಿ 65% ಅಂಕವನ್ನು ಗಳಿಸಿದ್ದ.
ಆತ ಒಬ್ಬ ಪರಿಶ್ರಮಿ ವಿದ್ಯಾರ್ಥಿಯಾಗಿದ್ದು ಓದಿನಲ್ಲಿ ಅತ್ಯಂತ ಪ್ರಾಮಾಣಿಕತೆಯನ್ನು ಹೊಂದಿದ್ದಾನೆ. ಆತ ಒಬ್ಬ ಅತ್ಯಂತ ನಿಷ್ಠಾವಂತ ವಿದ್ಯಾರ್ಥಿಯಾಗಿದ್ದಾನೆ, ಆದರೆ ಆತನ ಸಾಮಾಜಿಕ-ಆರ್ಥಿಕ ಬಡತನದ ಪರಿಣಾಮವಾಗಿ ಆತನಿಗೆ ಹೆಚ್ಚು ಗೆಳೆಯರಿಲ್ಲ. ಆತ ಬರುತ್ತಾನೆ, ಕಲಿಯುತ್ತಾನೆ, ತನಗೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾನೆ ಮತ್ತು ಮರಳುತ್ತಾನೆ ಎಂದು ಎಂಎಂಎಚ್ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ಶಿಕ್ಷಕಿಯಾಗಿರುವ ಡಾ. ರಾಖಿ ದ್ವಿವೇದಿ ಹೇಳುತ್ತಾರೆ.
ತನ್ನ ಕಾಲೇಜ್ ಬಗ್ಗೆ ಮಾತನಾಡುತ್ತಾ ಹಸನ್ ಹೇಳುತ್ತಾನೆ, ಅವರೆಲ್ಲ ತನ್ನಿಂದ ದೂರವಿರುತ್ತಾರೆ ಮತ್ತು ತಾನು ಉತ್ತರಪ್ರದೇಶದವನು ಎಂದು ಎಷ್ಟು ಹೇಳಿದರೂ ತನ್ನನ್ನು ಬಿಹಾರಿ ಎಂದೇ ಕರೆಯುತ್ತಾರೆ. ಅವರಿಗೆ ವಿಜ್ಞಾನದ ವಿಷಯದ ಬಗ್ಗೆ ಸಹಾಯಬೇಕಾದಾಗ ಒಂದಿಬ್ಬರು ತನ್ನ ಬಳಿಗೆ ಬರುತ್ತಾರೆ. ಅವರಿಗೆ ತಾನು ನೆರವಾಗುತ್ತೇನೆ. ಆದರೆ ಅದು ಗೆಳೆತನವಲ್ಲ.
ಆತನ ಜೀವನದ ಉದ್ದೇಶ ಉತ್ತಮವಾಗಿ ಕಲಿತು ತನ್ನ ಕುಟುಂಬದ ಜೀವನವನ್ನು ಸುಧಾರಿಸುವುದು. ‘‘ನಾನು ಐಎಎಸ್ ಅಧಿಕಾರಿಯಾಗಲು ಬಯಸಿದ್ದೇನೆ ಮತ್ತು ನನ್ನ ಕುಟುಂಬಕ್ಕಾಗಿ ಯಾವುದೇ ರೀತಿಯ ಕಷ್ಟವನ್ನು ಎದುರಿಸಲೂ ನಾನು ಸಿದ್ಧ. ನನ್ನ ಸಹೋದರ ನನ್ನ ವಿದ್ಯಾಭ್ಯಾಸಕ್ಕಾಗಿ ಬಹಳಷ್ಟು ಖರ್ಚು ಮಾಡಿದ್ದಾರೆ ಮತ್ತು ನನ್ನ ಕುಟುಂಬಕ್ಕೆ ನೆರವಾಗಲು ನಾನು ಏನು ಬೇಕಾದರೂ ಮಾಡುತ್ತೇನೆ’’ ಎಂದು ಹಸನ್ ಹೇಳುತ್ತಾನೆ.







