ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಬ್ಬಕ್ಕ ಹೆಸರಿಡಲು ಸಮಿತಿ ಮನವಿ
ಮಂಗಳೂರು, ಮಾ.29: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಳ್ಳಾಲದ ವೀರ ರಾಣಿ ಅಬ್ಬಕ್ಕಳ ಹೆಸರನ್ನಿಡಬೇಕು ಎಂದು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ನಿಯೋಗ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಅಬ್ಬಕ್ಕ ಸಮಿತಿಯ ಗೌರವಾಧ್ಯಕ್ಷ ಮತ್ತು ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್ ನೇತೃತ್ವದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಸಮಿತಿ, ಭಾರತದ ಪಶ್ಚಿಮ ಕರಾವಳಿಯಲ್ಲಿ ಪರಕೀಯರ ದಾಳಿಯನ್ನು ಹಿಮ್ಮೆಟ್ಟಿಸಿದ ವೀರವನಿತೆ ರಾಣಿ ಅಬ್ಬಕ್ಕರ ಹೆಸರನ್ನು ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡುವುದು ಸೂಕ್ತ ಎಂದು ತಿಳಿಸಿದೆ.
ಹಳೆ ಜಿಲ್ಲಾಕಾರಿ ಕಚೇರಿ ಬಳಿ ಇರುವ ಕೆಂಪು ಕಟ್ಟಿನ ಕಟ್ಟಡವನ್ನು ಪ್ರಾಚೀನ ಸ್ಮಾರಕವಾಗಿ ಉಳಿಸಿ ಅಭಿವೃದ್ಧಿಪಡಿಸಬೇಕು. ರಾಣಿ ಅಬ್ಬಕ್ಕನ ಆಳ್ವಿಕೆಯ ಕಾಲದಲ್ಲಿ ಈ ಪ್ರದೇಶದಲ್ಲಿದ್ದ ಅವಶೇಷಗಳ ಸಂರಕ್ಷಣೆಗಾಗಿ ಈ ಕಟ್ಟಡವನ್ನು ಉಳಿಸಿಕೊಳ್ಳಬೇಕಾಗಿದೆ. ಸದ್ರಿ ಕಟ್ಟಡದ ಮುಂಭಾಗದಲ್ಲಿ ಅಬ್ಬಕ್ಕನ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಸಮಿತಿ ಮನವಿಯಲ್ಲಿ ತಿಳಿಸಿದೆ.
ನಿಯೋಗದಲ್ಲಿ ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ,ಅಬ್ಬಕ್ಕ ಸಮಿತಿಯ ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್, ಗೌರವ ಸಲಹೆಗಾರ ಪ್ರೊ.ಎ.ವಿ.ನಾವಡ, ಗೌರವ ಉಪಾಧ್ಯಕ್ಷ ಯು.ಸದಾನಂದ ಬಂಗೇರಾ, ಸಂಚಾಲಕ ಆಲಿಯಬ್ಬ ಮೊದಲಾದವರಿದ್ದರು.