8 ತಾಸು ವಿಳಂಬವಾಗಿ ಹೊರಟ ಏರ್ ಇಂಡಿಯಾ ಎಕ್ಸ್ಪ್ರೆಸ್: ಪರದಾಡಿದ ಪ್ರಯಾಣಿಕರು
ಮಂಗಳೂರು , ಮಾ. 29 : ತಾಂತ್ರಿಕ ಸಮಸ್ಯೆಯಿಂದಾಗಿ ಮಂಗಳೂರು - ದಮಾಮ್ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವೊಂದು 8 ಗಂಟೆಗೂ ಹೆಚ್ಚು ಕಾಲ ತಡವಾಗಿ ಹೊರಟು ಪ್ರಯಾಣಿಕರು ಪರದಾಡಿದ ಘಟನೆ ಸೋಮವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸಂಜೆ 5.30 ಕ್ಕೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ತಡರಾತ್ರಿ 1.57ಕ್ಕೆ ಹೊರಟಿತು. ಈ ವಿಳಂಬದಿಂದಾಗಿ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ 137 ಮಂದಿ ಪ್ರಯಾಣಿಕರು 8 ತಾಸಿಗೂ ಅಧಿಕ ಕಾಲ ವಿಮಾನ ನಿಲ್ದಾಣದಲ್ಲೇ ಕಾಯಬೇಕಾಯಿತು. ಪ್ರಯಾಣಿಕರ ಚೆಕ್ಇನ್ ಆದ ಮೇಲೆ ಈ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಪ್ರಯಾಣಿಕರ ಪೈಕಿ ಮಹಿಳೆಯರು, ಮಕ್ಕಳು ಬಹಳಷ್ಟು ಕಿರಿಕಿರಿ ಅನುಭಸುಂತಾಯಿತು.
‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಏರ್ ಇಂಡಿಯಾ ಮಂಗಳೂರಿನ ವ್ಯವಸ್ಥಾಪಕ ನಾಗೇಶ್ ಎಸ್.ಶೆಟ್ಟಿ, ಅಗತ್ಯ ಬಿಡಿಭಾಗಗಳು ಮುಂಬೈಯಿಂದ ಬರಬೇಕಿತ್ತು . ಹಾಗಾಗಿ ಅಲ್ಲಿಂದ ಬರುವ ಜೆಟ್ ಏರ್ವೇಸ್ ವಿಮಾನ ಬರುವವರೆಗೆ ಕಾಯಬೇಕಾಯಿತು. 10:15ಕ್ಕೆ ಬರಬೇಕಿದ್ದ ಜೆಟ್ ಏರ್ವೇಸ್ 12 . 25 ಕ್ಕೆ ಬಂದಿತ್ತು. ಆದರೂ ಶೀಘ್ರ ಸಮಸ್ಯೆ ಸರಿಪಡಿಸಿದ್ದೇವೆ ಎಂದು ಹೇಳಿದ್ದಾರೆ. 11 ಪ್ರಯಾಣಿಕರು ತಮ್ಮ ಟಿಕೆಟ್ ಅನ್ನು ರದ್ದು ಪಡಿಸಿ ವಾಪಸ್ ಹೋದರೆ, ಇಬ್ಬರು ಪ್ರಯಾಣಿಕರು ವೀಸಾ ಅವಧಿ ಮುಗಿಯುವ ಸಮಸ್ಯೆ ಎದುರಿಸುತ್ತಿದ್ದರು. ಆದರೆ ಅದಕ್ಕೆ ನಾವು ಏನೂ ಮಾಡುವಂತಿರಲಿಲ್ಲ. ಅದು ನಮ್ಮ ನಿಯಂತ್ರಣದಲ್ಲಿ ಇಲ್ಲದ ವಿಷಯ. ಆದರೂ ಅಧಿಕಾರಿಗಳು ವಿಮಾನ ವಿಳಂಬಕ್ಕೆ ಸಂಬಂಧಿಸಿ ದಾಖಲೆಗಳು ಕೇಳಿದರೆ, ನಾವು ಒದಗಿಸುತ್ತೇವೆ ಎಂದರು.