ಕರ್ನಾಟಕಕ್ಕೆ ಹೆಚ್ಚುವರಿ 4,000 ಕಿ.ಮೀ. ರಾ.ಹೆದ್ದಾರಿ ರಸ್ತೆ: ಸಚಿವ ನಿತಿನ್ ಗಡ್ಕರಿ
ಮಂಗಳೂರು, ಮಾ. 28: ಕರ್ನಾಟಕ ರಾಜ್ಯವು ಪ್ರಸ್ತುತ 7018 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ಹೊಂದಿದೆ. ಪ್ರಸಕ್ತ 3290 ಕಿ.ಮೀ. ಉದ್ದದ ರಸ್ತೆಗೆ ಈಗಾಗಲೇ ಅನುಮೋದನೆ ನೀಡಲಾಗಿದ್ದು, ಒಟ್ಟು ಅಂದಾಜು 10300 ಕಿ.ಮೀ. ಆಗಿದ್ದು, ಹೆಚ್ಚುವರಿಯಾಗಿ 4,000 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ಸೇರ್ಪಡೆಗೊಳಿಸುವುದಾಗಿ ಕೇಂದ್ರದ ಹಡಗು, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.
ಪಣಂಬೂರಿನ ಜವಾಹರಲಾಲ್ ನೆಹರೂ ಶತಮಾನೋತ್ಸವ ಭವನದಲ್ಲಿ ಇಂದು 2358 ಕೋಟಿ ರೂ. ವೆಚ್ಚದಲ್ಲಿ 141 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ ಯೋಜನೆಗೆ ಶಿಲಾನ್ಯಾಸ ಹಾಗೂ ವಿವಿಧ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಣೆಗೊಳಿಸಿ ಅವರು ಮಾತನಾಡಿದರು.
ಹೆಚ್ಚುವರಿ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಅನುಮತಿ ನೀಡುವ ಕುರಿತಂತೆ ಈಗಾಗಲೇ ಕೇಂದ್ರ ಸಚಿವ ಹಾಗೂ ಸದಾನಂದ ಗೌಡ ಹಾಗೂ ರಾಜ್ಯದ ಲೋಕೋಪಯೋಗಿ ಸಚಿವರ ಜತೆ ನಾನು ಚರ್ಚಿಸಿದ್ದೇನೆ. ರಾಜ್ಯದ ಸಚಿವರು ಹಾಗೂ ಸಂಸದರು ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ರಸ್ತೆಗಳ ಪಟ್ಟಿ ಒದಗಿಸಿದರೆ ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಈ ಸಂದರ್ಭ ಹೇಳಿದರು.
ಕರ್ನಾಟಕ ಹೂಡಿಕೆದಾರರ ಸಮಾವೇಶದಲ್ಲಿ ಈಗಾಗಲೇ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಕನಿಷ್ಠ 1 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡುವುದಾಗಿ ರಾಜ್ಯದ ಜತನಗೆ ಭರವಸೆ ನೀಡಲಾಗಿದೆ ಎಂದು ಅವರು ಹೇಳಿದರು.
ತಾನು ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ ದೇಶದಲ್ಲಿ 96,000 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ರಸ್ತೆಯಿದ್ದು, ಪ್ರತಿ ವರ್ಷ 5 ಲಕ್ಷ ಅಪಘಾತಗಳು ಹಾಗೂ 1.50 ಲಕ್ಷ ಸಾವುಗಳು ಈ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ಸಂಭವಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಾಷ್ಟ್ರೀಯ ಹೆದ್ದಾರಿಯನ್ನು 2 ಲಕ್ಷ ಕಿ.ಮೀ.ಗೆ ಹೆಚ್ಚಿಸುವ ಉದ್ದೇಶವನ್ನಿರಿಸಿಕೊಂಡಿತ್ತು. ಇದರಲ್ಲಿ ಈಗಾಗಲೇ 1,55,000 ಕಿ.ಮೀ. ಆಗಿ ಪರಿವರ್ತನೆಗೊಂಡಿದೆ. ಜನರ ಪ್ರಾಣವನ್ನು ಉಳಿಸುವುದು ಹಾಗೂ ಅಪಘಾತಗಳಿಗೆ ಕಡಿವಾಣ ಹಾಕುವುದು ಪ್ರಮುಖ ಗುರಿ. 16-17ರಲ್ಲಿ ಈಗಾಗಲೇ 818 ಕಿ.ಮೀ.ಗಳ 11237 ಕೋಟಿ ರೂ.ಗಳ 19 ಯೋಜನೆಗಳನ್ನು ಈಗಾಗಲೇ ಅನುಮೋದಿಸಲಾಗಿದೆ ಎಂದವರು ಹೇಳಿದರು.
ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 12 ಪ್ರಮುಖ ಬಂದರುಗಳು, ಮೂರು ಪ್ರಮುಖ ಫ್ಲಾಗ್ಶಿಪ್ ಸಂಸ್ಥೆಗಳಾದ ಕೊಚ್ಚಿನ್ ಶಿಪ್ಯಾರ್ಡ್, ಶಿಪ್ಪಿಂಗ್ ಕಾರ್ಪ್ ಮತ್ತು ಡ್ರೆಜ್ಜಿಂಗ್ ಕಾರ್ಪ್ ಆಫ್ ಇಂಡಿಯಾ ಒಂದು ವರ್ಷದಲ್ಲಿ 6000 ಕೋಟಿ ರೂ. ಲಾಭ ಮಾಡಿವೆ. ಈ ವರ್ಷ 10,000 ಕೋಟಿ ರೂ. ಲಾಭವನ್ನು ನಿರೀಕ್ಷಿಸುತ್ತಿದ್ದೇನೆ. ಹಾಗಾಗಿ ಮೂಲಸೌಕರ್ಯಗಳನ್ನು ಕಲ್ಪಿಸಲು ನಮಗೆ ಹಣದ ಕೊರತೆ ಇಲ್ಲ. ವ್ಯವಸ್ಥೆಯಲ್ಲಿನ ಲೋಪದೋಷಗಳಿಂದಾಗಿ ಮಾತ್ರವೇ ಅಡ್ಡಿಯಾಗುತ್ತಿದೆ ಎಂದು ಅವರು ಹೇಳಿದರು.
ನಮ್ಮ ಬಂದರುಗಳನ್ನು ಅಂತಾರಾಷ್ಟ್ರೀಯ ದರ್ಜೆಗೇರಿಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿದ್ದು, 70000 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಗೆ ಮುಂದಾಗಿದ್ದು, ಈಗಾಗಲೇ 40,000 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಮುಂದಿನ ವರ್ಷ ತಮಿಳನಾಡಿನ ಕೊಲಚಲ್, ಬಂಗಾಲದ ಸಾಗರ್, ಮಹಾರಾಷ್ಟ್ರದ ವಾಗ್ವಾನ್ ಈ ಮೂರು ಹೊಸ ಬಂದರುಗಳನ್ನು ಅಭಿವೃದ್ದಿ ಪಡಿಸಲು ಚಿಂತಿಸಲಾಗಿದೆ ಎಂದವರು ಹೇಳಿದರು.
ಜಲ ಸಾರಿಗೆಗೆ ಹೆಚ್ಚಿನ ಒತ್ತು
ಜಲ ಸಾರಿಗೆಯು ಅತೀ ಕಡಿಮೆ ವೆಚ್ಚದ ಸಾರಿಗೆಯಾಗಿದ್ದು, ಅದಕ್ಕೆ ಒತ್ತು ನೀಡಲಾಗುತ್ತಿದೆ. 111 ನದಿಗಳನ್ನು ಜಲ ಮಾರ್ಗವಾಗಿ ಪರಿವರ್ತಿಸಲು ಚಿಂತನೆ ನಡೆಯುತ್ತಿದೆ. ಏರ್ಪೋರ್ಟ್ನಂತೆ ವಾಟರ್ಪೋರ್ಟ್ಗಳನ್ನು ರಚಿಸಲಾಗುತ್ತಿದೆ. ಜಲಸಾರಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಾಲ್ಡೀವ್ಸ್ನಲ್ಲಿರುವಂತೆ ಸಮುದ್ರ ವಿಮಾನಕ್ಕೆ ಆಸಕ್ತಿ ವಹಿಸಬೇಕಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯಿಸಿದರು.
ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ದೇಶದಲ್ಲಿ ಎರಡು ವರ್ಷದಲ್ಲಿ ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿ ನಡೆದಿದೆ. ಬಜೆಟ್ನಲ್ಲಿ ಕೇವಲ ಹೆದ್ದಾರಿ ಅಭಿವೃದ್ಧಿಗೆ 55 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಹೆದ್ದಾರಿ ಸಚಿವಾಲಯ 1.2 ಲಕ್ಷ ಕೋಟಿ ರೂ. ಯೋಜನೆ ರೂಪಿಸಿದೆ. ಮುಂಬೈ- ಮಂಗಳೂರು ಮಧ್ಯೆ ಜಲಸಾರಿಗೆ ಆರಂಭಿಸಿದರೆ ಅನುಕೂಲವಾಗಲಿದೆ ಎಂದರು.
ರಾಜ್ಯ ಲೋಕೋಪಯೋಗಿ ಸಚಿವ ಡಾ..ಎಚ್.ಸಿ. ಮಹಾದೇವಪ್ಪ ಮಾತನಾಡಿ, ಹಿಂದಿನ ಯುಪಿಎ ಸರಕಾರದ ಸಚಿವ ಆಸ್ಕರ್ ರ್ನಾಂಡಿಸ್ ಎರಡು ಸಾವಿರ ಕಿ.ಮೀ. ಹೆದ್ದಾರಿ ನಿರ್ಮಿಸಿದ್ದರೆ, ಈಗಿನ ಸಚಿವ ನಿತಿನ್ ಗಡ್ಕರಿ ಮೂರು ಸಾವಿರ ಕಿ.ಮೀ. ಹೆದ್ದಾರಿ ನಿರ್ಮಿಸಿ ಸಾಧನೆ ಮಾಡಿದ್ದಾರೆ. ಶಿರಾಡಿ ಸುರಂಗ ರಸ್ತೆ ಮೂಲಕ ಮಂಗಳೂರು- ಚೆನ್ನೈ ಬಂದರು ಸಂಪರ್ಕ ಯೋಜನೆಗೆ ಆದ್ಯತೆ ಕೊಡಬೇಕಿದೆ ಎಂದು ಮನವಿ ಮಾಡಿದರು.
ಸಂಸದ ನಳಿನ್ ಕುಮಾರ್ ಮಾತನಾಡಿ, ಎರಡು ವರ್ಷದಲ್ಲಿ ಮಂಗಳೂರಿನ ಎಲ್ಲ ಹೆದ್ದಾರಿಗಳು ಚತುಷ್ಪಥಗೊಳ್ಳಿವೆ. ಇನ್ನಷ್ಟು ಯೋಜನೆಗಳಿಗೆ ಸಚಿವರ ಸಹಾಯಬೇಕು ಎಂದು ಮನವಿ ಮಾಡಿದರು.
ಶಾಸಕ ಬಿ.ಎ. ಮೊಯ್ದೀನ್ ಬಾವ, ಹಾಸನದ ವಿಧನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಉಪಮೇಯರ್ ಸುಮಿತ್ರಾ ಕೆ., ಕಾರ್ಪೊರೇಟರ್ಗಳಾದ ಪ್ರತಿಭಾ ಕುಳಾಯಿ, ಸುಧೀೀರ್ ಶೆಟ್ಟಿ ಕಣ್ಣೂರು, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಲೊಕೋಪಯೋಗಿ ಇಲಾಖೆಯ ಚ್ೀ ಎಂಜಿನಿಯರ್ ಲಕ್ಷ್ಮಣ ರಾವ್ ಪೇಶ್ವೆ ಸ್ವಾಗತಿಸಿದರು. ಅಧಿಕಾರಿ ರಾಜೀವ್ ರೆಡ್ಡಿ ವಂದಿಸಿದರು.
ಶಿಲಾನ್ಯಾಸ- ಉದ್ಘಾಟನೆಗೊಂಡ ಕಾಮಗಾರಿಗಳು
ಇಂದು ಕಾರ್ಯಕ್ರಮದಲ್ಲಿ ಹಾಸನ- ಮಾರನಹಳ್ಳಿ ವಿಭಾಗದ ರಾಷ್ಟ್ರೀಯ ಹೆದ್ದಾರಿ 75ನ್ನು ಚತುಷ್ಪಥ ರಸ್ತೆಯನ್ನಾಗಿ ಅಗಲೀಕರಣ, ಗುಂಡ್ಯ ಬಳಿ ಅಡ್ಡಹೊಳೆ- ಬಂಟ್ವಾಳ ಕ್ರಾಸ್ ವಿಭಾಗದ ರಾಷ್ಟ್ರೀಯ ಹೆದ್ದಾರಿ 75ನ್ನು ಚತುಷ್ಪಥ ರಸ್ತೆಯನ್ನಾಗಿ ಅಗಲೀಕರಣ ಹಾಗೂ ರಾಷ್ಟ್ರೀಯ ಹೆದ್ದಾರಿ 75ರ 216 ಕಿ.ಮೀ.ನಿಂದ 237 ಕಿ.ಮೀ.ವರೆಗಿನ ರಸ್ತೆಯನ್ನು ಬಲವೃದ್ದಿಗೊಳಿಸುವುದು ಹಾಗೂ 250.620 ಕಿ.ಮೀ.ನಿಂದ 263 ಕಿ.ಮಿ. (ಶಿರಾಡಿ ಘಾಟ್)ವರೆಗೆ ಬೆಂಗಳೂರು- ಮಂಗಳೂರು ವಿಭಾಗದ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿಗೆ ಶಿಲಾನ್ಯಾಸ ನಡೆಯಿತು.
ರಾ.ಹೆದ್ದಾರಿ 66ರ ಬೈಕಂಪಾಡಿ ಸೇತುವೆ ಹಾಗೂ ಬಂಟ್ವಾಳ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಸೇತುವೆ ಉದ್ಘಾಟನೆ ಮತ್ತು ಶಿರಾಡಿ ಘಾಟ್ನ 237ಕಿ.ಮೀ.ನಿಂದ 250.620 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಾಗೂ ಕಾಂಕ್ರಿಟೀಕರಣ ಉದ್ಘಾಟನೆಯನ್ನು ಕೇಂದ್ರಸಚಿವ ನಿತಿನ್ ಗಡ್ಕರಿಯವರು ನೆರವೇರಿಸಿದರು.
ಜೂನ್ನೊಳಗೆ ಡಿಪಿಆರ್ ನೀಡಿದರೆ
ಶಿರಾಡಿ ಘಾಟಿ ಸುರಂಗ - 2 ವರ್ಷಗಳಲ್ಲಿ ಪೂರ್ಣ: ಗಡ್ಕರಿ ವಾಗ್ದಾನ
ಬಹು ನಿರೀಕ್ಷೆಯ ಹಾಗೂ ಬಹುಪಯೋಗಿ 23.6 ಕಿ.ಮೀ. ಶಿರಾಡಿ ಸುರಂಗ ಮಾರ್ಗದ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಜೂನ್ನೊಳಗೆ ನೀಡಿದ್ದಲ್ಲಿ, ಡಿಸೆಂಬರ್ನೊಳಗೆ ಕೆಲಸ ಆರಂಭಿಸಿ, ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರದ ಕೇಂದ್ರದ ಹಡಗು, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ ವಾಗ್ದಾನ ಮಾಡಿದ್ದಾರೆ.
ಪಣಂಬೂರಿನ ಜವಾಹರಲಾಲ್ ನೆಹರೂ ಶತಮಾನೋತ್ಸವ ಭವನದಲ್ಲಿ ಇಂದು ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕರ್ನಾಟಕದ ಚೀಫ್ ಇಂಜಿನಿಯರ್ ಡಿಪಿಆರ್ ಸಿದ್ಧಪಡಿಸುತ್ತಿದ್ದು, ಅದನ್ನು ಜೂನ್ನೊಳಗೆ ಸಲ್ಲಿಸುವುದಾಗಿ ರಾಜ್ಯ ಸಚಿವರು ಈಗಾಗಲೇ ತಿಳಿಸಿದ್ದಾರೆ.
6 ಸುರಂಗಗಳು ಹಾಗೂ 7 ಸೇತುವೆಗಳನ್ನು ಈ ಸುರಂಗ ಮಾರ್ಗ ಒಳಗೊಂಡಿರುತ್ತದೆ. ಅದರಲ್ಲಿ ಅತೀ ಉದ್ದದ ಅಂದರೆ 2.9 ಕಿ.ಮೀ. ಸುರಂಗ ಹಾಗೂ ಪ್ರಮುಖ ಸೇತುವೆಗಳಲ್ಲಿ 1.5 ಕಿ.ಮೀ. ಉದ್ದದ ಸೇತುವೆ ಸೇರಿದ್ದು, ಅದು ಬೆಂಗಳೂರಿನಿಂದ ಹಾಸನಕ್ಕೆ ನೇರ ಸಂಪರ್ಕ ಕಲ್ಪಿಸುವುದಾಗಿದೆ. ಮಂಗಳೂರು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ. ಜೂನ್ನೊಳಗೆ ಡಿಪಿಆರ್ ದೊರೆತಲ್ಲಿ, ನವೆಂಬರ್ ಅಥವಾ ಡಿಸೆಂಬರ್ನೊಳಗೆ ಕೆಲಸ ಆರಂಭಿಸಿ 2 ವರ್ಷಗಳಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ವಾಗ್ದಾನ ಮಾಡಿದರು.
ಸಾಗರ್ ಮಾಲ ಯೋಜನೆಯಡಿ ಮೀನುಗಾರರಿಗೆ ಉತ್ತೇಜನ
ಪ್ರಸ್ತುತ ಸಮುದ್ರದಲ್ಲಿ 12 ನಾಟಿಕಲ್ ದೂರದವರೆಗೆ ಮೀನುಗಾರಿಕೆಗೆ ರಾಜ್ಯ ಸರಕಾರ ಹಾಗೂ ಅದಕ್ಕಿಂತ ದೂರಕ್ಕೆ ಕೇಂದ್ರ ಸರಕಾರದಿಂದ ಪರವಾನಿಗೆ ಪಡೆಯಬೇಕಾಗುತ್ತದೆ. ಹಾಗಾಗಿ ನೈಜ ಮೀನುಗಾರರಿಗೆ ಸಾಗರ ಮಾಲ ಯೋಜನೆಯಡಿ ಟ್ರಾಲರ್ಗಳನ್ನು ಖರೀದಿಸಲು ಸಬ್ಸಿಡಿಯನ್ನು ಒದಗಿಸಲಿದೆ. ಅದಕ್ಕಾಗಿ ಮೀನುಗಾರರ 10 ಜನರ ಗುಂಪು ತಲಾ 25,000 ರೂ.ನಂತೆ 2,50,000 ರೂ.ಗಳನ್ನು ಒಟ್ಟುಗೂಡಿಸಿದರೆ ಅವರಿಗೆ 15 ಲಕ್ಷ ರೂ. ಸಬ್ಸಿಡಿಯೊಂದಿಗೆ ಬ್ಯಾಂಕ್ ಸೌಲಭ್ಯದಲ್ಲಿ 1 ಕೋಟಿ ರೂ. ವೌಲ್ಯದ ಟ್ರಾಲರ್ ಖರೀದಿಸಲು ನೆರವು ನೀಡಲಾಗುವುದು. ಈ ಮೂಲಕ ಮೀನುಗಾರರು 12 ನಾಟಿಕಲ್ಗಿಂತ ಹೆಚ್ಚಿನ ದೂರದಲ್ಲಿ ಮೀನುಗಾರಿಕೆ ಮಾಡಬಹುದಾಗಿದ್ದು, ಇದರಿಂದ ಮೀನು ಉತ್ಪನ್ನ ಹೆಚ್ಚಾಗಲಿದೆ ಎಂದು ಸಚಿವ ಗಡ್ಕರಿ ಈ ಸಂದರ್ಭ ತಿಳಿಸಿದರು.
755 ಕೋಟಿ ರೂ. ವೆಚ್ಚದಲ್ಲಿ 3 ರಸ್ತೆಗಳು ರಾ.ಹೆ.ಯಾಗಿ ಘೋಷಣೆ
ಸಂಸದ ನಳಿನ್ ಕುಮಾರ್ ಕಟೀಲ್ರವರು ಜಿಲ್ಲೆಯ 3 ಪ್ರಮುಖ ರಸ್ತೆಗಳನ್ನು ನೂತನ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಬೇಕೆಂಬ ಮನವಿಗೆ ಪೂರಕವಾಗಿ ಸ್ಪಂದಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಸ್ಥಳದಲ್ಲೇ ಆ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಿದರು. ಮಾತ್ರವಲ್ಲದೆ ಹೊಸದಿಲ್ಲಿಗೆ ಬರುವ ವೇಳೆ ಈ ಕುರಿತಾದ ಅಧಿಕೃತ ಪತ್ರವನ್ನು ನೀಡುವುದಾಗಿ ತಿಳಿಸಿದರು.
ಕಾರ್ಕಳ- ಮೂಡಬಿದ್ರೆ- ಬಿಸಿರೋಡ್ನ 44 ಕಿ.ಮೀ. ಉದ್ದದ ರಸ್ತೆ 220 ಕೋಟಿ ರೂ.ಗಳಲ್ಲಿ, ಬಿಸಿರೋಡ್- ಕೈಕಂಬ- ಕಟೀಲು- ಮುಲ್ಕಿಯ 51 ಕಿ.ಮೀ. ಉದ್ದದ ರಸ್ತೆ 255 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ದಿ ಹೊಂದಲಿದ್ದು, ತೊಕ್ಕೊಟ್ಟು- ಮುಡಿಪು- ಮೆಲ್ಕಾರ್ನ 28 ಕಿ.ಮೀ. ಉದ್ದದ ರಸ್ತೆ 280 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆಯಾಗಿ ಪರಿವರ್ತನೆಗೊಳ್ಳಲಿದೆ. ಈ ಮೂರು ರಸ್ತೆಗಳು ಒಟ್ಟು 755 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಲಿದೆ ಎಂದು ಸಚಿವ ನಿತಿನ್ ಗಡ್ಕರಿ ಕಾರ್ಯಕ್ರಮದಲ್ಲಿ ಭರವಸೆ ನೀಡಿದರು.