ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಘಟಕದ ಮಹಾಸಭೆ
ಮೂಡುಬಿದಿರೆ, ಮಾ.29: ಶಿಕ್ಷಕ ವೃತ್ತಿ ಶ್ರೇಷ್ಠವಾದ ವೃತ್ತಿಯಾಗಿದೆ. ಶಿಕ್ಷಕ ಜ್ಞಾನದ ಬೆಳಕನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಜಗತ್ತನ್ನು ಬೆಳಗುತ್ತಿದ್ದಾನೆ. ಆದರೆ ನಿಸ್ವಾರ್ಥವಾಗಿ, ಪ್ರಾಮಾಣಿಕ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದ ಪ್ರೌಢಶಾಲಾ ಸಹಶಿಕ್ಷಕರು ಹತ್ತಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ವೇತನ ತಾರತಮ್ಯ, 400 ರೂ. ವಿಶೇಷ ಭತ್ತೆ, 1994ರ ಸ್ಟೆಪ್ಅಪ್ ಸಮಸ್ಯೆ, ದೋಷಪೂರಿತ ವರ್ಗಾವಣಾ ನಿಯಮ, ಆರೋಗ್ಯ ಸಂಜೀವಿನಿ, ಹೊಸ ಪಿಂಚಣಿ ವ್ಯವಸ್ಥೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವುಗಳ ವಿರುದ್ಧ ಶಿಕ್ಷಕರು ಸಂಘಟಿತ ಹೋರಾಟ ನಡೆಸಿದರೆ ಯಶಸ್ಸು ಖಚಿತ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ರಾಮಕೃಷ್ಣ ಶಿರೂರು ಹೇಳಿದ್ದಾರೆ. ಮೂಡುಬಿದಿರೆಯಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಘಟಕದ ಮಹಾಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಸಂಘದ ತಾಲೂಕು ಅಧ್ಯಕ್ಷ ವಸಂತ ಕಲ್ಲಮುಂಡ್ಕೂರು ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಉಪಾಧ್ಯಕ್ಷ ದೇವದಾಸ ಕಿಣಿ, ಶಕುಂತಳಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕರುಣಾಕರ ಮಾತನಾಡಿದರು. ಕಾರ್ಯದರ್ಶಿ ಮಹಾದೇವ ಸ್ವಾಗತಿ ಸಿದರು. ಕೋಶಾಧಿಕಾರಿ ಬಾಲಕೃಷ್ಣ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. ಸಂಘಟನಾ ಕಾರ್ಯದರ್ಶಿ ಬಸವರಾಜ ನಾಶಿ ವಂದಿಸಿದರು.