ನೇತ್ರಾವತಿಯ ಒಡಲಲ್ಲೇ ಕಾಡುತ್ತಿದೆ ನೀರಿನ ಸಮಸ್ಯೆ!, ನಗರದಲ್ಲಿ ಆರಂಭವಾಗಿದೆ ನೀರಿಗಾಗಿ ಪರದಾಟ
ಕಾಂಕ್ರೀಟ್ ರಸ್ತೆಗಳಡಿ ನಲುಗುತ್ತಿವೆ ಹಳೆಯ ಪೈಪ್ಲೈನ್ಗಳು!, ಗುಡ್ಡ ಪ್ರದೇಶಗಳಿಗೆ ತಲುಪುತ್ತಿಲ್ಲ ನೀರು
ಮಂಗಳೂರು, ಮಾ. 29: ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಯಾಗಿರುವ ನೇತ್ರಾವತಿಯನ್ನು ತನ್ನ ಒಡಲಿನಲ್ಲೇ ತುಂಬಿಸಿಕೊಂಡಿರುವ ಮಂಗಳೂರು ನಗರದಲ್ಲೇ ನೀರಿನ ಸಮಸ್ಯೆ ಜನತೆಯನ್ನು ಕಾಡಲಾರಂಭಿಸಿದೆ. ಮಂಗಳೂರು ನಗರಕ್ಕೆ ನೀರು ಪೂರೈಸಲಾಗುತ್ತಿರುವ ತುಂಬೆ ಅಣೆಕಟ್ಟಿನಿಂದ ನಗರದ 60 ವಾರ್ಡ್ಗಳಿಗೆ ನೀರು ಪೂರೈಕೆಯಾಗುತ್ತಿದ್ದರೂ, ನೀರು ಸರಬರಾಜಿನಲ್ಲಾಗುತ್ತಿರುವ ವ್ಯತ್ಯಯ, ವಿದ್ಯುತ್ ಕಣ್ಣುಮುಚ್ಚಾಲೆ, ಕ್ರಾಂಕೀಟ್ ರಸ್ತೆಗಳಡಿ ಹಳೆಯ ನೀರಿನ ಪೈಪ್ಲೈನ್ಗಳು ಒಡೆದು ಸೋರಿಕೆ ಮೊದಲಾದ ಗಂಭೀರ ಸಮಸ್ಯೆಗಳಿಂದಾಗಿ ಬೇಸಿಗೆ ಕಾಲದ ಆರಂಭದಲ್ಲೇ ನಗರದ ಜನತೆ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ.
ಮಹಾನಗರ ಪಾಲಿಕೆಯ ಬಹುತೇಕ ಗುಡ್ಡ ಹಾಗೂ ಎತ್ತರದ ಪ್ರದೇಶಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಸುರತ್ಕಲ್ನ ಕಾಟಿಪಳ್ಳ, ಚೊಕ್ಕಬೆಟ್ಟು, ಕೃಷ್ಣಾಪುರ, ಜಪ್ಪಿನಮೊಗರು, ಪಣಂಬೂರಿನ ಜನತಾಕಾಲನಿ, ಕುಳಾಯಿಯ ವಿದ್ಯಾನಗರ, ಸಣ್ಣ ನಗರ, ಬೈಕಂಪಾಡಿಯ ಅಂಗರಗುಂಡಿ, ಕುಡುಂಬೂರು, ತಿರುವೈಲು , ಪದವು, ನಂತೂರು, ಬದ್ರಿಯಾ ರಸ್ತೆ, ಗೂಡ್ಶೆಡ್, ಸ್ಟೇಟ್ಬ್ಯಾಂಕ್, ಕಂದುಕ, ಮಂಗಳಾದೇವಿ, ಹೊಯ್ಗೆಬಜಾರ್, ಕೂಳೂರಿನ ಉರುಂದಾಡಿ ಗುಡ್ಡ, ಕೂಳೂರು ಚರ್ಚ್ ಮೊದಲಾದ ಪ್ರದೇಶಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಕೆಲವೆಡೆ ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಮಾಡುವ ಕಾರ್ಯ ನಡೆಯುತ್ತಿದೆ.
24*7 ನೀರು ಪೂರೈಕೆಯ ಕನಸು ಕಾಣುತ್ತಿರುವ ಮಂಗಳೂರು ನಗರದ ಕೆಲ ವಾರ್ಡ್ಗಳಲ್ಲಿ ಎರಡು ದಿನಕ್ಕೊಮ್ಮೆ ಕನಿಷ್ಠ 2ರಿಂದ 3 ಗಂಟೆಗಳ ಕಾಲ ನೀರು ನೀಡಲು ಸಾಧ್ಯವಾಗುತ್ತಿಲ್ಲ. ಹಾಗಂತ ತುಂಬೆ ಅಣೆಕಟ್ಟಿನಲ್ಲಿ ನೀರು ಇಲ್ಲವೆಂದಲ್ಲ. ತುಂಬೆಯಲ್ಲಿ ಸದ್ಯ ನೀರಿನ ಸಂಗ್ರಹವಿದ್ದು, ಎಎಂಆರ್ ಡ್ಯಾಂನಿಂದಲೂ ನೀರನ್ನು ಹರಿಸಲಾಗುತ್ತಿರುವುದರಿಂದ ಸದ್ಯ ನಗರದ ಜನತೆಗೆ ಬೇಡಿಕೆ ಈಡೇರಿಸಲು ಸಾಧ್ಯವಾಗುವಷ್ಟು ನೀರಿನ ಸಂಗ್ರಹವಿದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ. ವಾಡಿಕೆಯ ಪ್ರಕಾರ ಎಪ್ರಿಲ್ ತಿಂಗಳಲ್ಲಿ ಮಳೆಯಾಗುತ್ತದೆ. ಮಳೆಯಾಗದಿದ್ದಲ್ಲಿ ನೀರಿನ ಸಮಸ್ಯೆ ಎದುರಾಗಬಹುದು ಎಂಬ ಆತಂಕವೂ ಅಧಿಕಾರಿಗಳದ್ದು.
ಆದರೆ, ನಗರದಲ್ಲಿ ಹಾಕಿರುವ ಓಬಿರಾಯನ ಕಾಲದ ನೀರಿ ಪೈಪ್ಲೈನ್ಗಳು ತುಕ್ಕು ಹಿಡಿದು ಅಲ್ಲಲ್ಲಿ ಬಿರುಕು ಬಿದ್ದು ಸೋರಿಕೆಯಾಗುತ್ತಿರುವುದರಿಂದ ಅರ್ಧಕ್ಕರ್ಧ ನೀರು ಪೋಲಾಗುತ್ತಿದೆ. ಇದಲ್ಲದೆ ಮನಪಾದ ನೀರಿನ ಪೈಪ್ಲೈನ್ಗೆ ಕೆಲವೆಡೆ ಅಕ್ರಮ ಸಂಪರ್ಕಗಳಿಂದಲೂ ನೀರು ಸೋರಿಕೆಯಾಗುತ್ತಿರುವುದು ಹಳೆಯ ಸಂಗತಿ. ಪ್ರತಿ ಬಾರಿ ಮನಪಾ ಸಭೆಗಳಲ್ಲಿ ಅಕ್ರಮ ಸಂಪರ್ಕಗಳನ್ನು ತೆರವುಗೊಳಿಸಬೇಕು ಎಂಬ ಒತ್ತಾಯದ ಧ್ವನಿ ಜನಪ್ರತಿನಿಧಿಗಳಿಂದ ವ್ಯಕ್ತವಾಗುತ್ತದೆಯಾದರೂ ಕೈಗೊಂಡ ಕ್ರಮಗಳು ಮಾತ್ರ ಗೋಚರಿಸುತ್ತಿಲ್ಲ.
ಮುಂದಾಲೋಚನೆ ಇಲ್ಲದ ಅಧಿಕಾರಿಗಳ ಅಭಿವೃದ್ಧಿ ಕಾಮಗಾರಿ!
ನಗರದ ರಸ್ತೆಗಳನ್ನು ಸುಂದರವಾಗಿಸುವ ನಿಟ್ಟಿನಲ್ಲಿ ನಗರದ ಬಹುತೇಕ ಪ್ರಮುಖ ರಸ್ತೆಗಳನ್ನು ಕಾಂಕ್ರಿಟೀಕರಣಗೊಳಿಸುವ ಕಾರ್ಯ ನಡೆದಿದೆ. ಆದರೆ ಅಧಿಕಾರಿಗಳ ಮುಂದಾಲೋಚನೆ ಇಲ್ಲದ, ದೂರದೃಷ್ಟಿ ಇಲ್ಲದ ಅಭಿವೃದ್ದಿ ಕಾಮಗಾರಿಗಳಿಂದಾಗಿ ಕಾಂಕ್ರೀಟ್ನ ಒಳಗಡೆ ನೀರಿನ ಪೈಪ್ಲೈನ್ಗಳು ನಲುಗುತ್ತಿವೆ. ಮೊದಲೇ 20 ವರ್ಷಗಳಿಗೂ ಹಳೆಯ ಕಬ್ಬಿಣದ ಪೈಪ್ಗಳು ಅಲ್ಲಲ್ಲಿ ತುಕ್ಕು ಹಿಡಿದಿವೆ. ಇದೀಗ ಕಾಂಕ್ರೀಟ್ ರಸ್ತೆಗಳ ಸಂದರ್ಭ ಆ ಪೈಪ್ಲೈನ್ಗಳನ್ನು ಸ್ಥಳಾಂತರಿಸುವ ಅಥವಾ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಂಡಿಲ್ಲದ ಕಾರಣ ಯಾವ ಜಾಗದಲ್ಲಿ ಅದೆಷ್ಟು ನೀರು ಪೋಲಾಗುತ್ತಿದೆ ಎಂಬುದನ್ನು ಗಮನಿಸಲು ಅಧಿಕಾರಿಗಳಿಗೂ ಸಾಧ್ಯವಾಗದ ಪರಿಸ್ಥಿತಿ ನಗರದಲ್ಲಿದೆ.
ಒಟ್ಟಾರೆ, ಮನಪಾ ವ್ಯಾಪ್ತಿಯ ಈ ಸಮಸ್ಯೆಗಳ ಬಗ್ಗೆ ‘ವಾರ್ತಾಭಾರತಿ’ ಜತೆ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ.
ಸರಿಯಾಗಿ ನೀರು ಪೂರೈಸಿ- ಇಲ್ಲಾ ಟ್ಯಾಂಕರ್ ಸಂಖ್ಯೆ ಹೆಚ್ಚಿಸಿ
ನನ್ನ ಏರಿಯಾದ ಕೆಲವೊಂದು ಪ್ರದೇಶಗಳಲ್ಲಿ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಟ್ಯಾಂಕರ್ನಲ್ಲಿ ನೀರು ಪೂರೈಸಿ ಎಂದರೆ 10 ವಾರ್ಡ್ಗಳಿಗೆ ಒಂದು ಟ್ಯಾಂಕರ್ನಲ್ಲಿ ನೀರು ಪೂರೈಕೆಯಾದರೂ ಹೇಗೆ ಸಾಧ್ಯ. ಜನರು ತೆರಿಗೆ ಕಟ್ಟುತ್ತಾರೆ. ಅವರಿಗೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ನಮ್ಮ ಕರ್ತವ್ಯ. ಆದರೆ ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ನೀರಿನ ಸಮಸ್ಯೆ ಉಂಟಾಗಿದೆ.ಒಂದು ಟ್ಯಾಂಕರ್ನಿಂದ ಇಷ್ಟೊಂದು ವಾರ್ಡ್ಗಳ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಕೌನ್ಸಿಲ್ ಸಭೆಯಲ್ಲಿ ಹೆಚ್ಚುವರಿ ಟ್ಯಾಂಕರ್ ವ್ಯವಸ್ಥೆಗಾಗಿ ಬೇಡಿಕೆ ಇಡಲಿದ್ದೇನೆ. ಮಾತ್ರವಲ್ಲದೆ ಶೇ. 7.25 ಮತ್ತು ಶೇ. 22.75ನಡಿ ದಲಿತ ಕುಟುಂಬಗಳಿಗೆ ಸಿಂಟೆಕ್ಸ್ ಒದಗಿಸುವ ಕಾರ್ಯ ಹಿಂದೆ ನಡೆಯುತ್ತಿತ್ತು. ಅದನ್ನು ಮುಂದುವರಿಸಬೇಕು. ಈ ಮೂಲಕ ಬಡವರು ನೀರು ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಾಗಲಿದೆ.
-ಪ್ರತಿಭಾ ಕುಳಾಯಿ.
ಗುಡ್ಡ ಪ್ರದೇಶಕ್ಕೆ ನೀರು ಬರುತ್ತಿಲ್ಲ- ಟ್ಯಾಂಕರ್ ನೀರು ಸಾಕಾಗುತ್ತಿಲ್ಲ!
ಪೈಪ್ ಮೂಲಕ ನೀರು ಗುಡ್ಡ ಪ್ರದೇಶಗಳಿಗೆ ಪೂರೈಕೆಯಾಗುತ್ತಿಲ್ಲ. ಅದಕ್ಕಾಗಿ ಟ್ಯಾಂಕರ್ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಸುಮಾರು 15 ವಾರ್ಡ್ಗಳಿಗೆ ಕೇವಲ ಎರಡು ಟ್ಯಾಂಕರ್ ವ್ಯವಸ್ಥೆ ಇರುವುದರಿಂದ ದಿನವೊಂದಕ್ಕೆ ಕನಿಷ್ಠ 1ಟ್ರಿಪ್ ಟ್ಯಾಂಕರ್ ನೀರು ಒಂದು ವಾರ್ಡ್ಗೆ ಪೂರೈಸಲು ಸಾಧ್ಯವಾಗುತ್ತಿಲ್ಲ. ವಾರ್ಡ್ನ ಕೆಲವೊಂದು ಪ್ರದೇಶಗಳಲ್ಲಿ ಎರಡು ದಿನಗಳಿಗೊಮ್ಮೆಯೂ ನೀರು ಪೂರೈಕೆಯಾಗುತ್ತಿಲ್ಲ. ಎತ್ತರ ಪ್ರದೇಶಗಳಿಗೆ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಸುಮಾರು 20 ವರ್ಷಗಳಿಂದ ಈ ಸಮಸ್ಯೆ ಇದೆ. ಹಳೆಯ ಪೈಪ್ಲೈನ್ಗಳನ್ನು ಬದಲಾಯಿಸದೆ ಇರುವುದು ನಗರದಲ್ಲಿ ನೀರಿನ ಸಮಸ್ಯೆ ತಲೆದೋರಲು ಪ್ರಮುಖ ಕಾರಣವಾಗಿದೆ. ಪ್ರತಿನಿತ್ಯ ನೀರಿನ ಸಮಸ್ಯೆಯಿಂದಾಗಿ ಜನಪ್ರತಿನಿಧಿಗಳಾದ ನಾವು ಅಧಿಕಾರಿಗಳ ಜತೆ ಗಲಾಟೆ ಮಾಡುವ ಪ್ರಮೇಯ ಬಂದೊದಗಿದೆ.
-ಅಯಾಝ್.
ದೂರು ನೀಡಿದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ
ನನ್ನ ವಾರ್ಡ್ನಲ್ಲಿ ಎರಡು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ನೀರು ಪೂರೈಕೆಯಲ್ಲಿ ಪ್ರೆಶರ್ ಇಲ್ಲದ ಕಾರಣ ಎತ್ತರದ ಪ್ರದೇಶಗಳಿಗೆ ತಲುಪುತ್ತಿಲ್ಲ. ದಿನನಿತ್ಯ ಜನರು ಕರೆ ಮಾಡಿ ನೀರಿನ ಸಮಸ್ಯೆ ಹೇಳುತ್ತಿರುತ್ತಾರೆ. ಅಧಿಕಾರಿಗಳಿಗೆ ಕರೆ ಮಾಡಿದರೆ ಟ್ಯಾಂಕರ್ ಇಲ್ಲ, ವಿದ್ಯುತ್ ಕಡಿತ ಎಂದೆಲ್ಲಾ ಸಬೂಬು ಹೇಳುತ್ತಾರೆ. ಜಿಲ್ಲಾಧಿಕಾರಿವರೆಗೂ ದೂರು ನೀಡಲಾಗಿದೆ.
-ಗುಣಶೇಖರ ಶೆಟ್ಟಿ.
ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಸಮಸ್ಯೆ
ನನ್ನ ವಾರ್ಡ್ನಲ್ಲಿ ಪ್ರಮುಖ ಲೈನ್ನಿಂದಲೇ ನೀರು ಪೂರೈಕೆಯಾಗುವುದರಿಂದ ಸದ್ಯ ನೀರಿನ ಗಂಭೀರ ಸಮಸ್ಯೆ ಎದುರಾಗಿಲ್ಲ. ಆದರೆ ವಿದ್ಯುತ್ ಕಣ್ಣುಮುಚ್ಚಾಲೆಯಿಂದ ಕೆಲವೊಮ್ಮೆ ಸಮಸ್ಯೆಯಾಗುತ್ತಿದೆ. ಲೋಲೈನ್ ಏರಿಯಾ ಪ್ರದೇಶಗಳಲ್ಲಿಯೂ ಸಮಸ್ಯೆ ಇದೆ.
- ಸುಧೀರ್ ಶೆಟ್ಟಿ ಕಣ್ಣೂರು.
ಈ ರೀತಿ ಸಮಸ್ಯೆ ಈವರೆಗೂ ಕಂಡಿಲ್ಲ!
ಕುಳಾಯಿ ವಾರ್ಡ್ನ ಬಹುತೇಕ ಕಡೆಗಳಲ್ಲಿ ನೀರಿನ ಸಮಸ್ಯೆ ತುಂಬಾ ಇದೆ. ಪಣಂಬೂರಿನಿಂದ ಮುಕ್ಕದವರೆಗೆ ಸಮಸ್ಯೆ ಇದೆ. ದಿನಕ್ಕೆ ಒಂದು ಟ್ರಿಪ್ ಟ್ಯಾಂಕರ್ ನೀರು ಎಲ್ಲಿಗೆಂದು ವಿತರಿಸುವುದು. ಎಸ್ಇಝೆಡ್ ಏರಿಯಾ, ವಿದ್ಯಾನಗರ, ಸಣ್ಣ ನಗರ, ಅಡ್ಕ ಮೊದಲಾದೆಡೆ ನೀರಿನ ಸಮಸ್ಯೆ ಬಹಳ ಇದೆ. ನನ್ನ ಅನುಭವದಲ್ಲಿ ಇಂತಹ ಸಮಸ್ಯೆ ಇದೇ ಮೊದಲು ಬಂದಿರುವುದು.
-ಗಣೇಶ್ ಹೊಸಬೆಟ್ಟು.
ಅಕ್ರಮ ಬೋರ್ವೆಲ್- ಬಾವಿಗಳ ನೀರಿನ ಒರತೆಯಲ್ಲಿ ಕುಸಿತ
ನನ್ನ ಏರಿಯಾ ಸಮುದ್ರಕ್ಕೆ ಸಮೀಪವಿರುವುದರಿಂದ ಇಲ್ಲಿ ನೀರಿನ ಒರತೆಯಿಂದಾಗಿ ಬಹುತೇಕರು ಬಾವಿ ನೀರನ್ನೇ ಅವಲಂಬಿಸಿರುವವರು. ಹಾಗಿದ್ದರೂ ಬೈಕಂಪಾಡಿಯ ಅಂಗರಗುಂಡಿ, ಕುಡುಂಬೂರು ಮೊದಲಾದ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಕಾಡಲಾರಂಭಿಸಿದೆ. ಕೈಗಾರಿಕಾ ಪ್ರದೇಶಗಳಲ್ಲಿ ಅಕ್ರಮವಾಗಿ ಬೋರ್ವೆಲ್ಗಳ ನಿರ್ಮಾಣವಾಗುತ್ತಿರುವುದರಿಂದ ಬಾವಿಯ ನೀರಿನ ಒರತೆಯಲ್ಲಿ ಕುಸಿತವಾಗುತ್ತಿದೆ.
-ಪುರುಷೋತ್ತಮ ಚಿತ್ರಾಪುರ.
ಗಂಭೀರ ಸಮಸ್ಯೆ ಇಲ್ಲ
ವಿದ್ಯುತ್ ಸಮಸ್ಯೆಯಿಂದಾಗಿ ಕೆಲವೊಮ್ಮೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆಯೇ ಹೊರತು ನೀರಿನ ಗಂಭೀರ ಸಮಸ್ಯೆ ಈವರೆಗೂ ನನ್ನ ವಾರ್ಡ್ನಲ್ಲಿ ಎದುರಾಗಿಲ್ಲ.
-ಜಯಂತಿ ಆಚಾರ್, ನವೀನ್ ಚಂದ್ರ ಶೆಟ್ಟಿ.
ದಿನದಲ್ಲಿ ಎರಡು ಬಾರಿ ನೀರು ಪೂರೈಕೆ
ದಿನದಲ್ಲಿ ಎರಡು ಬಾರಿ ನೀರು ಪೂರೈಕೆಯಾಗುತ್ತಿದೆ. ದಿನದ 24 ಗಂಟೆಯೂ ನೀರು ಸಿಗುವ ವ್ಯವಸ್ಥೆ ಆಗದಿದ್ದರೂ ನೀರಿನ ಗಂಭೀರ ಸಮಸ್ಯೆ ಸದ್ಯ ಇಲ್ಲ.
- ಅಬ್ದುಲ್ ರವೂಫ್.
ಪದವು- ನಂತೂರಿನಲ್ಲಿ ಒಂದು ವರ್ಷದಿಂದ ಸಮಸ್ಯೆ ಇದೆ
ನನ್ನ ವಾರ್ಡ್ನ ಪದವು ನಂತೂರಿನಲ್ಲಿ ಕಳೆದ ಒಂದು ವರ್ಷದಿಂದ ನೀರಿನ ಸಮಸ್ಯೆ ಜನರು ಎದುರಿಸುತ್ತಿದ್ದಾರೆ. ಸಂಪ್ ಹಾಗೂ ನೀರು ಸಂಗ್ರಹದ ವ್ಯವಸ್ಥೆ ಇರುವವರಿಗೆ ಅಷ್ಟೇನೂ ನೀರಿನ ಸಮಸ್ಯೆ ಎದುರಾಗಿಲ್ಲ. ಆದರೆ, ಸಣ್ಣ ಸಣ್ಣ ಮನೆಗಳವರು, ಪೈಪ್ನ ನೀರನ್ನೇ ಅವಲಂಬಿಸಿರುವವರು ಮಾತ್ರ, ನೀರು ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಕರೆ ಮಾಡಿ ಸಮಸ್ಯೆಯನ್ನು ಹೇಳುತ್ತಿದ್ದಾರೆ.
-ರೂಪಾ ಡಿ. ಬಂಗೇರ.
ಕೊಡಪಾನ ಹಿಡಿದು ಮನಪಾಕ್ಕೆ ಬರಬೇಕಾದೀತು!
ನನ್ನ ವಾರ್ಡ್ನಲ್ಲಿ ನೀರಿನ ಸಮಸ್ಯೆ ತುಂಬಾ ಇದೆ. ಈ ಬಗ್ಗೆ ಅಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದೆ. ಸಮಸ್ಯೆ ಬಗೆಹರಿಸದಿದ್ದರೆ ಕೊಡಪಾನ ಹಿಡಿದು ಪಾಲಿಕೆಗೆ ಬರುವುದಾಗಿಯೂ ಎಚ್ಚರಿಸಿದ್ದೇನೆ. ವಿದ್ಯುತ್ ಇಲ್ಲ, ಮೋಟಾರು ಹಾಳಾಗಿದೆ ಎಂಬ ಉತ್ತರ ಮಾತ್ರ ಅಧಿಕಾರಿಗಳಿಂದ ಸಿಗುತ್ತದೆಯೇ ಹೊರತು ಸಮಸ್ಯೆ ಬಗೆಹರಿಸುತ್ತಿಲ್ಲ.
-ಅಬ್ದುಲ್ ಅಝೀಝ್ ಕುದ್ರೋಳಿ.
ಒಂದು ವಾರದಲ್ಲಿ ನೀರಿನ ಸಮಸ್ಯೆಗೆ ಪರಿಹಾರ
ನಗರದ ಕೆಲವು ಎತ್ತರದ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಂಟಾಗಿರುವುದು ನಿಜ. ಮಂಗಳಾದೇವಿ, ಜಪ್ಪಿನಮೊಗರು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಕಾಡಿದ್ದು, ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಮಕೈಗೊಳ್ಳಲಾಗಿದೆ. ಈ ಬಗ್ಗೆ ಈಗಾಗಲೇ ಅಧಿಕಾರಿಗಳ ಜತೆ ಚರ್ಚಿಸಿ ಸೂಚನೆ ನೀಡಲಾಗಿದೆ. ಒಂದು ವಾರದಲ್ಲಿ ನಗರದಲ್ಲಿ ನೀರಿನ ಸಮಸ್ಯೆ ಬಗೆಹರಿಯಲಿದೆ.
ಹರಿನಾಥ್, ಮೇಯರ್, ಮನಪಾ.
ಹಳೆಯ ಪೈಪ್ಲೈನ್ ಬದಲಿಸದೆ ಸಮಸ್ಯೆಗೆ ಪರಿಹಾರ ಅಸಾಧ್ಯ
ನಗರದ ಬಹುತೇಕ ಕಾಂಕ್ರೀಟ್ ರಸ್ತೆಗಳಡಿ ನೀರಿನ ಪೈಪ್ಲೈನ್ಗಳು ಹಾದು ಹೋಗುತ್ತಿವೆ. ಅದಾಗಳೇ ಹಳೆಯ ಪೈಪ್ಲೈನ್ಗಳು ಒಡೆದು ನೀರು ಪೋಲಾಗುತ್ತಿದ್ದರೆ ಅದನ್ನು ಸರಿಪಡಿಸಲು ಹರಸಾಹಸ ಪಡಬೇಕಾಗುತ್ತದೆ. ರಸ್ತೆಗಳ ಅಭಿವೃದ್ದಿಯ ಸಂದರ್ಭವೇ ಈ ಬಗ್ಗೆ ಗಮನ ಹರಿಸಿದ್ದರೆ ಬಹುತೇಕ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಾಗುತ್ತಿತ್ತು. ಇದೀಗ ನೀರಿನ ಸೋರಿಕೆ, ಪೈಪ್ಲೈನ್ಗಳು ಒಡೆದಾಗ ಕಾಂಕ್ರೀಟ್ ರಸ್ತೆಗಳನ್ನು ಅಗೆಯಬೇಕಾದ ಅನಿವಾರ್ಯ ಪರಿಸ್ಥಿತಿ. ಇದಕ್ಕೆ ಹಲವು ಅಡ್ಡಿ ಆತಂಕಗಳನ್ನು ಎದುರಿಸಬೇಕಾಗುತ್ತದೆ. ಹಾಗಿದ್ದರೂ ಜನಪ್ರತಿನಿಧಿಯಾಗಿ ನಮ್ಮಿಂದಾದ ಪ್ರಯತ್ನ ಮಾಡಲಾಗುತ್ತಿದೆ. ಸ್ಟೇಟ್ಬ್ಯಾಂಕ್, ಕಂದುಕ, ಬದ್ರಿಯಾ ರಸ್ತೆ, ಗೂಡ್ಶೆಡ್, ನೆಲ್ಲಿಕಾಯಿ ರಸ್ತೆ ಇಲ್ಲೆಲ್ಲಾ ಕಳೆದ ಡಿಸೆಂಬರ್ನಿಂದ ಸಮಸ್ಯೆ ಎದುರಾಗಿದೆ. ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
-ಅಬ್ದುಲ್ ಲತೀಫ್.