ಕನ್ನಡ ರಂಗಭೂಮಿ ವಿಶ್ವರಂಗಭೂಮಿಗೆ ಸರಿಸಮ: ಬೆಳವಾಡಿ ರವೀಂದ್ರ

ಚಿಕ್ಕಮಗಳೂರು, ಮಾ.29: ಕನ್ನಡ ರಂಗಭೂಮಿ ವಿವಿಧ ಪ್ರಕಾರಗಳೊಂದಿಗೆ ಸದೃಢವಾಗಿದ್ದು ವಿಶ್ವರಂಗಭೂಮಿಗೆ ಸರಿಸಮನಾಗಿ ವಿಕಾಸಗೊಂಡಿದೆ ಎಂದು ರಂಗಕರ್ಮಿ ಜಿಪಂ. ನೂತನ ಸದಸ್ಯ ಬೆಳವಾಡಿ ರವೀಂದ್ರ ತಿಳಿಸಿದರು.
ನಗರದ ಕುವೆಂಪು ಕಲಾ ಮಂದಿರದಲ್ಲಿ ಸುಗಮ ಸಂಗೀತ ಗಂಗಾ ಮತ್ತು ಕರ್ನಾಟಕ ನಾಟಕ ಅಕಾಡಮಿ ನೇತೃತ್ವದಲ್ಲ್ಲಿ ವಿವಿಧ ರಂಗತಂಡಗಳು ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನವನ್ನು ಉದ್ಘಾಟಿಸಿ ಮಾತನಾಡಿದರು. ನವರಸಗಳನ್ನು ತುಂಬಿಕೊಂಡು ರಂಗಭೂಮಿಯಲ್ಲಿ ಅಭಿನಯಿಸಿದರೆ ರಂಗಭೂಮಿಯೂ ನಿಜವಾದ ಜೀವಂತಿಕೆಯಿಂದ ಕೂಡಿರುತ್ತದೆ. ರಂಗಭೂಮಿಯಲ್ಲಿ ಮಿಂಚಿದವರು ಹಿರಿಕಿರಿಯ ತೆರೆಗಳಲ್ಲಿ ಯಶಸ್ವಿಯಾಗಿದ್ದಾರೆ. ನಟರು ಸೇರಿದಂತೆ ಸಾಹಿತಿಗಳು ಕೂಡ ರಂಗಭೂಮಿಯ ಉಚ್ಛ್ರಾಯ ಸ್ಥಿತಿಗೆ ತಮ್ಮದೇ ಆದ ಕೊಡುಗೆೆ ನೀಡಿದ್ದಾರೆ ಎಂದರು. ರಂಗಭೂಮಿಯಲ್ಲಿ ಶ್ರದ್ಧೆ, ನಿಷ್ಠೆ, ಸಮಯಪ್ರಜ್ಞೆ, ಶಿಸ್ತು, ತರಬೇತಿ ಮುಖ್ಯವಾಗಿದ್ದು. ಕನ್ನಡ ನುಡಿಗಟ್ಟು ಪದ್ಯಗದ್ಯಗಳು ರಂಗಭೂಮಿಯಲ್ಲಿ ಹಾಸುಹೊಕ್ಕಾಗಿವೆ ಎಂದರು.
ಈ ಕಾರ್ಯಕ್ರಮದಲ್ಲಿ ಹಿರಿಯ ರಂಗಕಲಾವಿದ ಕೆ.ಸತ್ಯನಾರಾಯಣ ಅವರನ್ನು ಸನ್ಮಾನಿಸಲಾಯಿತು. ಅಂಬರ್ವ್ಯಾಲಿ ಶಾಲೆಯ ರಂಗ ಶಿಕ್ಷಕ ವಿನೋದ್ಕುಮಾರ್ ರಷ್ಯಾದ ಸ್ಕೂಲ್ಆಫ್ ಡ್ರಮೆಟಿಕ್ ಆರ್ಟ್ಸ್ ಸಂಸ್ಥಾಪಕ ಪ್ರೊ. ಅನತೋಲಿವಸಲೇವ್ ನೀಡಿದ ಅಂತಾರಾಷ್ಟ್ರೀಯ ರಂಗಸಂದೇಶ-2016 ರನ್ನು ವಾಚಿಸಿದರು
. ಅಕ್ಷರ ತೋರಣ ದಿನಪತ್ರಿಕೆ ಪ್ರಕಟಿಸಿದ ನಗರದ 25 ರಂಗ ಕಲಾವಿದರ ಕಿರುಪರಿಚಯ ಭಾವಚಿತ್ರದೊಂದಿಗಿನ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಕಲಾಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುಗಮ ಸಂಗೀತ ಗಂಗಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಾಮತ್, ಕಲ್ಕಟ್ಟೆ ನಾಗರಾಜ್ರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶ್ರಾಂತ ಸಹಾಯಕ ನಿರ್ದೇಶಕ ಎಂ.ಎಸ್.ಚಂದ್ರಪ್ಪ, ಸುಗಮಸಂಗೀತಗಂಗಾ ಉಪಾಧ್ಯಕ್ಷ ಸ.ಗಿರಿಜಾಶಂಕರ್, ರಂಗ ಕಲಾವಿದರಾದ ಮಿತ್ರರಂಗದ ಆಲೇಶ್, ರಂಗಶ್ರೀಯ ಯಶವಂತ, ಸಂಯುಕ್ತ ತಂಡದ ಶಿವಪ್ಪ, ಶಿವಶಕ್ತಿ ಕಲಾಸಂಘದ ಪುಲಿಕೇಶ್, ಕಲ್ಕಟ್ಟೆ ಪುಸ್ತಕ ಮನೆಯ ವ್ಯವಸ್ಥಾಪಕಿ ರೇಖಾ, ನಟನಾರಂಗದ ಶಿವು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.







