ಉಡುಪಿ -ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಮರಳು ನೀತಿ ಗೊಂದಲ ಪರಿಹರಿಸಲು ಆಗ್ರಹ
ಮಂಗಳೂರು, ಮಾ. 30: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಮರಳು ನೀತಿ ಗೊಂದಲ ಪರಿಹರಿಸಲು ಆಗ್ರಹಿಸಿ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯಕುಲಕರ್ಣಿಯವರಿಗೆ ರಾಜ್ಯ ಬಿ.ಜೆ.ಪಿ ಹಿಂದುಳಿದ ವರ್ಗಗಳ ಮೋರ್ಚಾಅಧ್ಯಕ್ಷ ಹಾಗೂ ಶಾಸಕ ಕೋಟಾ ಶ್ರೀನಿವಾಸ ಪೂಜಾರಿ ಮನವಿ ಸಲ್ಲಿಸಿದ್ದಾರೆ.
ವಿಧಾನಸೌಧದಲ್ಲಿ ಮನವಿ ಸಲ್ಲಿಸಿದ ಅವರು, ಜಿಲ್ಲೆಯ ಮರಳಿನ ಗೊಂದಲ ನಿವಾರಣೆಯಾಗದಿದ್ದರೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದು, ಮನವಿ ಸ್ವೀಕರಿಸಿದ ಸಚಿವ ವಿನಯಕುಲಕರ್ಣಿ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಕಳೆದ ಜನವರಿ 22ನೇ ತಾರೀಖಿಂದ ಉಡುಪಿ ಜಿಲ್ಲೆಯ ಸಿಆರ್ಝಡ್ನಿಂದ ಬೊಗಸೆ ಮರಳು ತೆಗೆಯಲು ಅವಕಾಶವಿಲ್ಲ. ಒಳನಾಡು ಮರಳುಗಾರಿಕೆಯ ಹೊಣೆಇರುವ ಲೋಕೋಪಯೋಗಿ ಇಲಾಖೆ ಟೆಂಡರ್ ಹೆಸರಿನಲ್ಲಿ ಮತ್ತೊಂದು ಗೊಂದಲ ಉಂಟುಮಾಡಿದ್ದುಜಿಲ್ಲೆಯಲ್ಲಿ ಅಭಿವೃದ್ಧಿಕೆಲಸಗಳಂತೂ ಸಂಪೂರ್ಣ ಸ್ಥಗಿತವಾಗಿದೆ. ಮಳೆಗಾಲ ಸಮೀಪವಾಗುತ್ತಿದ್ದು, ರಸ್ತೆಗಳ ಕೆಲಸವಂತೂ ಮರಳಿಲ್ಲದೇ ನಿಂತುಹೋಗಿದೆ. ಕಾಳಸಂತೆಯಲ್ಲಿ ಮರಳು ಮಾರಾಟವಾಗುತ್ತಿರುವುದರಿಂದ ಬಡವರ ಮನೆಗೆ ಸರಕಾರಕೊಡುವ ಹಣಒಂದು ಲೋಡು ಮರಳು ಖರೀದಿಸಲು ಸಾಕಾಗುತ್ತಿಲ್ಲ. ಸರಕಾರ ಮಧ್ಯ ಪ್ರವೇಶಿಸಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.