ಜಾತೀಯತೆಯ ಪ್ರಜ್ಞೆ ಮನಸ್ಸಿನಿಂದ ತೊಲಗಬೇಕು: ಕಾಜಲ್
ಕೊಣಾಜೆ, ಮಾ.28: ಜಾತೀಯತೆ ಎಂಬುದು ಬಾಹ್ಯ ಸಂಗತಿಯಲ್ಲ. ಅದು ಭಾರತೀಯ ಮನಸ್ಸಿನ ಆಳದಲ್ಲಿ ಬೇರು ಬಿಟ್ಟಿದ್ದು, ಕಿತ್ತೊಗೆಯುವ ಕಾರ್ಯ ನಡೆಯಬೇಕಿದೆ. ಪಂಪ, ವಚನಕಾರರು, ರಾಘವಾಂಕ, ಕುಮಾರವ್ಯಾಸ, ಕನಕ ದಾಸರಂತಹ ಕನ್ನಡದ ಕವಿಗಳು ಕುಲದ ನೆಲೆಯನ್ನು ಪ್ರಶ್ನಿಸಿದ್ದಲ್ಲದೇ, ಆ ಮನೋಭಾವ ಬದಲಾಗಬೇಕಾದ ಅಗತ್ಯವನ್ನು ಸಾರಿದ್ದಾರೆ ಎಂದು ಮಂಗಳೂರು ವಿ.ವಿ. ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಕಾಜಲ್ ಹೇಳಿದ್ದಾರೆ.
ಮಂಗಳೂರು ವಿ.ವಿ.ಯ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ‘ಹರಿಶ್ಚಂದ್ರ ಕಾವ್ಯದ ಪ್ರಸ್ತುತತೆ’ ವಿಷಯದ ಕುರಿತ ವಿಚಾರಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ವಿಚಾರ ಸಂಕಿರಣದಲ್ಲಿ ‘ಹರಿಶ್ಚಂದ್ರ ಕಾವ್ಯದಲ್ಲಿ ವರ್ಗ ಸಂಘರ್ಷ’ ಎಂಬ ವಿಷಯದಲ್ಲಿ ಕನ್ನಡ ಪ್ರಥಮ ಎಂ.ಎ. ವಿದ್ಯಾರ್ಥಿ ಜನಾರ್ದನ ನಾವಡ ಹಾಗೂ ‘ಹರಿಶ್ಚಂದ್ರ ಕಾವ್ಯದಲ್ಲಿ ವೌಲ್ಯ ಪ್ರತಿಪಾದನೆ’ ಎಂಬ ವಿಷಯದ ಕುರಿತು ವಿದ್ಯಾರ್ಥಿನಿ ಸಾಯಿಸುಮಾ ಪ್ರಬಂಧ ಮಂಡಿಸಿದರು.
ಬಳಿಕ ನಡೆದ ಸಂವಾದದಲ್ಲಿ ಡಾ. ರಾಜಶ್ರೀ, ಚಂದ್ರಶೇಖರ್, ನಮಿರಾಜ್, ವಿನೋದ್ ರಾಜ್, ಮುಸ್ತಾಫ, ವಿಕ್ರಂ ಮತ್ತಿತರರು ಭಾಗವಹಿಸಿದರು. ನಿತ್ಯೋತ್ಸವದ ಸಂಚಾಲಕ ಡಾ. ಧನಂಜಯ ಕುಂಬ್ಳೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರುತಿ ಸ್ವಾಗತಿಸಿದರು. ಶ್ಯಾಮ್ ಪ್ರಸಾದ್ ವಂದಿಸಿದರು. ಭುವನೇಶ್ವರಿ ಕಾರ್ಯಕ್ರಮ ನಿರೂಪಿಸಿದರು.