ರೈತರು, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮುತುವರ್ಜಿ ತೋರಿಸಿ: ಡಾ.ವಿಶಾಲ್
ಉಡುಪಿ, ಮಾ.29: ಸಾಲದ ಬಾಧೆ ಸಹಿಸಲಾರದೆ ಮತ್ತೊಬ್ಬ ರೈತ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಜಿಲ್ಲೆಯ ಬ್ಯಾಂಕ್ಗಳು ರೈತರ ಬಗ್ಗೆ ಹಾಗೂ ಕೃಷಿ ಕ್ಷೇತ್ರದ ಕುರಿತಂತೆ ಹೆಚ್ಚಿನ ಮುತುವರ್ಜಿ ವಹಿಸುವಂತೆ, ನೀತಿಯಲ್ಲಿ ಬದ ಲಾವಣೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್. ಜಿಲ್ಲೆಯ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಂಗಳವಾರ ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಪರಿಶೀಲನಾ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಜಿಲ್ಲೆಯ ಬ್ಯಾಂಕ್ಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡುತ್ತಿದ್ದರು.
ಈ ವರ್ಷ ಜಿಲ್ಲೆಯಲ್ಲಿ ಶೇ.22ರಷ್ಟು ಮಳೆಯ ಪ್ರಮಾಣ ಕಡಿಮೆಯಾಗಿದೆ. ಇದರಿಂದ ವಿವಿಧ ಬೆಳೆಗಳ ಉತ್ಪನ್ನಗಳ ಪ್ರಮಾಣ ಸಾಕಷ್ಟು ಕಡಿಮೆ ಯಾಗಿದೆ. ಅಲ್ಲದೆ, ರಬ್ಬರ್ ಮತ್ತಿತರ ಬೆಳೆಗಳ ಬೆಲೆ ಮಾರುಕಟ್ಟೆಯಲ್ಲಿ ತೀವ್ರವಾಗಿ ಕುಸಿದಿದ್ದು, ಇದರಿಂದ ರೈತ ಕಂಗಾಲಾಗಿದ್ದಾನೆ. ಇದರೊಂದಿಗೆ ಕರಾವಳಿಯಲ್ಲಿ ಕೂಲಿಕಾರರ ಸಮಸ್ಯೆ ಸಹ ಗಂಭೀರವಾಗಿದ್ದು, ಈ ಎಲ್ಲಾ ಕಾರಣಗಳಿಂದ ಸಂಕಷ್ಟದಲ್ಲಿ ರುವ ರೈತರ ಬಗ್ಗೆ ಬ್ಯಾಂಕ್ಗಳು ಹೆಚ್ಚಿನ ಮುತು ವರ್ಜಿ ತೋರಿಸಬೇಕು ಎಂದರು.
ರೈತರಿಗೆ ಏನಾದರೂ ಆದರೆ ಅದಕ್ಕೆ ಪ್ರತಿಯೊ ಬ್ಬರೂ ಜವಾಬ್ದಾರರಾಗುತ್ತಾರೆ. ಹೀಗಾಗಿ ಅವರಿಗೆ ಹೆಚ್ಚಿನ ಪ್ರಮಾಣದ ಸಾಲ ಸೌಲಭ್ಯಗಳನ್ನು ನೀಡುವಂತೆ ಹಾಗೂ ರೈತರ ಸಾಲ ವಸೂಲಾತಿ ಪ್ರಕರಣಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳದಂತೆ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಎಲ್ಲಾ ಬ್ಯಾಂಕ್ ಖಾತೆದಾರರ ಖಾತೆಗಳನ್ನು ಆಧಾರ್ನೊಂದಿಗೆ ಜೋಡಿಸುವ (ಲಿಂಕ್) ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಮೇ ತಿಂಗಳ ಕೊನೆಯೊಳಗೆ ಆಧಾರ್ ನೋಂದಣಿ ಸಂಪೂರ್ಣಗೊಳ್ಳಲಿದೆ.
ಹೊಸ ಪ್ರವಾಸಿ ನೀತಿಯಂತೆ ಆರಂಭಗೊಳ್ಳುವ ಹೋಟೆಲ್, ವಸತಿಗೃಹಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸಾಮಾಜಿಕ ಭದ್ರತಾ ಯೋಜನೆಗಳಾದ ಅಟಲ್ ಪಿಂಚಣಿ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಮತ್ತಿತರ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸುವಂತೆ ಅವರು ತಿಳಿಸಿದರು. ಇದೇ ಸಂದರ್ಭ ಡಾ.ವಿಶಾಲ್ ಅವರು 2016-17ನೆ ಸಾಲಿನ ಜಿಲ್ಲಾ ಸಾಲ ಯೋಜನೆಯನ್ನು ಬಿಡುಗಡೆಗೊಳಿಸಿದರು. ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಿಂಡಿಕೇಟ್ ಬ್ಯಾಂಕ್ನ ಉಡುಪಿ ವಿಭಾಗೀಯ ಕಚೇರಿಯ ಸಹಾಯಕ ಮಹಾಪ್ರಬಂಧಕ ಪಿ.ಪಳಿನಿಸ್ವಾಮಿ ಮೂರನೆ ತ್ರೈಮಾಸಿಕದ ಪ್ರಗತಿಯ ಅಂಕಿಅಂಶಗಳನ್ನು ಸಭೆಯ ಮುಂದಿರಿಸಿ, ಜಿಲ್ಲೆಯ ಬ್ಯಾಂಕ್ಗಳು 2015 ಡಿಸೆಂಬರ್ ಅಂತ್ಯಕ್ಕೆ 17,275.82 ಕೋಟಿ ರೂ. ಠೇವಣಿ ಹಾಗೂ 8,703.93 ಕೋಟಿ ರೂ. ಮುಂಗಡವನ್ನು ಹೊಂದಿವೆ. ಜಿಲ್ಲೆಯು ವಾರ್ಷಿಕವಾಗಿ ಠೇವಣಿಯಲ್ಲಿ ಶೇ.13.35 ಹಾಗೂ ಮುಂಗಡದಲ್ಲಿ ಶೇ.13.23 ಅಭಿವೃದ್ಧಿ ಹೊಂದಿದೆ. ಸಾಲ-ಠೇವಣಿಯ ಅನುಪಾತ ಶೇ.50.38ಕ್ಕೇರಿದೆ ಎಂದರು.
ಡಿ.31ರವರೆಗೆ ಜಿಲ್ಲೆಯ ಬ್ಯಾಂಕ್ಗಳು 4,450.80 ಕೋಟಿ ರೂ. ಸಾಲ ನೀಡಿ ಈ ಅವಧಿಯ ವಾರ್ಷಿಕ ಗುರಿ 6,420 ಕೋಟಿ ರೂ.ಗಳಲ್ಲಿ ಶೇ. 69.33ರಷ್ಟು ಪ್ರಗತಿ ಸಾಧಿಸಿದೆ. ಇದರಲ್ಲಿ ಕೃಷಿಕ್ಷೇತ್ರಕ್ಕೆ 1,223.41 ಕೋಟಿ ರೂ. ಕಿರು ಹಾಗೂ ಸಣ್ಣ ಉದ್ದಿಮೆಗೆ 1,301.63 ಕೋಟಿ ರೂ., ಇತರ ಆದ್ಯತಾ ರಂಗಕ್ಕೆ 612 ಕೋಟಿ ರೂ. ಸಾಲ ನೀಡಲಾಗಿದೆ. ಆದ್ಯತಾ ರಂಗಕ್ಕೆ ನಿಗದಿಪಡಿಸಿದ ಗುರಿ 5,158.72 ಕೋಟಿ ರೂ.ಗೆ ಪ್ರತಿಯಾಗಿ 3,136.64 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದರು. ಪ್ರಸ್ತುತ ಹಣಕಾಸು ವರ್ಷದ 3ನೆ ತ್ರೈಮಾಸಿಕದ ಕೊನೆಯವರೆಗೆ ಬ್ಯಾಂಕ್ಗಳು ಜಿಲ್ಲೆಯಲ್ಲಿ ದುರ್ಬಲ ವರ್ಗದ 1,31,602 ಜನರಿಗೆ 1,348.45 ಕೋಟಿ ರೂ. ಸಾಲ ನೀಡಿದ್ದು, ಪ.ಜಾತಿ ಹಾಗೂ ಪ.ಪಂಗಡದ 19,055 ಫಲಾನುಭವಿಗಳಿಗೆ 136.99 ಕೋಟಿ ರೂ. ಸಾಲ ನೀಡಿದೆ.
ಅಲ್ಪಸಂಖ್ಯಾತ ವರ್ಗದ 46,545 ಜನರಿಗೆ 967 ಕೋಟಿ ರೂ., ಒಟ್ಟು 1,17,591 ಮಹಿಳೆಯರಿಗೆ 1,747 ಕೋಟಿ ರೂ. ಸಾಲ ನೀಡಲಾಗಿದೆ. ಈ ವರ್ಷದ ಒಟ್ಟು 3,771 ವಿದ್ಯಾರ್ಥಿಗಳು 62.85 ಕೋಟಿ ರೂ.ವಿದ್ಯಾಸಾಲ ಪಡೆದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 34,756 ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 302 ಕೋಟಿ ರೂ. ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಪ್ರಧಾನಮಂತ್ರಿ ಜೀವನಜ್ಯೋತಿ ವಿಮೆಯಡಿ ಯಲ್ಲಿ 101,250 ಗ್ರಾಹಕರನ್ನು ಹಾಗೂ ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ 6,013 ಜನರನ್ನು ಈಗಾಗಲೇ ನೋಂದಣಿ ಮಾಡಲಾಗಿದೆ ಎಂದು ಪಳಿನಿಸ್ವಾಮಿ ತಿಳಿಸಿದರು.
ನಬಾರ್ಡ್ನ ಸಹಾಯಕ ಮಹಾಪ್ರಬಂಧಕ ಪ್ರಸಾದ್ ರಾವ್, ಜಿಲ್ಲಾ ಮುಂಗಡ ಯೋಜನೆಯ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದರು. ಭಾರತೀಯ ರಿಸರ್ವ್ ಬ್ಯಾಂಕ್ನ ಸಹಾಯಕ ಪ್ರಬಂಧಕ ಲಕ್ಷ್ಮೀಪತಿ ಉಪಸ್ಥಿತರಿದ್ದರು. ಲೀಡ್ ಬ್ಯಾಂಕ್ ಮುಖ್ಯ ಪ್ರಬಂಧಕ ಸುಬ್ಬರಾವ್ ಸ್ವಾಗತಿಸಿ, ವಂದಿಸಿದರು.