ಉಡುಪಿ ನಗರಸಭೆಗೆ ಅವಿರೋಧ ಆಯ್ಕೆ
ಅಧ್ಯಕ್ಷರಾಗಿ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆಯಾಗಿ ಸಂಧ್ಯಾ

ಉಡುಪಿ, ಮಾ.29: ಇಲ್ಲಿನ ನಗರಸಭೆಯ 2ನೆ ಅವಧಿಗೆ ಅಧ್ಯಕ್ಷೆ ಯಾಗಿ ಹಿರಿಯ ಸದಸ್ಯೆ ಮೀನಾಕ್ಷಿ ಮಾಧವ ಬನ್ನಂಜೆ ಹಾಗೂ ಉಪಾಧ್ಯಕ್ಷೆಯಾಗಿ ಪ್ರಥ ಮ ಬಾರಿಗೆ ಸದಸ್ಯೆಯಾಗಿರುವ ಸಂಧ್ಯಾಕುಮಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕುಂದಾಪುರ ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ಗಳಲ್ಲಿ ಕಳೆದ ವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ವೇಳೆ ಪಡೆದ ಕಹಿ ಅನುಭವದ ಹಿನ್ನೆಲೆಯಲ್ಲಿ ಶಾಸಕ ಪ್ರಮೋದ್ ಮಧ್ವರಾಜ್ರ ಸಕ್ರಿಯ ಪಾಲ್ಗೊಳ್ಳುವಿಕೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದ ಆಂತರಿಕ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೀನಾಕ್ಷಿ ಮಾಧವರ ಹೆಸರನ್ನು ಅಂತಿಮಗೊಳಿಸಲಾಯಿತು.
ಬಳಿಕ ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಆಡಳಿತ ಕಾಂಗ್ರೆಸ್ ಪಕ್ಷದಿಂದ ಮೀನಾಕ್ಷಿ ಮಾಧವ ಹಾಗೂ ಎಸ್ಸಿ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಸಂಧ್ಯಾ ಮಾತ್ರ ನಾಮಪತ್ರ ಸ
ಲ್ಲಿಸಿದರು. 35 ಸದಸ್ಯರ ನಗರಸಭೆಯಲ್ಲಿ ಕಾಂಗ್ರೆಸ್ 22 ಸದಸ್ಯ ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆದಿರುವ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಚುನಾವಣಾಧಿಕಾರಿಯಾಗಿದ್ದ ಕುಂದಾಪುರದ ಉಪವಿಭಾ ಗಾಧಿಕಾರಿ ಅಶ್ವಥಿ ಎಸ್. ಅಪರಾಹ್ನ 3ಕ್ಕೆ ಅಧ್ಯಕ್ಷರಾಗಿ ಮೀನಾಕ್ಷಿ ಹಾಗೂ ಉಪಾಧ್ಯಕ್ಷೆಯಾಗಿ ಸಂಧ್ಯಾ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ಸಭೆಯಲ್ಲಿ ಶಾಸಕ ಪ್ರಮೋದ್ ಮಧ್ವರಾಜ್, ಪೌರಾಯುಕ್ತ ಡಿ. ಮಂಜುನಾಥಯ್ಯ ಉಪಸ್ಥಿತರಿದ್ದರು. ವಿರೋಧ ಪಕ್ಷದ ನಾಯಕ ಡಾ.ಎಂ.ಆರ್.ಪೈ, ದಿನಕರ ಹೆಗ್ಡೆ ಹೆರ್ಗ, ನಿಕಟಪೂರ್ವ ಅಧ್ಯಕ್ಷ ಯುವರಾಜ್, ಜನಾರ್ದನ ಭಂಡಾರ್ಕರ್ ಅಭಿನಂದನಾ ಭಾಷಣ ಮಾಡಿದರು.
ಸುಗಮ ಆಯ್ಕೆಯ ಮೊದಲು...
ಉಡುಪಿ ನಗರಸಭೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾದರೂ ಕೂಡ ಸ್ಥಳೀಯ ಮಟ್ಟದಲ್ಲಿ ಭಾರೀ ತುರುಸಿನ ರಾಜಕೀಯ ಚಟುವಟಿಕೆಗಳು ಕಾಂಗ್ರೆಸ್ ಪಕ್ಷದೊಳಗೆ ನಡೆದ ಬಗ್ಗೆ ವರದಿಯಾಗಿದೆ. ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಆಕಾಂಕ್ಷಿಗಳ ಸಂಖ್ಯೆ ಕೂಡ ಹೆಚ್ಚಾಗಿತ್ತು. ಮೊದಲ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಕಿನ್ನಿಮುಲ್ಕಿ ವಾರ್ಡ್ನ ಅಮೃತಾ ಕೃಷ್ಣ ಮೂರ್ತಿ, 3 ಬಾರಿ ಸದಸ್ಯರಾಗಿದ್ದ ಕೊಡವೂರು ವಾರ್ಡ್ನ ಮೀನಾಕ್ಷಿ ಮಾಧವ ಬನ್ನಂಜೆ, ಕಡಿಯಾಳಿ ವಾರ್ಡ್ನ ಗೀತಾ ಶೇಟ್, ಕಕ್ಕುಂಜೆ ವಾರ್ಡಿನ ಶೋಭಾ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದರು. ಅದರಲ್ಲೂ ಅಮೃತಾ ಮತ್ತು ಮೀನಾಕ್ಷಿ ನಡುವೆ ತುರುಸಿನ ಸ್ಪರ್ಧೆ ನಡೆದಿತ್ತು.
ಸರ್ವಸಮ್ಮತ ಅಭ್ಯರ್ಥಿಯೊಬ್ಬರ ಆಯ್ಕೆಗಾಗಿ ಮಂಗಳವಾರ ಬೆಳಗ್ಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ಹಾಗೂ ಶಾಸಕ ಪ್ರಮೋದ್ ಮಧ್ವರಾಜ್ರ ನೇತೃತ್ವದಲ್ಲಿ 22 ಸದಸ್ಯರ ಸಭೆ ಕಾಂಗ್ರೆಸ್ ಭವನದಲ್ಲಿ ನಡೆಯಿತು. ಸಭೆಯಲ್ಲಿ ನಗರಸಭೆಯ ಮಾಜಿ ಉಪಾಧ್ಯಕ್ಷ ಕುಶಲ ಶೆಟ್ಟಿ ಬಿ., ಹಾಗು ಜನಾರ್ದನ ಭಂಡಾರ್ಕರ್ ಉಪಸ್ಥಿತರಿದ್ದರು.
ಅಧ್ಯಕ್ಷ ಸ್ಥಾನದ ನಾಲ್ವರು ಆಕಾಂಕ್ಷಿಗಳ ನಡುವೆ ಚುನಾವಣೆಯನ್ನು ನಡೆಸಲಾಯಿತು. 22 ಸದಸ್ಯರು ಹಾಗೂ ಶಾಸಕರು ಮತ ಚಲಾಯಿಸಿದರು. ಇದರಲ್ಲಿ ಮೀನಾಕ್ಷಿಗೆ 7, ಶೋಭಾಗೆ 10, ಅಮೃತ ಕೃಷ್ಣಮೂರ್ತಿಗೆ 4 ಹಾಗೂ ಗೀತಾ ಸೇಠ್ಗೆ 2 ಮತಗಳು ಬಂದವು. ಕೊನೆಗೆ ಮೀನಾಕ್ಷಿ ಮತ್ತು ಶೋಭಾ ನಡುವೆ ಒಬ್ಬರ ಆಯ್ಕೆಗಾಗಿ ಎರಡನೆ ಸುತ್ತಿನ ಮತದಾನ ನಡೆದಾಗ ಮೀನಾಕ್ಷಿ 13 ಹಾಗೂ ಶೋಭಾ 10 ಮತಗಳನ್ನು ಪಡೆದರು. ಹೀಗಾಗಿ ಮೀನಾಕ್ಷಿ ಅವರನ್ನು ಪಕ್ಷದ ಸರ್ವಸಮ್ಮತ ಅಭ್ಯರ್ಥಿಯಾಗಿ ಘೋಷಿಸಲಾಯಿತು. ಬಳಿಕ ನಗರಸಭೆಯಲ್ಲಿ ನಡೆದ ಸಭೆಯ ವೇಳೆ ಅಮೃತಾ ಕೃಷ್ಣಮೂರ್ತಿ ತನ್ನ ಅಸಮಧಾನವನ್ನು ಹಲವು ವಿಧದಲ್ಲಿ ಹೊರಹಾಕಿದರು.







